ಡಿಕೆ ಶಿವಕುಮಾರ್ಗೆ ಯಾವ ಖಾತೆಯೂ ಇಲ್ಲ, ಉಡುಗೊರೆಯೂ ಇಲ್ಲ?
Recommended Video
ಬೆಂಗಳೂರು, ಜೂನ್ 02 : ಜೆಡಿಎಸ್ ಜೊತೆ ಮೈತ್ರಿ ಸರಕಾರ ರಚಿಸಿ, ರಾಜರಾಜೇಶ್ವರಿ ನಗರದಲ್ಲಿಯೂ ಜಯಭೇರಿ ಬಾರಿಸಿದ ನಂತರ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸುಗಮವಾಗಿದೆ ಎಂದು ಅಂದುಕೊಳ್ಳುವ ಹೊತ್ತಿನಲ್ಲಿ ಧಿಗ್ಗನೆ ಬೆಂಕಿ ಹೊತ್ತಿಕೊಂಡಿದೆ.
ಸಂಪುಟ ರಚನೆ ಮತ್ತು ಖಾತೆ ಹಂಚಿಕೆ ಕುರಿತಂತೆ ಸಣ್ಣನೆ ಅಸಮಾಧಾನದ ಹೊಗೆ ಏಳುತ್ತಿರುವ ಸಮಯದಲ್ಲಿ, ಅದಕ್ಕಿಂತಲೂ ದೊಡ್ಡದಾದ ಸಂಘರ್ಷಕ್ಕೆ ಕರ್ನಾಟಕ ಕಾಂಗ್ರೆಸ್ ಅಣಿಯಾಗಬೇಕಾಗಿದೆ. ಅದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷಗಿರಿಗೆ ಸಂಬಂಧಿಸಿದ್ದು.
ಇಂಧನ ಖಾತೆಗಾಗಿ ರೇವಣ್ಣ-ಡಿಕೆಶಿ ನಡುವೆ ಪೈಪೋಟಿ ಇತ್ತು: ಕುಮಾರಸ್ವಾಮಿ
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ, ಕಳೆದ ಬಾರಿಯ ಕಹಿ ಕರಗುವಂತೆ, ಗೆಲುವಿನ ಸಿಹಿ ಮೆಲ್ಲುತ್ತಿರುವ ಡಾ. ಜಿ ಪರಮೇಶ್ವರ ಅವರು, ಕೆಪಿಸಿಸಿ ಅಧ್ಯಕ್ಷ ಹುದ್ದೆ ತ್ಯಜಿಸಿ ಉಪಮುಖ್ಯಮಂತ್ರಿ ಪದವಿಗೆ ಪಟ್ಟಕ್ಕೇರಿದ್ದಾರೆ. ಅಲ್ಲದೆ, ಕಾಂಗ್ರೆಸ್ ಒಳಹೊರಗಿನ ಅಸಮಾಧಾನವನ್ನು ಹತ್ತಿಕ್ಕುವ ಜವಾಬ್ದಾರಿಯೂ ಅವರ ಮೇಲಿದೆ.
ಎಚ್ಡಿಕೆ ಸರಕಾರದ ಸುಗಮ ಸಂಚಾರಕ್ಕೆ, ಗೌಡ್ರ ಸಮ್ಮುಖದಲ್ಲಿ 6 ಒಪ್ಪಂದಕ್ಕೆ ಸಹಿ
ಕಾಂಗ್ರೆಸ್ಸಿನಲ್ಲಿ ಅತ್ಯಂತ ಮಹತ್ವದ ಹುದ್ದೆಯಾಗಿರುವ ಕೆಪಿಸಿಸಿ ಅಧ್ಯಕ್ಷಗಿರಿಯ ಹೊರೆಯನ್ನು ಯಾರು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂಬ ಬಗ್ಗೆ ಗಮನಿಸಿದಾಗ, ಅಚ್ಚರಿಯೆಂಬಂತೆ ಆರಂಭದಲ್ಲಿ ಭಾರೀ ಘಟಾನುಘಟಿಗಳ ಹೆಸರುಗಳೇನೂ ಕೇಳಿಬಂದಿರಲಿಲ್ಲ. ಇದಕ್ಕೆ ಕೂಡ ಹಲವಾರು ಕಾರಣಗಳಿವೆ.
ಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿ
ಕೆಪಿಸಿಸಿ ಜವಾಬ್ದಾರಿ ಡಿಕೆಶಿಗೆ ಬೇಕಾಗಿಲ್ಲ
ಅಸಲಿಗೆ, ಸದ್ಯಕ್ಕೆ ಸರತಿ ಸಾಲಿನಲ್ಲಿ ಮೊದಲನೆಯವರಾಗಿರುವ, ಕನಕಪುರದ ಶಾಸಕ, ಪ್ರಭಾವಿ ರಾಜಕಾರಣಿ ಡಿ.ಕೆ. ಶಿವಕುಮಾರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜವಾಬ್ದಾರಿ ಬೇಕಾಗೇ ಇರಲಿಲ್ಲ. ಅವರು ಮೊದಲ ಆದ್ಯತೆಯೇ ಸಂಪುಟ ಸೇರುವುದು ಮತ್ತು ಇಂಧನ ಸಚಿವರಾಗಿ ಜವಾಬ್ದಾರಿ ವಹಿಸಿಕೊಳ್ಳುವುದು. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷಗಿರಿ ಜವಾಬ್ದಾರಿಯನ್ನೂ ವಹಿಸಿದರೆ ಅದನ್ನೂ ಹೊರಲು ಸಿದ್ಧ ಎಂಬ ಇಂಗಿತ ಅವರು ವ್ಯಕ್ತಪಡಿಸಿದ್ದರು.
ಛೆ, ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆಶಿಗ್ಯಾಕೆ ಇಂಥ ಸ್ಥಿತಿ?!
ದೇವೇಗೌಡರ ಮನದಲ್ಲೇನಿದೆ ಬಲ್ಲವರಾರು?
ಆದರೆ, ಸಿದ್ದರಾಮಯ್ಯ ಸರಕಾರದಂತೆ ಈ ಬಾರಿ ಕೂಡ ಇಂಧನ ಖಾತೆ ಡಿಕೆ ಶಿವಕುಮಾರ್ ಅವರ ಮುಡಿಗೇ ಬೀಳುತ್ತದೆ ಎಂದು ಊಹಿಸಲಾಗಿತ್ತು. ಆದರೆ, ದೇವೇಗೌಡರ ಮನದಲ್ಲೇನಿದೆ ಬಲ್ಲವರಾರು? ಖಾತೆ ಹಂಚಿಕೆಯಲ್ಲಿ ಪ್ರಮುಖ ಖಾತೆಯಾಗಿರುವ ಇಂಧನ ಕಾಂಗ್ರೆಸ್ ಕೈಯಿಂದ ಜಾರಿ ಜೆಡಿಎಸ್ ಮಡಿಲಿನಲ್ಲಿ ಹಾಕಿಕೊಳ್ಳಲಾಗಿದೆ. ಇದನ್ನು ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಅವರು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರೇವಣ್ಣ ಅವರಿಗೆ ಲೋಕೋಪಯೋಗಿ ಇಲಾಖೆ ವಹಿಸಿಕೊಳ್ಳುತ್ತಾರೆ ಎಂಬ ಮಾತೂ ಕೇಳಿಬರುತ್ತಿದೆ.
ಡಿಕೆಶಿಗೆ ಭಾರೀ ಉಡುಗೊರೆ ಎಂಬ ಗಾಳಿಸುದ್ದಿ
ಡಿಕೆ ಶಿವಕುಮಾರ್ ಮತ್ತು ದೇವೇಗೌಡರ ಫ್ಯಾಮಿಲಿಗೆ ಅಷ್ಟಕ್ಕಷ್ಟೇ ಎಂದು ಮೊದಲಿನಿಂದಲೂ ಗೊತ್ತಿದ್ದ ಸಂಗತಿಯೆ. ಆಪರೇಷನ್ ಕಮಲದಿಂದ ಹಿಡಿದು, ವಿಶ್ವಾಸಮತ ಯಾಚನೆ ಮುಗಿಯುವವರೆಗೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಡಿಕೆ ಶಿವಕುಮಾರ್ ಅವರು ಮುಂಚೂಣಿಯಲ್ಲಿಯೇ ಇದ್ದರು. ಜೊತೆಗೆ ಉಪಮುಖ್ಯಮಂತ್ರಿ ಕನಸನ್ನು ಕೂಡ ಬಿತ್ತಿಕೊಂಡಿದ್ದರು. ಅವರ ಸೇವೆಗೆ ಪ್ರತಿಯಾಗಿ ಕಾಂಗ್ರೆಸ್ ಅಧ್ಯಕ್ಷರು ಡಿಕೆಶಿಗೆ ಭಾರೀ ಉಡುಗೊರೆ ಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರ ಬದಲಾಗಿ ಪರಮೇಶ್ವರ ಅವರು ಬಿಳಿ ದಿರಿಸಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿದೆ.
ಕಾಂಗ್ರೆಸ್ಸಿನ ಆಪದ್ಬಾಂಧವ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್?!
ಡಿಕೆಶಿ ಗಾಯದ ಮೇಲೆ ಬರೆ
ಬುಸುಗುಟ್ಟುತ್ತಲೇ ಇರುವ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರ ಕೋಪ ಶಮನ ಮಾಡಲು, ಅಸಮಾಧಾನವನ್ನು ತಗ್ಗಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಶಮನವಾಗುತ್ತಿಲ್ಲ. ಇದೀಗ ಸಂಪುಟದಿಂದಲೂ ಅವರನ್ನು ದೂರವಿಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ, ಡಿಕೆಶಿ ಅವರ ಪರಮ ವೈರಿಯಾಗಿದ್ದ ರೇವಣ್ಣ ಅವರಿಗೆ ಇಂಧನ ಖಾತೆ ಹೋಗುತ್ತಿರುವುದು ಡಿಕೆಶಿ ಅವರಿಗೆ ನುಂಗಲಾಗದ ತುತ್ತಾಗಿದೆ. ತಮ್ಮ ಅಸಮಾಧಾನವನ್ನು ಡಿಕೆಶಿ ಅವರು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ಸಚಿವ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಪಟ್ಟ?
ದೇಶಪಾಂಡೆ ಅವರೂ ಸಿದ್ಧರಾಗಿದ್ದಾರೆ
ಇದು ಸಾಲದೆಂಬಂತೆ, ಕೆಪಿಸಿಪಿ ಹುದ್ದೆಗೆ ಹಲವಾರು ಹಿರಿಯ ನಾಯಕರ ಹೆಸರುಗಳು ಕೇಳಿಬರುತ್ತಿವೆ. ಅವರಲ್ಲಿ ಪ್ರಮುಖರಾದವರು ಮಾಜಿ ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ, ಸಂಸದ ಕೆಎಚ್ ಮುನಿಯಪ್ಪ ಇತ್ಯಾದಿ ಇತ್ಯಾದಿ. ಕುಮಾರಸ್ವಾಮಿಯಂಥ ಕಿರಿಯ ಸಂಪುಟದಲ್ಲಿ ನನ್ನಂಥ ಹಿರಿಯ ರಾಜಕಾರಣಿ ಏನು ಕೆಲಸ ಮಾಡುವುದು ಎಂದು ದೇಶಪಾಂಡೆ ಅವರು ಸಿಡಿಮಿಡಿಗೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ನನಗೆ ಸಂಪುಟ ಸೇರುವುದು ಬೇಡ, ನನಗೆ ಕೆಪಿಸಿಸಿ ಅಧ್ಯಕ್ಷಗಿರಿ ಬಿಟ್ಟುಕೊಡಿ ಎಂದು ಹೇಳಿದ್ದಾರೆ ಎಂಬ ಮಾತು ಕೂಡ ಕಿವಿಗೆ ಅಪ್ಪಳಿಸುದ್ದಿದೆ.
ಲೋಕಸಭೆ ಚುನಾವಣೆಗೆ ಕಂಟಕವಾಗುವುದೆ?
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಹಿರಿಯ ರಾಜಕಾರಣಿಗಳಿಗಿಂತ ಕಿರಿಯ ರಾಜಕಾರಣಿಗಳಿಗೆ ಅವಕಾಶ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೂಚನೆ ನೀಡಿರುವುದು ಭಾರೀ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಲೋಕಸಭೆಯನ್ನು ಎದುರಿಸಬೇಕು ಎಂದು ಸಂಕಲ್ಪ ಮಾಡಿವೆ. ಆದರೆ, ಈ ನಡುವೆ ಸಂಪುಟ ರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಿತ್ತಿರುವ ಅಸಮಾಧಾನದ ಬೀಜ ಹೆಮ್ಮರವಾದರೆ ಅದು ಮೈತ್ರಿಗೂ ಹೊಡೆತ ನೀಡಬಹುದು ಮತ್ತು ಲೋಕಸಭೆ ಚುನಾವಣೆ ಜಂಟಿ ಹೋರಾಟದ ಕನಸಿಗೂ ಭಂಗ ತರಬಹುದು.