ಸಂಪುಟ ವಿಸ್ತರಣೆ : ಯಡಿಯೂರಪ್ಪಗೆ ಅಮಿತ್ ಶಾ ಷರತ್ತು!
ಬೆಂಗಳೂರು, ಆಗಸ್ಟ್ 18 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಬಿ. ಎಸ್. ಯಡಿಯೂರಪ್ಪಗೆ ಷರತ್ತು ಹಾಕಿದ್ದಾರೆ. ಆದ್ದರಿಂದ, ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸದೇ ಅವರು ಬೆಂಗಳೂರಿಗೆ ಮರಳಿದ್ದಾರೆ.
ಶನಿವಾರ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅಮಿತ್ ಶಾ ಭೇಟಿಯಾಗಿದ್ದರು. ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಟ್ಟ ಅವರು, ಸಚಿವರಾಗಬೇಕಾದ ಶಾಸಕರ ಪಟ್ಟಿಯನ್ನು ನಾವೇ ಕಳಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.
ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿಲ್ಲ!
ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕರ್ನಾಟಕದ ಸರ್ಕಾರದ ಮೇಲೆ ಬಿಜೆಪಿ ಕೇಂದ್ರ ನಾಯಕರು ಈಗಾಗಲೇ ಹಿಡಿತ ಸಾಧಿಸಿದ್ದು, ಯಡಿಯೂರಪ್ಪ ಆಪ್ತ ಶಾಸಕರಿಗೆ ಹಿನ್ನಡೆ ಉಂಟಾಗುವ ನಿರೀಕ್ಷೆ ಇದೆ.
ಯಡಿಯೂರಪ್ಪ ನಿರಾಳ: ಮಂಗಳವಾರ ಸಂಪುಟ ರಚನೆಗೆ ಅಮಿತ್ ಶಾ ಅಸ್ತು
ಮಂಗಳವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಧ್ಯಾಹ್ನ ಸಂಪುಟ ವಿಸ್ತರಣೆ ನಡೆಯಲಿದೆ. 14 ರಿಂದ 15 ಶಾಸಕರು ಸಂಪುಟ ಸೇರುವ ನಿರೀಕ್ಷೆ ಇದೆ. ಸಚಿವರಾಗುವ ಶಾಸಕರ ಪಟ್ಟಿಯನ್ನು ಹೈಕಮಾಂಡ್ ನಾಯಕರು ಸೋಮವಾರ ಅಂತಿಮಗೊಳಿಸುವ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ.
ಅಮಿತ್ ಶಾ ಪಟ್ಟಿಯಿಂದ ಶೆಟ್ಟರ್ ಸೇರಿ 6 ಮಂದಿ ಔಟ್
ನಿಮ್ಮ ಪಟ್ಟಿ ಫೈನಲ್ ಮಾಡಲು ಸಾಧ್ಯವಿಲ್ಲ
ಬಿ. ಎಸ್. ಯಡಿಯೂರಪ್ಪ ಅಮಿತ್ ಶಾ ಭೇಟಿಯ ವೇಳೆ ಶಾಸಕರ ಪಟ್ಟಿ ತೆಗೆದುಕೊಂಡು ಹೋಗಿದ್ದರು. ಆದರೆ, ನಿಮ್ಮ ಪಟ್ಟಿಯನ್ನು ನಾವು ಫೈನಲ್ ಮಾಡಲ್ಲ. ಯಾರು ಸಚಿವರಾಗಬೇಕು ಎಂದು ನಾವು ತೀರ್ಮಾನಿಸುತ್ತೇವೆ ಎಂದು ಅಮಿತ್ ಶಾ ಯಡಿಯೂರಪ್ಪಗೆ ಸೂಚನೆ ಕೊಟ್ಟು ಕಳಿಸಿದ್ದಾರೆ.
ಚುನಾವಣೆ ಬೇಕೆ, ಸರ್ಕಾರ ಉಳಿಯಬೇಕೆ?
ಅಮಿತ್ ಶಾ ನಾವು ಹೇಳಿದವರನ್ನು ಸಚಿವರನ್ನಾಗಿ ಮಾಡಬೇಕು. ನಿಮ್ಮ ಆಪ್ತರಿಗೆ ಮಾತ್ರ ಸಚಿವ ಸ್ಥಾನ ಕೊಡುವುದಾದರೆ ಚುನಾವಣೆ ಎದುರಿಸಲು ಸಜ್ಜಾಗಿ. ಹರ್ಯಾಣ, ಮಹಾರಾಷ್ಟ್ರಜೊತೆ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಲಿ ಎಂದು ಅಮಿತ್ ಶಾ ಹೇಳಿದ್ದಾರೆ. ಆದ್ದರಿಂದ ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಅಮಿತ್ ಶಾ ಮಾತಿಗೆ ಒಪ್ಪಿಗೆ ಕೊಟ್ಟು ಬಂದಿದ್ದಾರೆ.
ಯಡಿಯೂರಪ್ಪ ಪಟ್ಟಿಯಲ್ಲಿ ಬರೀ ಆಪ್ತರು
ಯಡಿಯೂರಪ್ಪ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸಿ. ಎಂ. ಉದಾಸಿ, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಸಿ. ಟಿ. ರವಿ, ಕೆ. ಜಿ. ಬೋಪಯ್ಯ, ರಾಮದಾಸ್ ಮುಂತಾದ ಶಾಸಕರ ಹೆಸರಿತ್ತು ಎಂದು ತಿಳಿದುಬಂದಿದೆ. ಅಮಿತ್ ಶಾ ಬಿ. ಎಲ್. ಸಂತೋಷ್ ಅವರಿಗೆ ಮತ್ತೊಂದು ಪಟ್ಟಿ ಸಿದ್ಧಗೊಳಿಸಲು ಹೇಳಿದ್ದು ಒಟ್ಟು ಮೂರು ಪಟ್ಟಿ ಮಾಡಿ ಬಳಿಕ ಹೆಸರು ಅಂತಿಮಗೊಳಿಸಲಾಗುತ್ತದೆ.
ಅಚ್ಚರಿಯ ಹೆಸರುಗಳು
ಬಿಜೆಪಿಯಲ್ಲಿ 105 ಶಾಸಕರಿದ್ದಾರೆ. ಅದರಲ್ಲಿ ಬಹುತೇಕ ಶಾಸಕರು ಹಿರಿಯರು. ಆದರೆ, ಎಲ್ಲಾ ಹಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನದ ಭಾಗ್ಯ ಸಿಗುವುದಿಲ್ಲ. ಪಕ್ಷ ಸಂಘಟನೆ ಮತ್ತು ಭವಿಷ್ಯದ ದೃಷ್ಟಿಯಿಂದ ಹೊಸಬರಿಗೂ ಸಚಿವ ಸ್ಥಾನ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಆದ್ದರಿಂದ, ಅಚ್ಚರಿಯ ಹೆಸರು ಪಟ್ಟಿಯಲ್ಲಿ ಸೇರಬಹುದು ಎಂಬ ನಿರೀಕ್ಷೆ ಇದೆ.