ಅನವಾಲ ಏತ ನೀರಾವರಿಗೆ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ
ಬೆಂಗಳೂರು, ಆಗಸ್ಟ್ 12: ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಘಟಪ್ರಭಾ ಬಲದಂಡೆ ಕಾಲುವೆಯ ಸುಮಾರು 14525.43 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಅನವಾಲ ಏತ ನೀರಾವರಿ ಯೋಜನೆಯ ರೂ. 411.10 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಜಲಸಂಪನ್ಮೂಲ ಸಚಿವ ಎಂ. ಗೋವಿಂದ ಕಾರಜೋಳ ಈ ಕುರಿತು ಮಾಹಿತಿ ನೀಡಿದರು. ಘಟಪ್ರಭಾ ಯೋಜನೆಯಡಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಭಾಗ, ರಾಮದುರ್ಗ, ಸವದತ್ತಿ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲ್ಲೂಕುಗಳ ಒಟ್ಟಾರೆ 31,0823 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಯೋಜಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಒಪ್ಪಿಗೆ
ಸದರಿ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯ 199 ಕಿ. ಮೀ. ಮತ್ತು ಎಡದಂಡೆ ಮುಖ್ಯ ಕಾಲುವೆಯ 109 ಕಿ. ಮೀ., ಬಲದಂಡೆ ಉಪ ಕಾಲುವೆ 88 ಕಿ. ಮೀ. ಎಡದಂಡೆ ಉಪ ಕಾಲುವೆ 210 ಕಿ. ಮೀ. ಮತ್ತು ಬಲದಂಡೆ ಹಂಚು ಕಾಲುವೆ 994 ಕಿ. ಮೀ. ಹಾಗೂ ಎಡದಂಡೆ ಹಂಚು ಕಾಲುವೆ 494 ಕಿ. ಮೀ.ಗಳನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವರದಿಯನ್ನು ಆಧರಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಯೋಜನೆಯಡಿ ಬಲದಂಡೆ ಮುಖ್ಯ ಕಾಲುವೆಯು 199 ಕಿ. ಮೀ. ಉದ್ದ ಇದ್ದು, ಡಿಸ್ಚಾರ್ಜ್ 66.56 ಕ್ಯೂಮೆಕ್ಸ್ ಮೂಲಕ 169129 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 2004ರಲ್ಲಿ ಫಟಪ್ರಭಾ ಬಲದಂಡೆ ಮುಖ್ಯ ಕಾಲುವೆಯ ನಿರ್ಮಾಣದ ನಂತರ 148 ಕಿ. ಮೀ. ಯಿಂದ 199 ಕಿ. ಮೀ.ವರೆಗೆ ಸಮರ್ಪಕವಾಗಿ ನೀರು ತಲುಪದೇ ಸುಮಾರು 24750.00 ಹೆ. ಅಚ್ಚುಕಟ್ಟು ಪ್ರದೇಶಗಳು, ಒಣ ಪ್ರದೇಶವಾಗಿದೆ. ಇದು ನೀರಾವರಿಯಿಂದ ವಂಚಿತವಾಗಿರುತ್ತದೆ.
ಮುಂದುವರೆದು, ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ನೀರಾವರಿ ನಿಗಮ ಇವರು ಸಲ್ಲಿಸಿರುವ ವಿವರವಾದ ಯೋಜನಾ ವರದಿಯಲ್ಲಿ ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ 2000 ಕ್ಯೂಸೆಕ್ಸ್ ಹರಿವನ್ನು ಮಾತ್ರ ತೆಗೆದುಕೊಳ್ಳುವ ಬದಲು 2000 ಕ್ಯೂಸೆಕ್ ಮಾತ್ರ ಬಿಡಲಾಗುತ್ತಿದೆ. ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯೂಸೆಕ್ ಬದಲು 2000 ಕ್ಯೂಸೆಕ್ ಮಾತ್ರ ಬಿಡಲಾಗುತ್ತಿದೆ.
ಯೋಜಿತ ಬಳಕೆಗಿಂತ ಹೆಚ್ಚಾಗಿ ನೀರು ಬಳಕೆ
ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆಯ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಬ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿ.ಮೀ 148 ನಂತರದ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲವಾದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ರೈತರು ಬಾಧಿತ 24750 ಹೆ. ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಲಾಗಿದೆ. ಸದರಿ ಯೋಜನೆಗೆ ಅವಶ್ಯವಿರುವ 3.64 ಟಿಎಂಸಿ ನೀರಿನ ಹಂಚಿಕೆ ಅವಶ್ಯಕವಿರುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸುಳ್ಳು ಪ್ರಚಾರ: ಗೋವಿಂದ ಕಾರಜೋಳ ವಾಗ್ದಾಳಿ
14525.43 ಹೆಕ್ಟೇರ್ಗೆ ನೀರಾವರಿ
ಫಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ 148.70 ರಿಂದ ಆಲಮಟ್ಟಿ ಜಲಾಶಯದ ಹಿನ್ನೀರು ಇರುವ ಕಿ. ಮೀ. 199.093 ಟೇಲ್ ಎಂಡ್ ರವರೆಗಿನ ಕಾಲುವೆಯು ಫಟಪ್ರಭಾ ನದಿಗೆ ಸಮಾನಾಂತರವಾಗಿ ಹರಿಯುತ್ತಿರುವುದು ಟೋಪೋಶೀಟ್ ಮತ್ತು ಸ್ಥಳ ಪರಿಶೀಲನಾ ಅಧ್ಯಯನದಲ್ಲಿ ಕಂಡುಬರುತ್ತದೆ. ಘಟಪ್ರಭಾ ನದಿಯಿಂದ ಘಟಪ್ರಭಾ ಬಲದಂಡೆ ಕಾಲುವೆಯ ಕಿ. ಮೀ. 149.700 ವರೆಗಿನ ಅಂತರವು ಸುಮಾರು 19.0 ಕಿ. ಮೀ. ಇದೆ.
ಇದು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬರುತ್ತಿದೆ. ಈ ಸ್ಥಳದಿಂದ ನೀರನ್ನು ಎತ್ತಿ ಜಿಆರ್ಬಿಸಿಗೆ ಪೂರೈಸಲು ಉದ್ದೇಶಿಸಿದ್ದು, ಈ ರೀತಿ ಮೇಲೆತ್ತಿದ ನೀರಿನಿಂದ 14525.43 ಹೆಕ್ಟೇರ್ಗೆ ನೀರಾವರಿ ಒದಗಿಸಲು ಅಂದರೆ ಕಲಾದಗಿ ವಿತರಣಾ ಕಾಲುವೆ (BI-29) ರಿಂದ ಮುಚಖಂಡಿ ವಿತರಣಾ ಕಾಲುವೆ (BI-33)ರವರೆಗೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ.
ವಿವರವಾದ ಯೋಜನಾ ವರದಿ ಸಿದ್ದ
ದೇವನಾಳ ಗ್ರಾಮದ ಬಳಿ ಅಂದಾಜು 25.0 ಕಿ. ಮೀ. ನಷ್ಟು ದೂರದ ಹೆರ್ಕಲ್ ಸೇತುವೆ ಕಮ್ ಬ್ಯಾರೇಜ್ನ ಮೇಲ್ಬಾಗದಲ್ಲಿ ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ಜಿಆರ್ಬಿಸಿ ಸರಪಳಿ 146+ 700ರಲ್ಲಿ Discharge Pointನಲ್ಲಿ ನೀರನ್ನು ಹರಿಸಿ ಐಸಿಎ 14525.43 ಹೆ. ಪ್ರದೇಶಕ್ಕೆ ನೀರಾವರಿ ಒದಗಿಸುವುದಾಗಿದೆ. ಅದರಂತೆ ಅನವಾಳ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿತ್ತು ಎಂದು ತಿಳಿಸಿದರು.
ನೀರಾವರಿ ಸೌಲಭ್ಯ ಕಲ್ಪಿಸಲು ಪರ್ಯಾಯ ವ್ಯವಸ್ಥೆ
ಮೇಲಿನಂತೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರೈತರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ರೈತರ ಹಿತದೃಷ್ಟಿಯಿಂದ ಭಾದಿತ 14570 ಹೆ. ಅಚ್ಚುಕಟ್ಟಿನ ಪೈಕಿ ಸುಮಾರು 14525.43 ಹೆಕ್ಟೇರ್ ಭಾದಿತ ಅಚ್ಚುಕಟ್ಟು ಪ್ರದೇಶಕ್ಕೆ (ಕಲಾದಗಿ ವಿತರಣಾ ಕಾಲುವೆಯಿಂದ ಮಚಖಂಡಿ ವಿತರಣಾ ಕಾಲುವೆ ವರೆಗೆ) ನೀರಾವರಿ ಸೌಲಭ್ಯ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ದೇವನಾಳ ಗ್ರಾಮದ ಹತ್ತಿರ ಅನವಾಲ ಏತ ನೀರಾವರಿ ಯೋಜನೆಯ ರೂ.411.10 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು ತಯಾರಿಸಲಾಗಿತ್ತು. ಈ ಯೋಜನಾ ವರದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.