ಎಲ್ಲರೆದುರೇ ಪರಿಹಾರ ಕೇಳಿದ್ದಕ್ಕೆ ಬಿಎಸ್ವೈ ವಿರುದ್ಧ ಅಮಿತ್ ಶಾ ಕಿಡಿ?
Recommended Video
ಬೆಂಗಳೂರು, ಜನವರಿ 14: ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಗಾದಿಗೆ ಏರಿದ ಬಿಎಸ್ ಯಡಿಯೂರಪ್ಪ ಅವರ ಸಂಕಷ್ಟ ಮುಗಿಯುತ್ತಿಲ್ಲ. ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮಂತ್ರಿಗಿರಿ ನೀಡುವ ಭರವಸೆ, ಈಡೇರುವ ಲಕ್ಷಣಗಳು ಸಿಗುತ್ತಿಲ್ಲ. ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಆತುರ ತೋರುತ್ತಿದ್ದರಾದರೂ ಬಿಜೆಪಿ ಹೈಕಮಾಂಡ್ ಅವರ ಕೈಗಳನ್ನು ಕಟ್ಟಿಹಾಕುತ್ತಿದೆ.
ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಅಮಿತ್ ಶಾ ಅವರ ಭೇಟಿಗೆ ಯಡಿಯೂರಪ್ಪ ಕಾತರರಾಗಿದ್ದರು. ಇದೇ 11 ಮತ್ತು 12ರಂದು ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷರ ಜತೆ ಚರ್ಚಿಸಿ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಅಂತಿಮಗೊಳಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದರು.
ದಾವೋಸ್ ಗೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ: ಯಡಿಯೂರಪ್ಪ
ಆದರೆ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಭೇಟಿಗೆ ಸಮಯ ದೊರೆತಿರಲಿಲ್ಲ. ಈ ನಡುವೆ ಅವರು ಜ.20ರಂದು ಸ್ವಿಟ್ಜರ್ಲೆಂಡ್ನ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಗೆ ತೆರಳಲೇಬೇಕಾಗಿದೆ. ಅಷ್ಟರೊಳಗೆ ಸಂಪುಟ ವಿಸ್ತರಣೆ ಮಾಡುವುದಾಗಿ ಯಡಿಯೂರಪ್ಪ ಮತ್ತೊಮ್ಮೆ ತಿಳಿಸಿದ್ದಾರೆ.
ಗೋಪಾಲಯ್ಯ, ಉಮೇಶ್ ಕತ್ತಿ ಮುಂತಾದ ಶಾಸಕರು ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸಂಪುಟ ವಿಸ್ತರಣೆಗೆ ಒತ್ತಡ ಹೇರಿದ್ದಾರೆ.
ಸಂಪುಟ ವಿಸ್ತರಣೆಗೆ ಒತ್ತಡ
ವಿದೇಶ ಪ್ರವಾಸಕ್ಕೆ ಮುನ್ನವೇ ಸಂಪುಟ ವಿಸ್ತರಣೆಯ ತೀರ್ಮಾನ ಸುಲಭವಲ್ಲ. ಹೈಕಮಾಂಡ್ ಒಪ್ಪಿಗೆ ಇಲ್ಲದೆ ಸಂಪುಟ ವಿಸ್ತರಣೆಯ ಸಾಹಸಕ್ಕೆ ಯಡಿಯೂರಪ್ಪ ಕೈಹಾಕುವಂತಿಲ್ಲ. ಅತ್ತ ಶಾಸಕರಿಂದ ಒತ್ತಡ ಹೆಚ್ಚುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಶಾಸಕರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಅವರ ಎದುರಿಗಿದೆ. ಇಲ್ಲವಾದರೆ ಮತ್ತೊಮ್ಮೆ ಬಂಡಾಯದ ಬಿಸಿ ಅನುಭವಿಸಬೇಕಾಗುತ್ತದೆ ಎಂಬ ಭಯವೂ ಕಾಡುತ್ತಿದೆ.
ಬಿಎಸ್ವೈ ಮೇಲೆ ಅಮಿತ್ ಶಾ ಕಿಡಿ
ಸಂಪುಟ ವಿಸ್ತರಣೆಯ ಯಡಿಯೂರಪ್ಪ ಅವರ ಉತ್ಸಾಹಕ್ಕೆ ಸ್ವತಃ ಪಕ್ಷದ ಅಧ್ಯಕ್ಷ ಅಮಿತ್ ಶಾ ತಣ್ಣೀರೆರಚಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಅಮಿತ್ ಶಾ ಕೆಂಗಣ್ಣಿಗೆ ಯಡಿಯೂರಪ್ಪ ಗುರಿಯಾಗಿದ್ದಾರೆ. ನೆರೆ ಪರಿಹಾರಕ್ಕೆ ಅಂಗಲಾಚಿದರೂ ಕೇಂದ್ರ ಸರ್ಕಾರ ಸ್ಪಂದಿಸದೆ ಇದ್ದಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಬಂದಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ವೇದಿಕೆಯಲ್ಲಿಯೇ ನೆರೆ ಪರಿಹಾರಕ್ಕೆ ಹಣ ಕೇಳಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಬಿಜೆಪಿಗೆ ಕಸಿವಿಸಿ ಉಂಟುಮಾಡಿತ್ತು. ಈ ಅಸಮಾಧಾನದ ಕಾರಣದಿಂದಲೇ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಸಮಯ ನೀಡಿಲ್ಲ ಎನ್ನಲಾಗಿದೆ.
ಬಿಎಸ್ವೈಗೆ ಉಭಯ ಸಂಕಟ: ಗಡುವು ನೀಡಿದ ಶಾಸಕರು
ನೇರವಾಗಿ ಭೇಟಿಯಾಗಿ ನೆರವು ಕೇಳಬೇಕಿತ್ತು
ಅಮಿತ್ ಶಾ ಭೇಟಿ ಮಾಡುವ ಸಲುವಾಗಿ ಕರೆ ಮಾಡಿದ್ದ ಯಡಿಯೂರಪ್ಪ ಅವರನ್ನು ಶಾ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕಕ್ಕೆ ಏನು ಕೊಡಬೇಕು, ಯಾವಾಗ ಕೊಡಬೇಕು ಎಂಬುದು ನಮಗೆ ತಿಳಿದಿದೆ. ನೀವು ನನ್ನನ್ನೇ ಭೇಟಿಯಾಗಿ ನೇರವಾಗಿ ನೆರವು ಕೇಳಬಹುದಾಗಿತ್ತು. ನಿಮ್ಮಂತಹ ಹಿರಿಯರು ಪ್ರಧಾನಿ ಎದುರು ಹೀಗೆ ಮಾತನಾಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ನಿಮ್ಮ ನಡವಳಿಯಿಂದಾಗಿ ಗೊಂದಲ ಸೃಷ್ಟಿಯಾಯಿತು ಎಂದು ಶಾ ಕಿಡಿಕಾರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮಿತ್ ಶಾ ಒಪ್ಪಿದರೆ ಮಾತ್ರ ಚರ್ಚೆ
ಯಡಿಯೂರಪ್ಪ ಅವರ ಮನವಿಗೆ ಅಮಿತ್ ಶಾ ಸ್ಪಂದಿಸಿಲ್ಲ. ಹೀಗಾಗಿ ಅಮಿತ್ ಶಾ ಇದೇ 17ರ ರಾತ್ರಿ ರಾಜ್ಯಕ್ಕೆ ಬರುವುದರಿಂದ ಆ ಸಮಯದಲ್ಲಿ ಸಂಪುಟ ವಿಸ್ತರಣೆ ವಿಚಾರ ಚರ್ಚಿಸುವುದಾಗಿ ನಿರ್ಧರಿಸಿದ್ದಾರೆ. ಜ.19ರವರೆಗೂ ಅವರು ರಾಜ್ಯದಲ್ಲಿ ಇರಲಿದ್ದಾರೆ. ಆದರೆ ಸಂಪುಟ ವಿಸ್ತರಣೆಯ ಚರ್ಚೆಗೆ ಅಮಿತ್ ಶಾ ಒಪ್ಪಿಗೆ ಸಿಕ್ಕರೆ ಮಾತ್ರ ಸಾಧ್ಯ. ಅದಕ್ಕೆ ಅವಕಾಶ ಸಿಗದೆ ಇದ್ದರೆ ಯಡಿಯೂರಪ್ಪ ಮತ್ತೆ ದೆಹಲಿ ಬಾಗಿಲು ತಟ್ಟುವುದು ಅನಿವಾರ್ಯವಾಗಲಿದೆ. ಈ ನಡುವೆ ಅವರು ದಾವೋಸ್ಗೆ ಹೋಗಿ ಬರಬೇಕಿರುವುದರಿಂದ ಇನ್ನೂ ಒಂದು ವಾರ ಚರ್ಚೆ ವಿಳಂಬವಾಗಲಿದೆ.
ಮಾಜಿ ಅನರ್ಹರಿಗೆ ಸಚಿವ ಸ್ಥಾನ: ಉಲ್ಟಾ ಹೊಡೆದ ಉಪ ಮುಖ್ಯಮಂತ್ರಿ
ಮತ್ತೆ ಸಮಯ ಕೋರಿದ ಯಡಿಯೂರಪ್ಪ
ಜ. 16ರಂದು ಭೇಟಿಗೆ ಸಮಯ ನೀಡುವಂತೆ ಅಮಿತ್ ಶಾ ಅವರಲ್ಲಿ ಯಡಿಯೂರಪ್ಪ ಮತ್ತೆ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದನೆ ದೊರೆತರೆ ಸಂಪುಟ ವಿಸ್ತರಣೆಯ ಕಗ್ಗಂಟು ತುಸು ಸಡಿಲವಾಗಬಹುದು. ಜ.16ರಂದು ಸಾಧ್ಯವಾಗದೆ ಇದ್ದರೆ ಜ. 18ರಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮದ ವೇಳೆಯೇ ಮಾತುಕತೆಗೆ ಅವಕಾಶ ನೀಡಿ ಎಂದೂ ಕೋರಿದ್ದಾರೆ. ಅಮಿತ್ ಶಾ ಅವರು ರಾಜ್ಯಕ್ಕೆ ಬರಲಿದ್ದಾರೆ. ಆಗ ಸಮಯ ಮಾಡಿಕೊಂಡು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ. ಸಾಧ್ಯವಾದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಈ ನಡುವೆ ಯಡಿಯೂರಪ್ಪ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಪ್ರವಾಸಗಳಿವೆ. ಅದರ ನಡುವೆ ದೆಹಲಿಯಿಂದ ಬುಲಾವ್ ಬಂದರೆ ಅಲ್ಲಿಗೆ ತೆರಳಲಿದ್ದಾರೆ.
ಸಂಕ್ರಾಂತಿ ಬಳಿಕ ವಿಸ್ತರಣೆ
'ಹೊಸ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ನನಗೆ ಗೊತ್ತಿಲ್ಲ. ಸಂಕ್ರಾಂತಿ ಮುಗಿದ ಬಳಿಕ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಸಂಪುಟದಲ್ಲಿ ಯಾರು ಇರಬೇಕು, ಯಾರು ಇರುತ್ತಾರೆ ಎಂಬ ಚರ್ಚೆ ಆಗಿಲ್ಲ ಎಂದು ಕೊಪ್ಪಳದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.