ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಮಹತ್ವದ ತಿದ್ದುಪಡಿ ತಂದ ರಾಜ್ಯ ಬಿಜೆಪಿ ಸರ್ಕಾರ!
ಬೆಂಗಳೂರು, ಡಿ. 08: ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ನಿಯಮಾವಳಿಗಳ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ರಾಜ್ಯ ಸರ್ಕಾರ ತಂದಿದೆ. ಈ ಮೊದಲು ಶಿಕ್ಷಕರ ನೇಮಕಾತಿ ಅಧಿಸೂಚನೆಯ ನಿಯಮಾವಳಿಗಳಿಂದಾಗಿ ಖಾಲಿಯಿದ್ದ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರಲಿಲ್ಲ. ನೇಮಕಾತಿ ನಿಯಮಾವಳಿಂದಾಗಿ ಹೆಚ್ಚಿನ ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿದ್ದವು. ಹೀಗಾಗಿ ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿತ್ತು.
ನೂತನ ನಿಯಮಾವಳಿ ಪ್ರಕಾರ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವೀಧರರೂ ಸೇರಿದಂತೆ ಬೇರೆ ವಿಷಯಗಳಲ್ಲಿ ಪದವಿ ಪಡೆದವರಿಗೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಇಂಜಿನಿಯರ್ಗಳು ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು. ಆದರೆ ಹೊಸ ನಿಯಮಾವಳಿ ಪ್ರಕಾರ ಈಗಾಗಲೇ ಡಿ.ಇಡಿ ಹಾಗೂ ಬಿ.ಇಡಿ ಮುಗಿಸಿದವರೂ ಸರ್ಕಾರಿ ನೇಮಕಾತಿಗಾಗಿ ಇಂಜನಿಯರ್ ಪದವಿಧರರೊಂದಿಗೆ ಪೈಪೋಟಿ ಎದುರಿಸಬೇಕಾಗುತ್ತದೆ.
ಇಂಜನೀಯರ್ಗಳು ಟೀಚರ್ ಆಗಬಹುದು!
ಈ ತಿದ್ದುಪಡಿಯಿಂದಾಗಿ ನಾಲ್ಕು ವರ್ಷಗಳ ಅವಧಿಯ ಇಂಜಿನಿಯರಿಂಗ್, ಬಿ.ಟೆಕ್ ಪದವಿ (ಆರ್ಕಿಟೆಕ್ಚರ್ ಪದವಿ ಹೊರತುಪಡಿಸಿ) ಪಡೆದ ಅಭ್ಯರ್ಥಿಗಳನ್ನು ಸಹ ಈ ಹುದ್ದೆಗಳಿಗೆ ಪರಿಗಣಿಸಬಹುದಾಗಿದೆ. ಪ್ರಸ್ತುತ ನಿಯಮಗಳಲ್ಲಿ ಸಿಬಿಝಡ್ ವಿಷಯಗಳ ಅಭ್ಯರ್ಥಿ ಅವಕಾಶವಿರಲಿಲ್ಲ. ಈ ವಿಷಯಗಳ ಅಭ್ಯರ್ಥಿಗಳ ಬೇಡಿಕೆ ಗಮನಿಸಿ ವಿಜ್ಞಾನ ಮತ್ತು ಗಣಿತ ವಿಷಯದ ಎರಡನೇ ಹುದ್ದೆ ಇರುವ ಶಾಲೆಗಳಲ್ಲಿ ಜೀವ-ವಿಜ್ಞಾನ ಶಾಸ್ತ್ರ (ಬಯೋಲಜಿಕಲ್ ಸೈನ್ಸ್) ವಿಷಯವನ್ನು ಪರಿಗಣಿಸಲಾಗುತ್ತದೆ.
ಪದವಿ ಹಂತದಲ್ಲಿ ಕಡ್ಡಾಯವಾಗಿ ಮೂರು ವರ್ಷಗಳಲ್ಲಿಯೂ ರಸಾಯನಶಾಸ್ತ್ರ ಅಭ್ಯಾಸ ಮಾಡಿರುವ ಮತ್ತು ಉಳಿದಂತೆ ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ರೇಷ್ಮೆ ಶಾಸ್ತ್ರ, ಪರಿಸರ ಶಾಸ್ತ್ರ, ಜೈವಿಕ ವಿಜ್ಞಾನ ವಿಷಯಗಳ್ಲಿ ಯಾವುದಾದರೂ ಎರಡು ವಿಷಯಗಳನ್ನು ಕಡ್ಡಾಯವಾಗಿ ಎಲ್ಲ 3 ವರ್ಷಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳನ್ನೂ ಇನ್ನು ಮುಂದೆ ಈ ಶಿಕ್ಷಕ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ.
ಬಿಇಡಿ ಮತ್ತು ಟಿಇಟಿ ಕಡ್ಡಾಯ
6 ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕ ಹುದ್ದೆಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಮಾತ್ರವೇ ಅವಕಾಶವಿತ್ತು. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಪದವಿಯಲ್ಲಿ ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಮೂರನೇ ವಿಷಯವನ್ನು ರಸಾಯನಶಾಸ್ತ್ರ ವಿಷಯದ ಜೊತೆಗೆ ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್), ಎಲೆಕ್ಟ್ರಾನಿಕ್ಸ್, ಭೂಗೋಳಶಾಸ್ತ್ರ, ಸ್ಟ್ಯಾಟಿಟಿಕ್ಸ್, ಗೃಹವಿಜ್ಞಾನ ವಿಷಯಗಳಿಗೂ ಸಹ ಅವಕಾಶ ಕಲ್ಪಿಸಿದಲ್ಲಿ ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಗೆ ದಾರಿಯಾಗಲಿದೆ.
ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಒದಗಿ ಬರಲಿದೆ. ತಾವು ನೇಮಿಸಿದ್ದ ಪರಿಣಿತರ ತಂಡದ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಸಹ ಅರ್ಹ ವಿಷಯಗಳಾಗಿ ಪರಿಗಣಿಸಲಾಗುತ್ತದೆ. ಈ ಅಭ್ಯರ್ಥಿಗಳು ಬಿಇಡಿ ಮತ್ತು ಟಿಇಟಿ ಅರ್ಹತೆ ಹೊಂದಬೇಕಿರುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
ಈ ಎಲ್ಲ ಅಂಶಗಳ ಜೊತೆಗೆ ನೇಮಕಾತಿ ವಿಧಾನದಲ್ಲಿ ಆಧಾರದ ಸರಾಸರಿ ಅಂಕಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಅದರಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಶೇಕಡಾ 50, ಟಿಇಟಿಯಲ್ಲಿ ಗಳಿಸಿರುವ ಅಂಕಗಳು ಶೇಕಡಾ 20, ಪದವಿಯಲ್ಲಿ ಗಳಿಸಿದ ಅಂಕಗಳು ಶೇ.20 ಮತ್ತು ಡಿಇಡಿ/ಬಿಇಡಿಯಲ್ಲಿ ಗಳಿಸಿದ ಅಂಕಗಳು ಶೇ.10ರ ಮಾನದಂಡವನ್ನು ಪ್ರಸ್ತಾಪಿಸಲಾಗಿದೆ. ಇದೇ ರೀತಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಜೊತೆಗೆ ಶಿಕ್ಷಕರಾಗಲು ಬಿಇಡಿ ಮತ್ತು ಟಿಇಟಿ ಮಾಡಿರುವುದು ಕಡ್ಡಾಯ.
Recommended Video
ಸಂಸ್ಕೃತ ಭಾಷೆ ಸೇರ್ಪಡೆ
ಹಾಗೆಯೇ ಭಾಷಾ ಹುದ್ದೆಗಳಿಗೆ ಇತರೆ ಭಾಷೆಗಳ ಜೊತೆಗೆ ಸಂಸ್ಕೃತವನ್ನು ಸೇರ್ಪಡೆಗೊಳಿಸಲು ಮತ್ತು ಸಮಾಜ ಪಾಠಗಳ ಹುದ್ದೆಗೆ ಸಮಾಜಶಾಸ್ತ್ರ ವಿಷಯವನ್ನು ಸಹ ಸೇರ್ಪಡೆ ಮಾಡಲಾಗಿದೆ.