ಸಂಪುಟ ವಿಸ್ತರಣೆಗೆ ಮತ್ತೆದಿನ ನಿಗದಿ, ಮತ್ತದೇ ಗಣೇಶನ ಮದುವೆ ಗ್ಯಾರಂಟಿ?
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಂಪುಟ ವಿಸ್ತರಣೆಗೆ ಅದೆಷ್ಟೋ ದಿನ ನಿಗದಿಯಾಗಿ, ಆಕಾಂಕ್ಷಿಗಳ ಮೂಗಿಗೆ ತುಪ್ಪು ಸುರಿಯುವ ಕೆಲಸ ನಡೆಯುತ್ತಲೇ ಬರುತ್ತಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಕೂಗು ಜಾಸ್ತಿಯಾದಾಗ, (ಆಡುಭಾಷೆಯಲ್ಲಿ ಹೇಳುವುದಾದರೆ), ಏನೋ ಒಂದು ಡೇಟ್ ಕೊಟ್ಟು ಅವರನ್ನು ಸಾಗಹಾಕಲಾಗುತ್ತಿದೆ.
ಈಗ, ಮತ್ತೆ ಇನ್ನೊಂದು ತಾರೀಕು ನಿಗದಿಯಾಗಿದೆ, ಅದು ಡಿಸೆಂಬರ್ 22. ಬೆಳಗಾವಿ ಅಧಿವೇಶನ ಮುಗಿದ ಕೂಡಲೇ, ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಮನ್ವಯ ಸಮಿತಿಯ ಅಧ್ಯಕ್ಷರಾದ, ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ: ಸಮನ್ವಯ ಸಮಿತಿ ನಿರ್ಣಯ
ಅಂದರೆ, ಸಚಿವ ಸ್ಥಾನದ ಆಕಾಂಕ್ಷಿಗಳು, ತಮ್ಮ ಗೂಟದ ಕಾರಿನ ಕನಸಿಗೆ ಇನ್ನೂ ಎರಡು ವಾರದ ಮೇಲೆ ಜಾತಕ ಪಕ್ಷಿಗಳಂತೆ ಕಾಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ, ಸಮ್ಮಿಶ್ರ ಸರಕಾರದ ರಾಜಕೀಯ ಅನುಭವವನ್ನು ಪಕ್ಕಾ ಅರಿತಿರುವ ಆಕಾಂಕ್ಷಿಗಳು, ಡಿಸೆಂಬರ್ 22ಕ್ಕೂ ವಿಸ್ತರಣೆಯಾಗುವುದು ಡೌಟು ಎನ್ನುವ ನಿಲುವನ್ನು ಹೊಂದಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.
ಸಮನ್ವಯ ಸಮಿತಿಯ ಸಭೆ, ನಿರ್ಧಾರ ಏನೇ ಇರಲಿ, ಸಮ್ಮಿಶ್ರ ಸರಕಾರದಲ್ಲಿ ಅಂತಿಮವಾಗಿ ನಡೆಯುವುದು ಪದ್ಮನಾಭ ನಗರದ ಹುಕುಂ ಹೊರತು ಇನ್ನೇನು ಅಲ್ಲ ಎನ್ನುವುದನ್ನು ಅರಿತಿರುವ, ಕಾಂಗ್ರೆಸ್ ಆಕಾಂಕ್ಷಿಗಳು ಈಗಾಗಲೇ ಅಪಸ್ವರವನ್ನು ಎತ್ತಿದ್ದಾರೆ.
ಆಪರೇಷನ್ ಕಮಲ ಆಗ ಆಗಿತ್ತು, ಈಗ ಬಿಜೆಪಿಗೆ ಹಗಲು ಕನಸು: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ಅಂದರೆ ನವೆಂಬರ್ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಕ್ಕಳ ದಿನಾಚರಣೆಯ ಪ್ರಯುಕ್ತ ಜವಾಹರಲಾಲ್ ನೆಹರು ಜಯಂತಿ ಕಾರ್ಯಕ್ರಮದ ಬಳಿಕ ಹೇಳಿದ್ದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಬೆಳಗಾವಿ ಅಧಿವೇಶನಕ್ಕೆ ಮುನ್ನ ಡಿಸೆಂಬರ್ ಎಂಟರಂದು ನಡೆಯಲಿರುವ ಸಿಎಲ್ಪಿ ಮೀಟಿಂಗ್ ಅನ್ನು, ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ, ಇದಕ್ಕೆ ಕಾರಣ ಅತೃಪ್ತಿ ಸ್ಫೋಟಗೊಳ್ಳುವ ಭಯ. ಡಿಸೆಂಬರ್ ಹತ್ತರಿಂದ 22ರ ವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಹಾಗಾಗಿ, ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಎನ್ನುವ ಸ್ಪಷ್ಟನೆಯೋ, ಸಬೂಬು ಅನ್ನು ಸಮನ್ವಯ ಸಮಿತಿ ನೀಡಿದೆ.
ಧನುರ್ಮಾಸದಲ್ಲಿ ಒಳ್ಳೆಯ ಕೆಲಸವನ್ನು ಮಾಡುವ ಪದ್ದತಿಯಿಲ್ಲ
ಸಮನ್ವಯ ಸಮಿತಿ ನಿಗದಿ ಪಡಿಸಿರುವ ಡಿಸೆಂಬರ್ 22, ಹೇಳಿ ಕೇಳಿ ಧನುರ್ಮಾಸ. ಸಮನ್ವಯ ಸಮಿತಿಯ ಅಧ್ಯಕ್ಷರೇನೋ ಇದನ್ನೆಲ್ಲಾ ನಂಬುವುದಿಲ್ಲ. ಆದರೆ, ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ರೇವಣ್ಣನವರು, ಧನುರ್ಮಾಸದಲ್ಲಿ ಒಳ್ಳೆಯ ಕೆಲಸವನ್ನು ಮಾಡುವ ಪರಿಪಾಠವಿಲ್ಲ ಎನ್ನುವುದನ್ನು ನಂಬದೇ ಇರುತ್ತಾರಾ?
ಸಂಪುಟ ವಿಸ್ತರಣೆ : ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನವಿಲ್ಲ?
ಅಧಿವೇಶನದಲ್ಲಿ ಮುಜುಗರ ಎದುರಿಸಬೇಕಾಗಿ ಬರಬಹುದು ಎನ್ನುವ ಲೆಕ್ಕಾಚಾರ
ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯಲು, ಕೆಲವೊಂದು ಬಿಲ್ ಪಾಸ್ ಮಾಡಲು ಡಿಸೆಂಬರ್ 22ರ ದಿನ ಘೋಷಣೆ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೂ ಮುನ್ನ ಸಂಪುಟ ವಿಸ್ತರಣೆ ನಡೆದರೆ, ಅತೃಪ್ತರ ಕೂಗು ಹೆಚ್ಚಾಗಬಹುದು, ಅಧಿವೇಶನದಲ್ಲಿ ಮುಜುಗರ ಎದುರಿಸಬೇಕಾಗಿ ಬರಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.
ಕಾಂಗ್ರೆಸ್ಸಿನಿಂದ ಇಪ್ಪತ್ತು, ಜೆಡಿಎಸ್ ನಿಂದ ಹತ್ತು ಶಾಸಕರು
ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ, ಕಾಂಗ್ರೆಸ್ಸಿನಿಂದ ಇಪ್ಪತ್ತು, ಜೆಡಿಎಸ್ ನಿಂದ ಹತ್ತು ಶಾಸಕರಿಗೆ ನಿಗಮ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇರುವುದರಿಂದ, ಸದ್ಯದ ಮಟ್ಟಿಗೆ ಬಚಾವ್ ಆಗಲು, ಡಿಸೆಂಬರ್ 22ರ ದಿನ ಪ್ರಕಟಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ! ಏನಿದರ ಮರ್ಮ?
ಸಂಕ್ರಾಂತಿ, ಅದಾದ ನಂತರ ಜನವರಿಯಲ್ಲಿ ಅಧಿವೇಶನ, ನಂತರ ಬಜೆಟ್
ಅಧಿವೇಶನ ಮುಗಿದ ನಂತರ, ಧನುರ್ಮಾಸ, ಅದಾದ ನಂತರ ಸಂಕ್ರಾಂತಿ, ಅದಾದ ನಂತರ ಜನವರಿಯಲ್ಲಿ ಅಧಿವೇಶನ, ನಂತರ ಬಜೆಟ್ ತಯಾರಿ ಎನ್ನುವ ಕಾರಣಗಳನ್ನು ನೀಡಿ, ಕೊನೆಗೆ ಲೋಕಸಭಾ ಚುನಾವಣೆ ಎಂದು ಇನ್ನೊಂದು ಕಾರಣ ಕೊಟ್ಟು, ಮುಂದಿನ ಕನಿಷ್ಠ ನಾಲ್ಕೈದು ತಿಂಗಳು ಸಂಪುಟ ವಿಸ್ತರಣೆಯ ಕಣ್ಣುಮುಚ್ಚಾಲೆಯನ್ನು ಮುಂದುವರಿಸಲಿದ್ದಾರಾ ಎನ್ನುವ ಸಂಶಯ, ಜನರಿಗೇ ಕಾಡುತ್ತಿರ ಬೇಕಾದರೆ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಡದೇ ಇರುತ್ತಾ?