ಸಾಲದ ಋಣದಿಂದ ಬಿಡುಗಡೆ: ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರದ ಕೊಡುಗೆ
Recommended Video
ಬೆಂಗಳೂರು, ಆಗಸ್ಟ್, 24: ರಾಜ್ಯದಲ್ಲಿ ಋಣ ಪರಿಹಾರ ಅಧಿನಿಯಮವನ್ನು ಮತ್ತೆ ಜಾರಿಗೆ ತರಲು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.
ಡಿ. ದೇವರಾಜು ಅರಸು ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 1976, 1980ರಲ್ಲಿ ಕರ್ನಾಟಕ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲಾಗಿತ್ತು.
ಈಗ ಕರ್ನಾಟಕ ಋಣ ಪರಿಹಾರ ಅಧಿನಿಯಮ 2018ಅನ್ನು ಜಾರಿಗೊಳಿಸಿ ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ದುರ್ಬಲ ವರ್ಗದ ವ್ಯಕ್ತಿಗಳು ಪಡೆದಿರುವ ಋಣದಿಂದ ಅವರನ್ನು ಮುಕ್ತಗೊಳಿಸುವ ಕಾನೂನಾತ್ಮಕ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದ ಗಿಫ್ಟ್: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಷ್ಟ್ರಪತಿಗಳ ಅನುಮೋದನೆಗೆ ಶಿಫಾರಸುಗಳನ್ನು ರವಾನಿಸಲಾಗುವುದು. ಬಳಿಕ ಅದರ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಸಾಲದ ಸುಳಿಯಲ್ಲಿ ಸಿಲುಕಿರುವ ಸಮಾಜದ ದುರ್ಬಲ ವರ್ಗದ ವ್ಯಕ್ತಿಗಳನ್ನು ಅದರಿಂದ ವಿಮೋಚನೆಗೊಳಿಸಿ ಸ್ವತಂತ್ರ ಬದುಕು ನಿರ್ವಹಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶ ಎಂದು ಹೇಳಿದರು.
ಋಣ ಪರಿಹಾರ ಅಧಿನಿಯಮದಲ್ಲಿ ಏನಿರಲಿದೆ?
* ಸಾಲಗಾರನು ಪಡೆದಿರುವ ಸಾಲವನ್ನು ಮರುಪಾವತಿಸದೆ ಋಣ ಮುಕ್ತಗೊಳಿಸಲು ಈ ಕಾಯ್ದೆಯ ಪ್ರಕಾರ ಅವಕಾಶವಿದೆ. ಈ ರೀತಿ ಋಣ ವಿಮೋಚನೆ ಸಾಲಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯವಾಗುವುದಿಲ್ಲ.
* ಖಾಸಗಿ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳು, ಗಿರವಿದಾರರಿಂದ ಪಡೆದ ಸಾಲ, ಯಾವುದೇ ಕೈಸಾಲ ಪಡೆದಿದ್ದರೂ ಅದು ಮನ್ನಾ ಆಗಲಿದೆ.
* ಸಾಲ ಪಡೆಯುವಾಗ ಭದ್ರತೆಯಾಗಿ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ಅಡಮಾನ ಮಾಡಿದ್ದರೂ ಅದನ್ನು ಬಿಡುಗಡೆಗೊಳಿಸಲು ಈ ಕಾಯ್ದೆ ಅವಕಾಶ ನೀಡಲಿದೆ.
ರೈತರು 2 ಘಟಕಕ್ಕಿಂತ ಹೆಚ್ಚು ಭೂಮಿ ಹೊಂದಿರಬಾರದು
* ಈ ಕಾಯ್ದೆಯು ಅನ್ವಯವಾಗಬೇಕಾದರೆ ರೈತರು 2 ಘಟಕಕ್ಕಿಂತ ಹೆಚ್ಚು ಭೂಮಿ ಹೊಂದಿರಬಾರದು. ಮತ್ತು ಅದರಿಂದ ಬರುವ ವಾರ್ಷಿಕ ಆದಾಯ 1.25 ಲಕ್ಷ ರೂ. ಮೀರಿರಬಾರದು ಹಾಗೂ ಕೃಷಿ ಮೂಲದಿಂದ ಆದಾಯ ಹೊಂದಿರಬಾರದು.
* ಘಟಕ ಎಂದರೆ 2 ಹೆಕ್ಟೇರ್ ಒಣಭೂಮಿ, ಒಂದೂವರೆ ಎಕರೆ ಮಳೆ ಆಧಾರಿತ ಕೃಷಿ ಭೂಮಿ ಅಥವಾ ಅರ್ಧ ಎಕರೆ ನೀರಾವರಿ ಜಮೀನು.
* ಇಲ್ಲಿ ದುರ್ಬಲ ವರ್ಗ ಎಂದು ವಾರ್ಷಿಕ 1.25 ಲಕ್ಷ ರೂ. ಆದಾಯ ಮೀರದ ಸಣ್ಣ ರೈತ ಅಥವಾ ಭೂರಹಿತ ಕೃಷಿ ಕಾರ್ಮಿಕರು.
* ಸಾಲ ನೀಡಿರುವವರು ತಮ್ಮ ಕಾರ್ಯವ್ಯಾಪ್ತಿ ಸಹಾಯಕ ಆಯುಕ್ತರ ಮುಂದೆ ಸಾಲದ ವಿವರ ಸಲ್ಲಿಸಬೇಕು.
* ಈ ಅಧಿಯ ನಿಯಮವನ್ನು ಉಲ್ಲಂಘನೆ ಮಾಡಿದವರು, ಬಲವಂತವಾಗಿ ಸಾಲ ವಸೂಲಾತಿಗೆ ಮುಂದಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1.25 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.
ಯಾರಿಗೆ ಈ ಅಧಿನಿಯಮ ಅನ್ವಯವಾಗುವುದಿಲ್ಲ?
* ಭೂ ಕಂದಾಯ ವಸೂಲಾತಿಯ ಬಾಕಿ
* ಯಾವುದೇ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಯ ಪ್ರಾಧಿಕಾರಗಳು, ತೆರಿಗೆ, ರಾಜಸ್ವ ಸೇರಿದಂತೆ ಇತರೆ ಬಾಕಿಗಳಿಗೆ ಇದು ಅನ್ವಯವಾಗುವುದಿಲ್ಲ.
* ಭಾರತೀಯ ಜೀವ ವಿಮಾ ನಿಗಮ
* ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಬಾಕಿ
ಕೂಲಿ, ಸಂಭಾವನೆ ವೇತನ ಬಾಕಿಗೆ ಅನ್ವಯಿಸುವುದಿಲ್ಲ
* ಸರ್ಕಾರಿ ಕಂಪೆನಿಯ ಸಾಲ
* ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಅಡಿಯಲ್ಲಿ ನೋಂದಣಿಯಾದ ಸಹಕಾರ ಸಂಘಗಳು
* ಕಂತು-ತೋರಾಧರಿತ ಸಾಲಗಳು.
* ಪ್ರಕರಣ 12ರಲ್ಲಿ ಇತರೆ ಅಧಿನಿಯಮಗಳ ಪ್ರಕಾರ ಒಪ್ಪಂದ, ಬಳಕೆ, ಡಿಕ್ರಿ, ಆದೇಶಗಳು ಯಾವುದೇ ಇದ್ದರೂ ಇದು ಅನ್ವಯವಾಗುವುದಿಲ್ಲ.