ಬಿಜೆಪಿಯಲ್ಲಿ ಮೂಲ-ವಲಸಿಗರ ಕಾದಾಟ; ಸಿಎಂ ಯಡಿಯೂರಪ್ಪ ಪರದಾಟ!
ಬೆಂಗಳೂರು, ನ. 23: ಉಪ ಚುನಾವಣೆಯ ಭರ್ಜರಿ ಜಯದ ಬಳಿಕವೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೈಕಮಾಂಡ್ ಅನುಮತಿ ಪಡೆಯುವಲ್ಲಿ ಹಿನ್ನಡೆ ಆಗುತ್ತಿದೆ. ಇದಕ್ಕೆ ಕಾರಣವಾಗಿರುವುದು, ಮೂಲ ಹಾಗೂ ವಲಸೆ ಬಿಜೆಪಿ ನಾಯಕರ ಮಧ್ಯದ ಕಾದಾಟ ಎನ್ನಲಾಗಿದೆ. ಇದಕ್ಕೆ ಪೂರಕವಾದಂತಹ ಬೆಳಣಿಗೆಗಳು ಬಿಜೆಪಿಯಲ್ಲಿ ಬಹಿರಂಗವಾಗಿಯೆ ನಡೆಯುತ್ತಿವೆ.
ದಶಕಗಳ ಕಾಲ ಪಕ್ಷಕ್ಕಾಗಿ ದುಡಿದರೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಮೂಲ ಬಿಜೆಪಿ ನಾಯಕರಲ್ಲಿ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೊಂದೆಡೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸಂಪುಟ ವಿಸ್ತರಣೆ/ಪುನಾರಚನೆ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿ ಮಾಡಿದ್ದಾರೆ. ಇದು ಬಿಜೆಪಿಯಲ್ಲಿನ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಗಿದೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಯ ಸುದ್ದಿಯೇ ಇಲ್ಲ: ರಾಜಾಹುಲಿ ಬಿಎಸ್ವೈಗೆ ಆಗುತ್ತಿರುವ ಹಿನ್ನಡೆಗೆ ಇದಾ ಕಾರಣ?
ಮಹಾರಾಷ್ಟ್ರ ರಾಜಕೀಯದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್ ಮೇಲೆ ಪ್ರಭಾವ ಬೀರುವಂತಾಗಿರುವುದು ಮೂಲ ಬಿಜೆಪಿ ನಾಯಕರನ್ನು ಆತಂಕಕ್ಕೀಡು ಮಾಡಿದೆ. ದಿನದಿಂದ ದಿನಕ್ಕೆ ಮೂಲ ಬಿಜೆಪಿಗರ ಅಸಮಾಧಾನ ಹೆಚ್ಚಾಗುತ್ತಿದೆ.
ಸಂಪುಟ ವಿಸ್ತರಣೆ ವಿಳಂಬ
ರಾಜ್ಯ ಸಚಿವ ಸಂಪುಟ ಸೇರಲು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದವರು ಹಾಗೂ ಮೂಲ ಬಿಜೆಪಿ ಶಾಸಕರ ಒತ್ತಡ ಯಡಿಯೂರಪ್ಪ ಅವರ ಮೇಲೆ ಹೆಚ್ಚಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕಳೆದ ಆರು ತಿಂಗಳಿನಲ್ಲಿ ಎರಡು ಬಾರಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಅವರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಒಂದಿಲ್ಲೊಂದು ನೆಪ ಹೇಳಿ ಯಡಿಯೂರಪ್ಪ ಅವರನ್ನು ಸಾಗ ಹಾಕುತ್ತಿದ್ದಾರೆ.
ಇದು ಸಂಪುಟ ಸೇರಲು ತವಕಿಸುತ್ತಿರುವವರ ಅಸಮಾಧಾನ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರಯತ್ನಗಳು ನಡೆದಿರುವಾಗಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೊಟ್ಟಿರುವ ಹೇಳಿಕೆ ಮೂಲ ಬಿಜೆಪಿ ನಾಯಕರು ಮತ್ತಷ್ಟು ಕೆರಳುವಂತೆ ಮಾಡಿದೆ. ಅದೇ ಕಾರಣದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದೂ ಹೇಳಲಾಗುತ್ತಿದೆ.
ಅನ್ಯಾಯ ಮಾಡಬೇಡಿ
ಹೈಕಮಾಂಡ್ ಜೊತೆಗಿನ ಭೇಟಿ ಹಾಗೂ ಬಿಜೆಪಿ ಸರ್ಕಾರ ಬರಲು ಕಾರಣರಾದವರ ಕುರಿತು ಜಾರಕಿಹೊಳಿ ಮಾತನಾಡಿದ್ದಾರೆ. ನಾನು ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದು ನಿಜ. ಆದರೆ ಹೈಕಮಾಂಡ್ ಎದುರು ಯಾವುದೇ ಷರತ್ತು ಹಾಕಿಲ್ಲ, ಗಡುವು ಕೊಟ್ಟಿಲ್ಲ. ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸರ್ಕಾರ ರಚನೆಗೆ ಸಹಾಯ ಮಾಡಿದವರಿಗೆ ಕೊಟ್ಟಿದ್ದ ಭರವಸೆಗಳನ್ನು ಸಿಎಂ ಯಡಿಯೂರಪ್ಪ ಈಡೇರಿಸುತ್ತಿದ್ದಾರೆ. ಆದರೂ ಅನ್ಯಾಯ ಮಾಡಬೇಡಿ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಮಂತ್ರಿಸ್ಥಾನ ಕೊಡದಂತೆ ಒತ್ತಾಯ
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಸಂಪುಟ ಸೇರುವ ಬಗ್ಗೆ ಸಾಕಷ್ಟು ಗೊಂದಲಗಳು ಬಿಜೆಪಿಯಲ್ಲಿ ಶುರುವಾಗಿವೆ. ಅವರು ಸಂಪುಟ ಸೇರಬಾರದು ಎಂದು ಶಾಸಕ ರೇಣುಕಾಚಾರ್ಯ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಅವರು ಸಂಪುಟ ಸೇರಲೇಬೇಕು ಎಂಬ ಒತ್ತಡಗಳು ವಲಸೆ ಬಿಜೆಪಿಗರಿಂದ ನೇರವಾಗಿ ಬಿಜೆಪಿ ಹೈಕಮಾಂಡ್ಗೆ ರವಾನೆಯಾಗಿವೆ.
ಈ ಮಧ್ಯೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ಹೈಕಮಾಂಡ್ ಪ್ರಯತ್ನ ಮುಂದುವರೆಸಿದೆ. ಅದಕ್ಕೆ ಸಚಿವ ರಮೇಶ್ ಜಾರಕಿಹೊಳಿ ಅವರು ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಅವರು ಹೈಕಮಾಂಡ್ಗೆ ಹತ್ತಿರವಾಗಿದ್ದಾರೆ. ಯಡಿಯೂರಪ್ಪ ಅವರಿಗೂ ಕಷ್ಟವಾಗಿರುವ ಹೈಕಮಾಂಡ್ ಲಭ್ಯತೆ, ರಮೇಶ್ ಜಾರಕಿಹೊಳಿ ಅವರಿಗೆ ಅತ್ಯಂತ ಸರಳವಾಗಿದೆ.
ಹೀಗಾಗಿ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಎದುರು ಅಹವಾಲು ಇಟ್ಟಿದ್ದಾರೆ. ಮಹಾರಾಷ್ಟ್ರ ರಾಜಕೀಯದ ಹಿನ್ನೆಲೆಯಲ್ಲಿ ಅವರ ಬೇಡಿಕೆಯನ್ನು ಈಡೇರಿಸಲು ಹೈಕಮಾಂಡ್ ಕೂಡ ಸಿದ್ಧವಾಗಿದೆ. ಆದರೆ ಅದಕ್ಕೆ ಮೂಲ ಬಿಜೆಪಿ ಶಾಸಕರ ತೀವ್ರ ವಿರೋಧವಿದೆ ಎನ್ನಲಾಗಿದೆ.
ಯೋಗೇಶ್ವರ್ ಪರ ಇರುವುದು ನನ್ನ ಕರ್ತವ್ಯ
ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಬೇಡ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶಾಸಕರಾದ ರೇಣುಕಾಚಾರ್ಯ, ರಾಜುಗೌಡ ಅವರು ಸಚಿಸಸ್ಥಾನ ಕೊಡ ಬೇಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಯೋಗೇಶ್ವರ್ ಅವರ ಪರವಾಗಿ ಮಾತನಾಡುವುದು ನನ್ನ ಕರ್ತವ್ಯ. ಹೀಗಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಮಾತಾಡಿದ್ದೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಇಂಗಿತ ಹಂಚಿಕೊಂಡಿದ್ದಾರೆ. ಇದು ಮೂಲ ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿವೆ.
Recommended Video
ಸಿಎಂ ಯಡಿಯೂರಪ್ಪ ಪರದಾಟ?
ಮೂಲ-ವಲಸಿಗರ ಮಧ್ಯೆ ಸಿಎಂ ಯಡಿಯೂರಪ್ಪ ಪರದಾಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಒಂದೆಡೆ ದಶಕಗಳಿಂದ ಪಕ್ಷ ಕಟ್ಟಲು ಹೆಗಲು ಕೊಟ್ಟವರು. ಮತ್ತೊಂದೆಡೆ ಮುಖ್ಯಮಂತ್ರಿಯಾಗುವ ಕೊನೆಯ ಅವಕಾಶವನ್ನು ಈಡೇರಿಸಿದವರು. ಯಾರನ್ನೂ ಕಡೆಗಣಿಸುವ ಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಅವರಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಗೊಂದಲಗಳು ಮುಂದುವರೆದಿವೆ. ಈ ಗೊಂದಲ ಹೆಚ್ಚಾದಲ್ಲಿ ಅದು ನೇರವಾಗಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂಬುದಂತು ಸುಳ್ಳಲ್ಲ.