ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಕಾಂಗ್ರೆಸ್ ಶಾಸಕರ ಪಟ್ಟಿ
Recommended Video
ಬೆಂಗಳೂರು, ಡಿಸೆಂಬರ್ 22: ಬಹು ಕಾಲದಿಂದ ಮುಂದೂಡುತ್ತಾ ಬರುತ್ತಿದ್ದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಇಂದು ಸಂಭವಿಸುತ್ತಿದೆ. ಎಂಟು ಜನ ಶಾಸಕರು ಇಂದು ಮಂತ್ರಿಗಳಾಗಿ ಬಡ್ತಿ ಪಡೆಯಲಿದ್ದಾರೆ.
ಕಾಂಗ್ರೆಸ್ ಬಳಿ ಆರು ಸಚಿವ ಸ್ಥಾನಗಳಿದ್ದವು, ಆದರೆ ಆಕಾಂಕ್ಷಿಗಳು ಹೆಚ್ಚಿದ್ದರು ಹಾಗಾಗಿ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ
ಅರಣ್ಯ ಖಾತೆ ಸಚಿವ ಆರ್.ಶಂಕರ್ ಮತ್ತು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡಿದ್ದಕ್ಕೆ ಇಬ್ಬರೂ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ನಡೆ ಏನು ಎಂಬುದು ಕಾದು ನೋಡಬೇಕಿದೆ.
ಇಂದು ಪ್ರಮಾಣವಚನ ನಡೆಯೋದು ಅನುಮಾನ: ಬಿಎಸ್ ವೈ
ಕುಮಾರಸ್ವಾಮಿ ಸಂಪುಟ ಸೇರುತ್ತಿರುವ ಕಾಂಗ್ರೆಸ್ ಪಕ್ಷದ ಹೊಸ ಸಚಿವರ ಪಟ್ಟಿ ಇಲ್ಲಿದೆ ನೋಡಿ... ಈ ಪಟ್ಟಿ ಬಹುತೇಕ ಅಂತಿಮಪಟ್ಟಿಯಾಗಿದ್ದು, ಸಚಿವರುಗಳು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಅಣ್ಣನ ಸ್ಥಾನ ತಮ್ಮನಿಗೆ ಕೊಟ್ಟ ಕಾಂಗ್ರೆಸ್
ರಮೇಶ್ ಜಾರಕಿಹೊಳಿ ಅವರ ಸಹೋದರ ಸತೀಶ ಜಾರಕಿಹೊಳಿ ಅವರು ಸಂಪುಟ ಸೇರುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕೈಬಿಟ್ಟು ಅದೇ ಸ್ಥಾನವನ್ನು ಸಹೋದರನಿಗೆ ನೀಡಲಾಗಿದೆ. ಸತೀಶ ಜಾರಕಿಹೊಳಿ ಅವರು ಕಳೆದ ಬಾರಿ ಸಚಿವರಾಗಿದ್ದರು, ಈ ಬಾರಿ ಆರಂಭದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಭಾರಿ ಬೇಸರ ವ್ಯಕ್ತಪಡಿಸಿದ್ದರು.
ರಾಮಲಿಂಗಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಸೌಮ್ಯ ರೆಡ್ಡಿ ಅಸಮಾಧಾನ
ಕೊನೆಗೂ ಎಂಟಿಬಿಗೆ ಸಚಿವ ಸ್ಥಾನ
ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಅವರಿಗೆ ಸಚಿವ ಸ್ಥಾನ ದೊರೆತಿದೆ. ಅವರು ಮೂರು ಬಾರಿ ಹೊಸಕೋಟೆಯಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಕಳೆದ ಬಾರಿಯೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು ಆದರೆ ದೊರೆತಿರಲಿಲ್ಲ. ಈ ಬಾರಿ ಸಹ ಆರಂಭದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಈಗ ಅಂತಿಮವಾಗಿ ಅವರಿಗೆ ಸಚಿವ ಸ್ಥಾನ ದೊರೆತಿದೆ.
ಸಂಪುಟ ವಿಸ್ತರಣೆ: ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನ ಯಾರಿಗೆ?
ಪರಮೇಶ್ವರ ನಾಯಕ್ಗೆ ಮತ್ತೆ ದೊರೆತ ಅವಕಾಶ
ಕಳೆದ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಪಿಟಿ ಪರಮೇಶ್ವರ್ ನಾಯಕ್ ಅವರಿಗೆ ಮತ್ತೆ ಈ ಬಾರಿ ಸಂಪುಟದಲ್ಲಿ ಸ್ಥಾನ ಕೊಡಲಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲೇನೂ ಇರಲಿಲ್ಲ ಆದರೂ ಸಹ ಅವರಿಗೆ ಅವಕಾಶ ಕೊಡಲಾಗಿದೆ. ಹಡಗಲಿ ಶಾಸಕರಾಗಿರುವ ಪರಮೇಶ್ವರ ನಾಯಕ್ ಅವರು ಈ ಹಿಂದೆ ಡಿವೈಎಸ್ಪಿ ಆಗಿದ್ದ ಅನುಪಮಾ ಶಣೈ ರಾಜೀನಾಮೆ ಪ್ರಕರಣದಲ್ಲಿ ಭಾಗಿಯಾಗಿದ್ದರು.
ತಿಮ್ಮಾಪುರಗೆ ಬಯಸದೇ ಬಂದ ಭಾಗ್ಯ?
ಮೇಲ್ಮನೆ ಸದಸ್ಯರಾದ ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ದೊರೆತಿದೆ. ಇದು ಅವರಿಗೆ ಬಯಸದೇ ಬಂದ ಭಾಗ್ಯ. ಅವರು ಸಚಿವ ಸ್ಥಾನದ ರೇಸಿನಲ್ಲಿ ಇರಲಿಲ್ಲ ಆದರೆ ಜಾತಿ ಆಧಾರಿತ ಆದ್ಯತೆಯಲ್ಲಿ ಎಡಗೈ ಗುಂಪಿಗೆ ಸೇರಿದ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ತಿಮ್ಮಾಪುರ ಅವರು ಈ ಹಿಂದೆ ಅಬಕಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ತುಕಾರಾಂಗೆ ಒಲಿದ ಅದೃಷ್ಟ
ಸಂಡೂರು ಕ್ಷೇತ್ರದ ಶಾಸಕ ಇ.ತುಕಾರಾಂ ರಮೇಶ್ ಜಾರಕಿಹೊಳಿ ಬೆಂಬಲಿಗರಾಗಿದ್ದವು. ರಮೇಶ್ ಗೆ ಸ್ಥಾನ ತಪ್ಪಿಸಿ ತುಕಾರಾಂ ಗೆ ನೀಡಿ ಕಾಂಗ್ರೆಸ್ ದಾಳ ಉರುಳಿಸಿದೆ. ವಾಲ್ಮಿಕಿ ಸಮುದಾಯದ ತುಕಾರಾಂ ಅವರಿಗೆ ಅವಕಾಶ ನೀಡಿ ಬೆಳಗಾವಿ ಅಸಮಾಧಾನವನ್ನು ಶಮನ ಮಾಡುವ ಯತ್ನವನ್ನೂ ಮಾಡಿದೆ. ತುಕಾರಾಂ ಮೊದಲ ಬಾರಿ ಸಚಿವರಾಗಿದ್ದಾರೆ. ಇದೇ ಬಳ್ಳಾರಿ ಜಿಲ್ಲೆಯ ಆನಂದ್ ಸಿಂಗ್, ನಾಗೇಂದ್ರ ಅವರುಗಳು ಸಹ ಸಚಿವ ಸ್ಥಾನದ ರೇಸಿನಲ್ಲಿದ್ದರು ಆದರೆ ಅವರ ಬದಲಿಗೆ ತುಕಾರಾಂ ಗೆ ಅದೃಷ್ಟ ಒಲಿದಿದೆ.
ಉತ್ತರ ಕರ್ನಾಟಕದ ಮುಸ್ಲಿಂ ಶಾಸಕರಿಗೆ ಮಣೆ
ಬೀದರ್ ಕ್ಷೇತ್ರದ ಶಾಸಕ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಅವರ ಹೆಸರೂ ಸಹ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲಿನಲ್ಲಿರಲಿಲ್ಲ. ಆದರೆ ಈಶ್ವರ್ ಖಂಡ್ರೆ ಅವರ ಮಧ್ಯಸ್ಥಿಕೆಯಿಂದಾಗಿ ಅವರಿಗೆ ಅವಕಾಶ ದೊರೆತಿದೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಮುಸ್ಲಿಂ ಶಾಸಕರಿಗೆ ಆದ್ಯತೆ ನೀಡುತ್ತಿಲ್ಲವೆಂದು ಮುಸ್ಲಿಂ ಶಾಸಕರ ಕ್ಷೇತ್ರಗಳ ಮ್ಯಾಪ್ ಹಿಡಿದು ಅಡ್ಡಾಡುತ್ತಿದ್ದ ಅವರ ಶ್ರಮಕ್ಕೆ ಕೊನೆಗೂ ಬೆಲೆ ದೊರೆತಿದೆ. ಯು.ಟಿ.ಖಾದರ್, ಜಮೀರ್ ಅಹ್ಮದ್ ನಂತರ ಸಂಪುಟ ಸೇರುವ ಮೂರನೇ ಮುಸ್ಲಿಂ ರಹೀಂ ಖಾನ್ ಆಗಲಿದ್ದಾರೆ.
ಕುರುಬ ಸಮುದಾಯದ ಸಿ.ಎಸ್.ಶಿವಳ್ಳಿಗೆ ಸ್ಥಾನ
ಕುಂದಗೋಳ ಕ್ಷೇತ್ರದ ಶಾಸಕ ಸಿ.ಎಸ್.ಶಿವಳ್ಳಿ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರೆತಿದೆ. ಅವರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿತ್ತು. ಈ ಬಾರಿ ಅವರು ಆರಂಭದಿಂದಲೂ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು. ಕುರುಬ ಸಮುದಾಯದ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪುವ ಅಪಾಯ ಇತ್ತು. ಆದರೆ ಅಂತಿಮವಾಗಿ ಅವರಿಗೆ ಸಚಿವ ಸ್ಥಾನ ದೊರೆತಿದೆ. ಆ ಮೂಲಕ ಈ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಬ್ಬರು ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ದೊರೆತಂದಾಗಿದೆ. ಹೊಸಕೋಟೆಯ ಎಂ.ಟಿ.ಬಿ ನಾಗರಾಜು ಸಹ ಕುರುಬ ಸಮುದಾಯದವರೇ ಆಗಿದ್ದಾರೆ.
ಎಂಬಿ.ಪಾಟೀಲ್ಗೆ ದೊರಕಿದ ಅವಕಾಶ
ಎಂಬಿ.ಪಾಟೀಲ್ ಅವರಿಗೆ ಕೊನೆಗೂ ಸಚಿವ ಸ್ಥಾನ ದೊರತಿದೆ. ಎಂಬಿ.ಪಾಟೀಲ್ ಅವರು ಕಳೆದ ಬಾರಿ ಸಚಿವರಾಗಿದ್ದರು. ಆದರೆ ಈ ಬಾರಿ ಮೊದಲ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿತ್ತು. ಆಗ ಅವರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು ಆದರೆ ಈಗ ಅವರಿಗೆ ಅವಕಾಶ ನೀಡಲಾಗಿದೆ.