ಸಂಪುಟ ವಿಸ್ತರಣೆ: ಯಡಿಯೂರಪ್ಪ ಗೆ ಅಮಿತ್ ಶಾ ಸೂಚನೆ
ಬೆಂಗಳೂರು, ಜನವರಿ 18: ಅಮಿತ್ ಶಾ ಜೊತೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅಂತೆಯೇ ಇಂದು ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಯಡಿಯೂರಪ್ಪ ಮಾತುಕತೆ ಆಡಿದ್ದಾರೆ.
ಮೂಲ ಬಿಜೆಪಿ-ವಲಸಿಗ ಬಿಜೆಪಿಗರ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ಯಡಿಯೂರಪ್ಪ ಅವರು ಮಾಜಿ ಅನರ್ಹರ ಪರ ಇಂದು ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಯಡಿಯೂರಪ್ಪ ನಿರ್ಧಾರಕ್ಕೆ ಹೆಚ್ಚಿನ ಅಮಿತ್ ಶಾ ತಕರಾರು ತೆಗೆದಿಲ್ಲವೆನ್ನಲಾಗುತ್ತಿದ್ದು, ಯಡಿಯೂರಪ್ಪ ಅಂತಿಮಪಡಿಸಿದ್ದ ಪಟ್ಟಿಯಂತೆಯೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ದಟ್ಟವಾಗಿದೆ.
ತಮ್ಮನ್ನು ನಂಬಿ ಬಂದು ಅಧಿಕಾರ ಧಕ್ಕಿಸಿಕೊಟ್ಟ ಮಾಜಿ ಅನರ್ಹರಿಗೆ ಸಚಿವ ಸ್ಥಾನ ಕೊಡಬೇಕೆನ್ನುವುದು ಯಡಿಯೂರಪ್ಪ ನಿರ್ಣಯ ಆಗಿತ್ತು, ಆದರೆ ಇದಕ್ಕೆ ಕೆಲವು ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿ ಹೈಕಮಾಂಡ್ ಗೆ ದೂರು ನೀಡಿದ್ದರು. ಹಾಗಾಗಿಯೇ ಅಮಿತ್ ಶಾ ಆಗಮನದ ನಂತರವೇ ಸಂಪುಟ ವಿಸ್ತರಣೆ ಎಂದು ಯಡಿಯೂರಪ್ಪ ಸಹ ತಿಳಿಸಿದ್ದರು.
ಸಂಪುಟ ವಿಸ್ತರಣೆಯ ಸಂಭಾವ್ಯ ಪಟ್ಟಿ: ಯಾರಿಗೆ ಯಾವ ಖಾತೆ?
ಆದರೆ ಅಮಿತ್ ಶಾ ರಾಜ್ಯಕ್ಕೆ ಬಂದರೂ ಸಹ ಮೂಲ ಬಿಜೆಪಿಗರಿಗೆ ಹೆಚ್ಚಿನ ಲಾಭವಾದಂತೆ ಇಲ್ಲ. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಳೆದುಕೊಂಡಿದ್ದವರು ಈ ಬಾರಿಯೂ ಮತ್ತೆ ಅವಕಾಶವಂಚಿತರಾಗುವ ಸಂಭವ ಇದೆ.
ಕೆಲವೇ ಕೆಲವು ಹಿರಿಯ ಮೂಲ ಬಿಜೆಪಿ ಶಾಸಕರಿಗೆ ಸಂಪುಟ ಸೇರುವ ಅದೃಷ್ಟ ಸಿಗುವ ಸಾಧ್ಯತೆ ಇದ್ದು, ಅದಕ್ಕಾಗಿ ಈಗಾಗಲೇ ಸಚಿವ ಸ್ಥಾನದಲ್ಲಿರುವ ಕೆಲವರು ತ್ಯಾಗ ಮಾಡಬೇಕಾಗುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಗೆ ಒಪ್ಪಿಗೆ?: ಅಮಿತ್ ಶಾ ಪಟ್ಟಿಯಲ್ಲಿ 'ಅರ್ಹ' ಶಾಸಕರಿಗೆ ಆಘಾತ?
ಯಡಿಯೂರಪ್ಪ ಮುಂಚೆ ಹೇಳಿದಂತೆ ಸಿಂಗಪೂರ್ನ ದಾವೋಸ್ ಪ್ರವಾಸಕ್ಕೆ ಹೋಗುವ ಮುನ್ನಾ ಸಂಪುಟ ವಿಸ್ತರಣೆ ಮಾಡುವುದು ಬಹುತೇಕ ಅನುಮಾನವೇ ಆಗಿದ್ದು, ದಾವೋಸ್ ನಿಂದ ಮರಳಿ ಬಂದ ಬಳಿಕವೇ ಸಂಪುಟ ವಿಸ್ತರಣೆ ಮಾಡಲಿದ್ದಾರೆ.