ಸಚಿವ ಸ್ಥಾನ ಕೈತಪ್ಪಿದ ಪ್ರಮುಖ ಶಾಸಕರ ಮುಂದಿನ ನಡೆ ಏನು?
ಬೆಂಗಳೂರು, ಡಿಸೆಂಬರ್ 22: ಕಾಂಗ್ರೆಸ್ ಪಕ್ಷವು ಸಚಿವ ಸಂಪುಟ ವಿಸ್ತರಣೆಗೆ ಪೂರ್ಣ ಅಣಿಯಾಗಿದ್ದು, ಹೊಸದಾಗಿ ಸಂಪುಟ ಸೇರಲಿರುವ ತನ್ನ ಪಕ್ಷದ ಏಳು ಜನ ಶಾಸಕರ ಪಟ್ಟಿಯನ್ನು ತಯಾರಿಸಿದೆ. ಇದರಲ್ಲಿ ಬಹು ಮುಖ್ಯ ಶಾಸಕರುಗಳ ಹೆಸರೇ ತಪ್ಪಿ ಹೋಗಿದೆ.
ಹೌದು, ಕಾಂಗ್ರೆಸ್ ಪಕ್ಷವು ಹಿರಿಯ ಶಾಸಕರಿಗೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಅವಕಾಶ ನೀಡಿಲ್ಲ. ಎಸ್.ಆರ್.ಪಾಟೀಲ್, ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಶಾಮನೂರು ಶಿವಶಂಕರಪ್ಪ, ಬಿಸಿ.ಪಾಟೀಲ್ ಅವರುಗಳ ಆಕಾಂಕ್ಷೀತನಕ್ಕೆ ಕಾಂಗ್ರೆಸ್ ನಾಯಕರು ಸೊಪ್ಪು ಹಾಕಿಲ್ಲ.
ಸಚಿವ ಸ್ಥಾನ ಕೈತಪ್ಪಿದ ಕೆಲವು ಶಾಸಕರು ತಂತಮ್ಮ ಸಮುದಾಯದಲ್ಲಿ, ರಾಜಕೀಯ ವಲಯದಲ್ಲಿ, ಹೈಕಮಾಂಡ್ ಮಟ್ಟದಲ್ಲಿ ಭಾರಿ ಪ್ರಭಾವ ಉಳ್ಳವರೇ ಆಗಿದ್ದು, ಈ ಶಾಸಕರ ಮುಂದಿನ ನಡೆಯ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ.
ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡುವುದಿಲ್ಲ: ಜೆಡಿಎಸ್
ಯಾವ ಪ್ರಮುಖ ಶಾಸಕರಿಗೆ ಮಂತ್ರಿ ಸ್ಥಾನ ತಪ್ಪಿದೆ, ಅವರ ಮುಂದಿನ ನಡೆ ಏನಾಗಿರಬಹುದು ಎಂಬುದರ ಮಾಹಿತಿ ಇಲ್ಲಿದೆ ಕಣ್ಣಾಡಿಸಿ...
ಶಾಮನೂರು ಶಿವಶಂಕರಪ್ಪ ತೀವ್ರ ಅಸಮಾಧಾನ
ಕಾಂಗ್ರೆಸ್ ಅತ್ಯಂತ ಹಿರಿಯ ಶಾಸಕರಲ್ಲಿ ಶಾಮನೂರು ಶಿವಶಂಕರಪ್ಪ ಪ್ರಮುಖರು. ಅವರು ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಸಹ ಹೌದು. ಕಾಂಗ್ರೆಸ್ನ ಲಿಂಗಾಯತ ನಾಯಕ ಅವರು. ಆದರೆ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಬಹುದಿನಗಳಿಂದಲೂ ದೂರು ಕೇಳಿಬರುತ್ತಿತ್ತು. ಆದರೆ ಈಗ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅವರು ಪಕ್ಷಾಂತರ ಮಾಡಲಾರರಾದರೂ ಪಕ್ಷ ತ್ಯಜಿಸಿ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಆ ಮೂಲಕ ಲಿಂಗಾಯತ ಮತದಾರರನ್ನು ಪಕ್ಷದಿಂದ ದೂರ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ
ಎಸ್.ಆರ್.ಪಾಟೀಲ್ ಗೆ ಭಾರಿ ನಿರಾಸೆ
ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಸ್.ಆರ್.ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಪಾಟೀಲರು ಹಿರಿಯ ಶಾಸಕರು, ಆದರೆ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದೆ.ಪಕ್ಷದ ವಿರುದ್ಧ ಬಂಡಾಯ ಏಳುವ ಶಕ್ತಿ, ಸಾಮರ್ಥ್ಯ ಅವರಿಗಿದೆ.
ಹಾಯದ, ಒದೆಯದ ರಾಮಲಿಂಗಾ ರೆಡ್ಡಿ
ಹಿರಿಯ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸಹ ಈ ಬಾರಿ ಸಚಿವ ಸ್ಥಾನ ಮರೀಚಿಕೆಯಾಗಿದೆ. ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಿದ ಕಾರಣ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಸಾಧ್ಯತೆ ದಟ್ಟವಾಗಿದೆ. ರಾಮಲಿಂಗಾ ರೆಡ್ಡಿ ಅವರು ಬಂಡಾಯ ಏಳುವ ಮನಸ್ಥಿತಿಯವರಲ್ಲವಾದರೂ ಪಕ್ಷದಿಂದ ಅಂತರ ಕಾಯ್ದುಕೊಂಡು ಮುಜುಗರ ಉಂಟುಮಾಡಬಲ್ಲರು.
ಎಚ್.ಕೆ.ಪಾಟೀಲ್ಗೆ ಕಣ್ಣೊರೆಸುವ ತಂತ್ರ
ಎಚ್.ಕೆ.ಪಾಟೀಲ್ ಅವರು ಕಳೆದ ಬಾರಿ ಸಚಿವರಾಗಿದ್ದರು. ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಬೇಸರ ತಂದಿರಲಿಕ್ಕೂ ಸಾಕು ಆದರೆ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಕಣ್ಣೊರೆಸುವ ತಂತ್ರವಾಗಿದ್ದರೂ ಸಹ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಸಾಮಾನ್ಯದ್ದಂತೂ ಅಲ್ಲ ಹಾಗಾಗಿ ಎಚ್.ಕೆ.ಪಾಟೀಲ್ ಇಷ್ಟಕ್ಕೆ ತೃಪ್ತರಾಗುವ ಸಾಧ್ಯತೆ ಇದೆ.
ಬಿಜೆಪಿಗೆ ಹಾರುತ್ತಾರಾ ಬಿ.ಸಿ.ಪಾಟೀಲ್
ಬಿಸಿ.ಪಾಟೀಲ್ ಹಾಗೂ ಆನಂದ್ ಸಿಂಗ್ ಅವರುಗಳು ಸಚಿವ ಸ್ಥಾನಕ್ಕಾಗಿ ಭಾರಿ ಪ್ರಯತ್ನ ನಡೆಸಿದರು. ಬಿಸಿ.ಪಾಟೀಲ್ ಅವರು ಈ ಹಿಂದೆಯೇ ಬಿಜೆಪಿ ಸೇರುವ ಯತ್ನ ಮಾಡಿದ್ದರು ಎನ್ನಲಾಗಿತ್ತು. ಈ ಬಾರಿ ಅದೇ ಯತ್ನ ಮುಂದುವರೆಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯಿಂದ ಕಾಂಗ್ರೆಸ್ಗೆ ಹಾರಿರುವ ಆನಂದ್ ಸಿಂಗ್ ಆ ಪ್ರಯತ್ನ ಮಾಡುವ ಸಾಧ್ಯತೆ ಕಡಿಮೆ.
ಭಾರಿ ಅಸಮಾಧಾನಗೊಂಡಿರುವ ಭೀಮಾನಾಯಕ್
ಭಿಮಾನಾಯಕ್ ಅವರು ಲಂಬಾಣಿ ಸಮುದಾಯದಿಂದ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು ಆದರೆ ಅವರ ಬದಲಿಗೆ ಪರಮೇಶ್ವರ್ ನಾಯಕ್ಗೆ ಅವಕಾಶ ನೀಡಿರುವುದು ಅವರನ್ನು ಬಹುವಾಗಿ ಕೆರಳಿಸಿದೆ. ಸಿಟ್ಟಿನಲ್ಲಿರುವ ಭೀಮಾನಾಯಕ್ ಈಗಾಗಲೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಬಿಜೆಪಿಯತ್ತ ನಡೆದರೆ ಆಶ್ಚರ್ಯವಿಲ್ಲ. ಮುಸ್ಲಿಂ ಶಾಸಕ ತನ್ವೀರ್ ಸೇಠ್ ಸಹ ಸಚಿವ ಸ್ಥಾನಕ್ಕೆ ಯತ್ನಿಸಿದ್ದರು ಅವರೂ ಪಕ್ಷದ ವಿರುದ್ಧ ಕೆಂಪು ಬಾವುಟ ಹಾರಿಸುತ್ತಾರಾ ನೋಡಬೇಕು.