ಸಂಪುಟ ವಿಸ್ತರಣೆ: ಪರಮೇಶ್ವರ್ ಗೆ ಕಾಂಗ್ರೆಸ್ ಕಾರ್ಯಕರ್ತರ 10 ಪ್ರಶ್ನೆಗಳು
ತಮ್ಮದೇ ಪಕ್ಷದ ವರಿಷ್ಠರಿಗೆ ಕಾಂಗ್ರೆಸ್ ಕಾರ್ಯಕರ್ತರು ಕೇಳಿದ ಹತ್ತು ಪ್ರಶ್ನೆ
Recommended Video
ಕುತಂತ್ರದಿಂದ ಹೈಕಮಾಂಡ್ ಗೆ ತಪ್ಪು ಮಾಹಿತಿ ನೀಡಿ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಸ್ಥಾನ ತಪ್ಪಿಸಿದ ಮಹಾನುಭಾವ ನಾಯಕರೆ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಹೀಗೊಂದು ವಾಟ್ಸಾಪ್ ಸಂದೇಶ ವೈರಲ್ ಆಗುತ್ತಿದೆ.
ರಾಮಲಿಂಗಾ ರೆಡ್ಡಿ ಅಭಿಮಾನಿ ಬಳಗದ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ ಭಿತ್ತಿಪತ್ರ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಕರ್ನಾಟಕ ಕಾಂಗ್ರೆಸ್ಸಿನ ಹಿರಿಯ ಮತ್ತು ಅನುಭವಿ ಮುಖಂಡ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ, ಅವರ ಅಭಿಮಾನಿಗಳು, ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು. (ಕುಮಾರಸ್ವಾಮಿ ಸಂಪುಟದ ಒಟ್ಟಾರೆ ಜಾತಿ ಲೆಕ್ಕಾಚಾರ ಹೀಗಿದೆ)
ಜೊತೆಗೆ, ಅವರ ಮಗಳು ಮತ್ತು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ತಮಗೆ ಒದಗಿ ಬಂದಿದ್ದ ಸಂಸದೀಯ ಕಾರ್ಯದರ್ಶಿ ಹುದ್ದೆಗೂ ಒಲ್ಲೆ ಎಂದಿದ್ದರು. 'ಮಾನ್ಯ ರೆಡ್ಡಿಯವರಿಗೆ ಕುತಂತ್ರದಿಂದ ಸಚಿವ ಸ್ಥಾನ ತಪ್ಪಿಸಿದ ಡಾ. ಪರಮೇಶ್ವರ್, ಕೃಷ್ಣ ಭೈರೇಗೌಡ ಮತ್ತು ತಂಡದವರೇ ಈ ಹತ್ತು ಪ್ರಶ್ನೆಗಳಿಗೆ ಉತ್ತರಿಸುತ್ತೀರಾ' ಎನ್ನುವ ಭಿತ್ತಿಪತ್ರದಲ್ಲಿ ಏನೇನು ಬರೆದಿದೆಯೋ, ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ:
1. ಬೆಂಗಳೂರು ಪಕ್ಷ ಸಂಘಟನೆ ನೀವು ಎಂದಾದರೂ ಪ್ರಯತ್ನಿಸಿದ್ದೀರಾ ಅಥವಾ ಕನಿಷ್ಟ ಬೆಂಗಳೂರಿನ ಯಾವ ಜ್ವಲಂತ ಸಮಸ್ಯೆಯನ್ನು ನಿಮ್ಮ ಮುಂದಾಳತ್ವದಲ್ಲಿ ತಾರ್ಕಿಕ ಅಂತ್ಯ ನೀಡಿದ ಯಾವುದಾದರೂ ಉದಾಹರಣೆ ಇದೆಯಾ ? (ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ)
2. ಕಸ ವಿಲೇವಾರಿ ಆಗದೆ ಬೆಂಗಳೂರು ಗಬ್ಬು ನಾರಿದಾಗ, ಮಂಡೂರು ಗ್ರಾಮಸ್ಥರು ಧರಣಿಗೆ ಕೂತಾಗ ಸಿಎಂ ಕೈಚೆಲ್ಲಿದ್ದ ಸಮಸ್ಯೆಯನ್ನು ರಾಮಲಿಂಗಾ ರೆಡ್ಡಿಯವರು ನೇತೃತ್ವ ವಹಿಸಿ ಪರಿಹರಿಸಿದ್ದು ಎಂದು ಪಕ್ಷ ಹೈಕಮಾಂಡ್ ಗೆ ಹೇಳಲು ತಾವು ಮರೆತರೇ?
ಪಕ್ಷದ ಪರ ವಕಾಲತ್ತು ವಹಿಸಿದ್ದ ಏಕೈಕ ನಾಯಕ ರಾಮಲಿಂಗಾ ರೆಡ್ಡಿ
3. ವಿಧಾನಸಭಾ ಚುನಾವಣೆಯ ವೇಳೆ ಮೋದಿ, ಅಮಿತ್ ಶಾ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ತಾವೆಲ್ಲ ಹೆದರಿ ಪಾತಾಳದಲ್ಲಿ ಅಡಗಿದ್ದಿರಿ. ಮೋದಿ, ಅಮಿತ್ ಶಾ ವಿರುದ್ದ ನಿರಂತರ ವಾಗ್ದಾಳಿ ನಡೆಸಿ, ಪಕ್ಷದ ಪರ ವಕಾಲತ್ತು ವಹಿಸಿದ್ದ ಏಕೈಕ ನಾಯಕ ರಾಮಲಿಂಗಾ ರೆಡ್ಡಿ ಎಂದು ಹೈಕಮಾಂಡ್ ಮುಂದೆ ಹೇಳಲು ನಿಮಗೆ ಬಾಯಿ ಬರಲಿಲ್ಲವೇ ?
ಮಂಗಳೂರಿನಲ್ಲಿ ಶರತ್ ಮಡಿವಾಳ ಕೊಲೆ
4. ಮಂಗಳೂರಿನಲ್ಲಿ ಶರತ್ ಮಡಿವಾಳ ಕೊಲೆಯ ಬಳಿಕದ ಕೋಮು ದಳ್ಳುರಿ ಹೊತ್ತಿ ಉರಿದಾಗ ಕೋಮು ದಳ್ಳುರಿ ಪಕ್ಕದ ಜಿಲ್ಲೆಗಳಿಗೆ ಹರಡದಂತೆ ಯಶಸ್ವಿ ಕಾರ್ಯಾಚರಣೆ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಂದು ಹೈಕಮಾಂಡ್ ಮುಂದೆ ಹೇಳಲು ನಿಮಗೆ ಹೆಮ್ಮೆ ಆಗುವುದಿಲ್ಲವೇ ?
5.ಕರ್ನಾಟಕದಲ್ಲಿ 28 ಹಿಂದೂಗಳ ಹತ್ಯೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಘಪರಿವಾರ ಪ್ರಚಾರದಲ್ಲಿ ತೊಡಗಿದಾಗ ಸಂಘ ಪರಿವಾರದಿಂದಲೇ ಹೆಚ್ಚಿನ ಕೊಲೆ ನಡೆದಿದೆ ಎಂದು ಸಾಕ್ಷಿ ಸಹಿತ ಮಂಗಳೂರಿನಲ್ಲಿಯೇ ಸಂಘ ಪರಿವಾರಕ್ಕೆ ಬಹಿಂರಂಗ ಸವಾಲ್ ಎಸೆದ ನಾಯಕ ರಾಮಲಿಂಗಾ ರೆಡ್ಡಿ ಎಂದು ಹೈಕಮಾಂಡ್ ಮುಂದೆ ಹೇಳಲು ನಿಮಗೇಕೆ ಮನಸ್ಸು ಬಂದಿಲ್ಲ ?
ಸಾಕ್ಷಿ ಸಹಿತ ಬಿಜೆಪಿಯನ್ನು ನಗ್ನಗೊಳಿಸಿದ ನಾಯಕ
6. ಕರ್ನಾಟಕದಲ್ಲಿ ಗೋಹತ್ಯೆ ಕುರಿತು ಗಲಭೆ ನಡೆಸಲು ಬಿಜೆಪಿ ಪ್ರಯತ್ನಿಸಿದಾಗ ಮೋದಿ ಸರ್ಕಾರ ವಿಶ್ವಕ್ಕೆ ಭಾರತದ ಮೂಲಕ ಅತೀ ಹೆಚ್ಚಿನ ಗೋ ಮಾಂಸವನ್ನು ರಫ್ತು ಮಾಡುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಕ್ಷಿ ಸಹಿತ ಬಿಜೆಪಿಯನ್ನು ನಗ್ನಗೊಳಿಸಿದ ನಾಯಕ ರಾಮಲಿಂಗಾ ರೆಡ್ಡಿ ಎನ್ನುವುದನ್ನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮರೆತಿದ್ದಾರೆಯೇ ?
ರೈತರ ಆತ್ಮಹತ್ಯೆ
7. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ನಂ1 ಎಂದು ಚುನಾವಣಾ ಸಂಧರ್ಭದಲ್ಲಿ ಅಮಿತ್ ಷಾ ಆರೋಪಕ್ಕೆ ಕೃಷಿ ಸಚಿವರಾಗಿ ಕೃಷ್ಣ ಭೈರೇಗೌಡರೇ ತಾವು ಒಂದಕ್ಷರ ಮಾತಾಡಿಲ್ಲ. ಆದರೆ ಅಮಿತ್ ಶಾ ಆರೋಪಕ್ಕೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಹೆಚ್ಚಿನ ರೈತರ ಆತ್ಮಹತ್ಯೆ ನಡೆದಿರೋದು ಎಂದು ಬಹಿರಂಗ ಚರ್ಚೆ ಸವಾಲು ಎಸೆದು ಅಮಿತ್ ಶಾ ಗೆ ಬಿಸಿ ಮುಟ್ಟಿಸಿದ್ದು ರಾಮಲಿಂಗಾ ರೆಡ್ಡಿ ಎಂಬುವುದನ್ನು ಹೈಕಮಾಂಡ್ ಮುಂದೆ ಹೇಳಲು ನಿಮಗೆ ಮರೆತು ಹೋಯ್ತೇ ?
ಬಿಬಿಎಂಪಿ ಚುನಾವಣೆ
8. ಬಿಬಿಎಂಪಿ ಚುನಾವಣೆ ಹಾಗೂ ಮೇಯರ್ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ ಇಲ್ಲದಿದ್ದರೇ ಬಿಬಿಎಂಪಿಯನ್ನು ಕಾಂಗ್ರೆಸ್ ಪಕ್ಷದ ಕೈವಶ ಮಾಡೋ ತಾಕತ್ತು ನಿಮ್ಮಲಿಲ್ಲ ಎಂದು ಹೈಕಮಾಂಡ್ ಮುಂದೆ ನೀವೇಕೆ ಹೇಳಲಿಲ್ಲ ?
9. ಗೃಹ ಸಚಿವರಾಗಿದ್ದಷ್ಟು ದಿನವೂ ಬಿಜೆಪಿ, ಸಂಘಪರಿವಾರಕ್ಕೆ ಸಿಂಹಸ್ವಪ್ನವಾಗಿ ದಕ್ಷತೆಯಿಂದ ಕೆಲಸ ಮಾಡಿದ ರಾಮಲಿಂಗಾ ರೆಡ್ಡಿಯವರು ಸತತ 7 ಬಾರಿ ಗೆದ್ದು ಪಕ್ಷವನ್ನು ಬಲಪಡಿಸಿದ್ಥು ನಿಮ್ಮ ಗಣನೆಗೆ ಬಂದಿಲ್ಲ ಅಲ್ಲವೇ ?
ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುವ ವಾತಾವರಣ
10. ಬಿಜಿಪಿಯ ಷಡ್ಯಂತ್ರದ ಮಧ್ಯೆಯೂ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುವ ವಾತಾವರಣ ನಿರ್ಮಿಸಿ, ಪಕ್ಷದ ಎಲ್ಲ ಸಮಸ್ಯೆಗೆ ಪರಿಹಾರ ನೀಡುವ ನಾಯಕನ ವಿರುದ್ದ ಹೈಕಮಾಂಡ್ ನಾಯಕರಿಗೆ ಚಾಡಿ ಹೇಳಿ, ತಪ್ಪು ಮಾಹಿತಿ ನೀಡಿ, ಕುತಂತ್ರದ ಮೂಲಕ ಸಚಿವ ಸ್ಥಾನ ತಪ್ಪಿಸಿದ್ದು ನಿಮ್ಮ ನರಿ ಬುದ್ದಿಗೆ ಸಾಕ್ಷಿ ಅಲ್ಲವೇ ?
ರಾಮಲಿಂಗಾರೆಡ್ಡಿಯವರಂತಹ ಮೇರು ವ್ಯಕ್ತಿತ್ವದ ನಾಯರಕರಿಗೆ ಸಚಿವ ಸ್ಥಾನ ತಪ್ಪಿಸಲು ಹೈ ಕಮಾಂಡ್ ನಾಯಕರಿಗೆ ಚಾಡಿ ಹೇಳುವ ನಿಮ್ಮಂತಹ ಕುಬ್ಜ ಮನಸ್ಸಿನ ನಾಯಕರಿಗೆ ನನ್ನ ಧಿಕ್ಕಾರವಿದೆ. ಇಂತಿ,ಮನನೊಂದ ಕಾಂಗ್ರೆಸ್ ಕಾರ್ಯಕರ್ತ.