ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆಗೆ ಸಜ್ಜಾದ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 05: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.
ಯಡಿಯೂರಪ್ಪ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 6 ಸ್ಥಾನಗಳನ್ನಾದರೂ ಗೆಲ್ಲಿಸಿಕೊಳ್ಳಬೇಕು. ಜೊತೆಗೆ ಗೆದ್ದ ಕ್ಷೇತ್ರದ ಶಾಸಕರಿಗೆ ನೀಡಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಇದಲ್ಲದೆ, ಎರಡು ಮೂರು ಎಂಎಲ್ಸಿ ಸ್ಥಾನಗಳನ್ನು ತುಂಬಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ.
ಯಡಿಯೂರಪ್ಪ ಸಂಪುಟದಲ್ಲಿ ಯಾವ ಸಚಿವರಿಗೆ ಯಾವ ಖಾತೆ?
ಡಿಸೆಂಬರ್ 05ರಂದು ಮತದಾನ ನಿಧಾನಗತಿಯಿಂದ ಸಾಗಿದ್ದು, ಡಿಸೆಂಬರ್ 09ರಂದು 15 ಕ್ಷೇತ್ರಗಳ 219 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಉಪ ಚುನಾವಣೆ ಪ್ರಚಾರದ ವೇಳೆ ಎಲ್ಲಾ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಶಾಸಕರಿಗೂ ಸಚಿವ ಸ್ಥಾನದ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದ್ದಾರೆ.
ಆದರೆ, ಸಚಿವ ಸಂಪುಟ ವಿಸ್ತರಣೆ ಮಾಡುವುದಕ್ಕೆ ಹೈಕಮಾಂಡ್ ಅನುಮತಿ, ಸಲಹೆ, ಸೂಚನೆ, ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ, ಸಚಿವ ಸಂಪುಟಕ್ಕೆ ಅನರ್ಹ ಶಾಸಕರಲ್ಲದೆ ಮಿಕ್ಕ ಒಂದಿಬ್ಬರು ಸೇರುವ ಸಾಧ್ಯತೆ ಬಗ್ಗೆಯೂ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ರಂಥ ಹಿರಿಯರಿಗೆ ಅವಕಾಶ ಸಿಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಂಪುಟದಲ್ಲಿ ಎಷ್ಟು ಸ್ಥಾನಗಳು ತುಂಬಬಹುದು?
ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ.
ಹಿರಿಯರಿಗೆ ಆದ್ಯತೆ ಸಿಗುವ ಸಾಧ್ಯತೆ
8 ಬಾರಿ ಶಾಸಕರಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಬಹುಕಾಲದಿಂದ ಸಂಪುಟ ಸೇರಲು ಕಾದಿದ್ದಾರೆ. ಅನೇಕ ಬಾರಿ ಮಂತ್ರಿ ಸ್ಥಾನ ಬಗ್ಗೆ ಬಹಿರಂಗವಾಗಿ ತಮ್ಮ ಆಸೆ ತೋಡಿಕೊಂಡಿದ್ದಾರೆ. ಕತ್ತಿಗೆ ಈ ಬಾರಿ ಸ್ಥಾನ ಕಲ್ಪಿಸದಿದ್ದರೆ ಬಂಡಾಯ ಏಳುವ ಭೀತಿ ಇರುವುದರಿಂದ ಕತ್ತಿಗೆ ಉತ್ತಮ ಸ್ಥಾನ ಸಿಗುವುದು ಖಾತ್ರಿಯಾಗಿದೆ. ಜೊತೆಗೆ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಜೊತೆಗೆ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ಬಾಕಿಯಿದೆ.
ಹಾಲಿ ಸಚಿವ ಸಂಪುಟ ಹೇಗಿದೆ?
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ. ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮುಂದಿನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.
ಯಡಿಯೂರಪ್ಪ ಬಳಿ 20 ಪ್ಲಸ್ ಖಾತೆಗಳಿವೆ
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಬಹುಶಃ ಅತೃಪ್ತರಾಗಿ ಅನರ್ಹರಾಗಿ ಮುಂದೆ ಬಿಜೆಪಿ ಸೇರಿದ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ