ಜೂನ್ 4 ಅಥವಾ 5 ರಂದು ಸಂಪುಟ ವಿಸ್ತರಣೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಜೂನ್ 1: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕಸರತ್ತು ಕೊನೆಗೂ ಅಂತಿಮ ಘಟ್ಟಕ್ಕೆ ಬಂದಿರುವಂತೆ ಕಾಣಿಸುತ್ತಿದೆ. ಇಂದು ಸಂಜೆ 4.30ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಸಂಪುಟ ವಿಸ್ತರಣೆಯನ್ನು ಅಧಿಕೃತವಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಿದ್ದೇವೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
"ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ದೂರವಾಣಿ ಸಂಭಾಷಣೆ ನಡೆಸಲಿದ್ದು ನಂತರ ಎಲ್ಲವೂ ಅಂತಿಮವಾಗಲಿದೆ," ಎಂದು ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಹೇಳಿದ್ದರು.
ಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿ
ಇದಾದ ಬೆನ್ನಿಗೆ ಕೆ.ಸಿ.ವೇಣುಗೋಪಾಲ್ ಅವರು ದೇವೇಗೌಡರನ್ನು ಭೇಟಿಯಾಗಿದ್ದು, "ಕಳೆದ ನಾಲ್ಕು ದಿನಗಳಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಎಲ್ಲವೂ ಸುಸೂತ್ರವಾಗಿ ನಡೆದಿದೆ. ಇಂದು ಸಂಜೆ 4.30ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಿದ್ದೇವೆ," ಎಂದಿದ್ದಾರೆ.
ಸಮನ್ವಯ ಸಮಿತಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎಲ್ಲವೂ ಅಂತಿಮವಾಗಿದೆ. ನಿನ್ನೆ ರಾಹುಲ್ ಗಾಂಧಿಯವರ ಜೊತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಫೋನ್ ನಲ್ಲಿ ಮಾತನಾಡಿದ್ದಾರೆ ಎಂದು ಡ್ಯಾನಿಷ್ ಅಲಿ ವಿವರ ನೀಡಿದ್ದಾರೆ.
"ಖಾತೆ ಹಂಚಿಕೆ ಸಂಬಂಧ ಎರಡೂ ಪಕ್ಷಗಳ ನಾಯಕರು (ಕಾಂಗ್ರೆಸ್ ಮತ್ತು ಜೆಡಿಎಸ್) ಎಲ್ಲದಕ್ಕೂ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಕೆಲವು ಸಲಹೆಗಳನ್ನು ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಕೊಂಡಿದ್ದಾರೆ. ಯಾವೆಲ್ಲಾ ಖಾತೆಗಳಿವೆಯೋ ಅವನ್ನೆಲ್ಲಾ ನಾವು ಸಮಾನವಾಗಿ ಹಂಚಿಕೊಂಡಿದ್ದೇವೆ," ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ದೇವೇಗೌಡರನ್ನು ವೇಣುಗೋಪಾಲ್ ಭೇಟಿಯಾದ ನಂತರ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ರಾಜ್ಯಪಾಲರು ಭೇಟಿಗೆ 1 ಗಂಟೆಗೆ ಸಮಯ ನೀಡಿದ್ದಾರೆ. ನಾನು ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರಾಜ್ಯಪಾಲರ ಜೊತೆಗೆ ಮಾತನ್ನಾಡಿ ಪ್ರಮಾಣ ವಚನಕ್ಕೆ ಸಮಯ ನಿಗದಿ ಮಾಡಬೇಕಿದೆ. ಭಾನುವಾರ ಸಂಪುಟ ವಿಸ್ತರಣೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅವರು ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ದೆಹಲಿಗೆ ತೆರಳಲಿದ್ದಾರೆ. ನಂತರ ಜೂನ್ 4 ಅಥವಾ 5ರಂದು ಸಂಪುಟ ವಿಸ್ತರಣೆ ಮಾಡಲಿದ್ದೇವೆ. ಜೂನ್ 5ರಂದು ಬೆಳಿಗ್ಗೆ ರಾಜ್ಯಪಾಲರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ," ಎಂದಿದ್ದಾರೆ.