ಸಂಪುಟ ವಿಸ್ತರಣೆಗೂ ಮುನ್ನ ಬಿ.ಎಸ್. ಯಡಿಯೂರಪ್ಪ ಕೊಟ್ಟ ಸಂದೇಶಕ್ಕೆ ಬೆಚ್ಚಿ ಬಿದ್ದರಾ ವರಿಷ್ಠರು!
ಬೆಂಗಳೂರು, ಮೇ. 13: "ಇದೇ ರೀತಿಯ ಆಡಳಿತ ನೀಡಿದರೆ, ಮಹಾ ನಾಯಕರೇ ಬರೆದಿಟ್ಟುಕೊಳ್ಳಿ, ಮುಂದಿನ ವಿಧಾನಸಭಾ ಚುಣಾವಣೆಯಲ್ಲಿ ಭಾರತೀಯ ಜನತಾ ಪರ್ಟಿ 70 ಸೀಟು ಗೆಲ್ಲೋದು ಕಷ್ಟವಾಗಲಿದೆ. ರಾಜ್ಯದಲ್ಲಿರುವ ಪಕ್ಷದ ಆಡಳಿತ ನೀತಿ ತುರ್ತಾಗಿ ಬದಲಿಸುವುದು ಸೂಕ್ತ".
ಸರ್ವ ಶಕ್ತಿಯನ್ನು ಮುಡಿಪಾಗಿಟ್ಟು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ನಾಯಕರಿಗೆ ಕಳಿಸಿರುವ ಸಂದೇಶವಿದು.
ಸಂಪುಟ ಪುನಾರಚನೆ ಆಲೋಚನೆಯಲ್ಲಿದ್ದ ಕೇಂದ್ರ ವರಿಷ್ಠ ನಾಯಕರಿಗೆ ಬಿಎಸ್ವೈ ನೀಡಿರುವ ಈ ಸಂದೇಶ ಬಿಜೆಪಿ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿದೆ. ಯಡಿಯೂರಪ್ಪ ಅವರ ಸಂದೇಶದಲ್ಲಿ ವಾಸ್ತವ ಇರುವ ಕಾರಣ ಸಂಪುಟ ಪುನಾರಚನೆ ಮಾಡಬೇಕೋ ? ಬೇಡವೋ ? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ 9 ಸಲ ಹೋಗಿ ಬಂದ್ರೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಯಾಕೆಂದರೆ, ಬಿಜೆಪಿ ಮುಂದಿನ ಚುನಾವಣೆ ಮುಂದಿಟ್ಟುಕೊಂಡು ಹೇಳುವುದಾದರೆ ಯಡಿಯೂರಪ್ಪ ಅವರ ಮಾತುಗಳು ಸತ್ಯಕ್ಕೆ ಹತ್ತಿರವಾಗಿವೆ ಎಂಬ ವಿಚಾರ ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಯಾಗಿದೆ.
ಬೊಮ್ಮಾಯಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮೀಷನ್ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಈಶ್ವರಪ್ಪ ರಾಜೀನಾಮೆ ನೀಡಿದರು. ಗುತ್ತಿಗೆದಾರರ ಸಂಘವೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ಕಮೀಷನ್ ಬಗ್ಗೆ ಆರೋಪಿಸಿತು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಪಿಎಸ್ಐ ನೇಮಕಾತಿ ಅಕ್ರಮ ಬಿಜೆಪಿ ನಾಯಕರ ಕೊರಳಿಗೆ ಸುತ್ತಿಕೊಂಡಿದೆ. ಹಗರಣಗಳಿಗಿಂತಲೂ ಮಿಗಿಲಾಗಿ ಜನಪರ ತೀರ್ಮಾನ ನೀಡುವಲ್ಲಿ ಬೊಮ್ಮಾಯಿ ಸರ್ಕಾರ ಎಡವುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲು ಬಿಜೆಪಿ ಸರ್ಕಾರವನ್ನು ರಚಿಸಿದ್ದೇ ಯಡಿಯೂರಪ್ಪ. ಯಡಿಯೂರಪ್ಪನಿಗೆ ರಾಜ್ಯದ ಬಿಜೆಪಿಯಲ್ಲಿ ಸರಿಸಾಟಿ ನಾಯಕ ಇಲ್ಲ. ಈಗಲೂ ಯಡಿಯೂರಪ್ಪ ಅವರನ್ನು ಹೊರತು ಪಡಿಸಿ ಬಿಜೆಪಿ ಚುನಾವಣೆಗೆ ಹೋಗುವ ಧೈರ್ಯವೂ ಇಲ್ಲ. ಈ ಸತ್ಯವನ್ನು ಅರಿತಿರುವ ಬಿಜೆಪಿ ನಾಯಕರು ಕೂಡ ಯಡಿಯೂರಪ್ಪ ಈ ಸಂದೇಶದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡಿದರೆ ಏನೆಲ್ಲಾ ಆಗಬಹುದು ಎಂಬುದರ ಆಲೋಚನೆಯಲ್ಲಿದ್ದಾರೆ.
ಮೂರು ಪ್ಲಾನ್ :
"ಈಗಿರುವ ಸಂಪುಟದಲ್ಲಿ ಕೇವಲ ಐವರನ್ನು ತೆಗೆದು ಖಾಲಿಯಿರುವ ಐವರು ಸಚಿವ ಸ್ಥಾನ ತುಂಬಿ ಸಂಪುಟ ವಿಸ್ತರಣೆ ಮಾಡಿ ಅತೃಪ್ತರನ್ನು ಸಮಾಧಾನ ಪಡಿಸುವುದು. ಇಲ್ಲವೇ ಇದೇ ಸಂಪುಟವನ್ನು ಮುಂದುವರೆಸಿ ಆರು ತಿಂಗಳು ಮೊದಲು ಚುನಾವಣೆ ಎದುರಿಸುವುದು. ಈ ಬಗ್ಗೆ ಸುದೀರ್ಘ ಆಲೋಚನೆ ನಡಸಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಹೀಗಾಗಿಯೇ ಬೊಮ್ಮಾಯಿ ಅವರನ್ನು ಖಾಲಿ ಕೈಯಲ್ಲಿ ಕಳಿಸಲಾಗಿದೆ," ಎಂದು ಬಿಜೆಪಿ ಪಕ್ಷದ ಉನ್ನತ ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿವೆ.
ಯಡಿಯೂರಪ್ಪ ತಮ್ಮ ಪರಮಾಪ್ತನನ್ನಾಗಿ ಮಾಡಿಕೊಂಡಿದ್ದು ಬಸವರಾಜ ಬೊಮ್ಮಾಯಿ ಅವರನ್ನು. ದೆಹಲಿ ಕೆಲಸದ ನಿಮಿತ್ತ ಏನೇ ಇದ್ದರೂ ಬೊಮ್ಮಾಯಿ ಅವರನ್ನೇ ಯಡಿಯೂರಪ್ಪ ಕಳಿಸಿ ಕೊಡುತ್ತಿದ್ದರು. ಈ ಮೂಲಕ ಕೇಂದ್ರ ವರಿಷ್ಠರ ಸಂಪರ್ಕ ಸಾಧಿಸಿದ್ದ ಬೊಮ್ಮಾಯಿ ಸಿಎಂ ಆಗುತ್ತಾರೆ ಎಂದು ಯಡಿಯೂರಪ್ಪ ಕೂಡ ಊಹೆ ಮಾಡಿರಲಿಲ್ಲ. ಯಡಿಯೂರಪ್ಪ ಕಂಕಳಲ್ಲಿ ಇದ್ದ ನಾಯಕನನ್ನೇ ಸಿಎಂ ಮಾಡುವ ಮೂಲಕ ಬಿಎಸ್ ವೈ ಅವರನ್ನು ಮೌನವಾಗಿಸಿದ್ದರು.
ಬೊಮ್ಮಾಯಿ ಆಡಳಿತದ ಕಾರ್ಯ ವೈಖರಿ ಬಗ್ಗೆ ಯಡಿಯೂರಪ್ಪ ಅವರಿಗೆ ಸಂತಸವಿಲ್ಲ. ಜನ ಮೆಚ್ಚುವ ಆಡಳಿತ ನೀಡುವಲ್ಲಿ ಬೊಮ್ಮಾಯಿ ವಿಫಲವಾಗುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಒಂದಲ್ಲಾ ಒಂದು ಹಗರಣ ಹೊರಗೆ ಬರುತ್ತಿವೆ. ಇವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಅಭಿಯಾನ ಶುರು ಮಾಡಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಸಂದೇಶದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ.
Recommended Video