ಕಾಂಗ್ರೆಸ್ನಲ್ಲಿಯೇ ಮುಂದುವರಿಯಲು ಸಿ.ಎಂ. ಇಬ್ರಾಹಿಂ ನಿರ್ಧಾರ?
ಬೆಂಗಳೂರು, ಫೆ.7: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರ ವಿರುದ್ಧ ಬಂಡೆದಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರು ಸೋಮವಾರ ಇಬ್ರಾಹಿಂ ಅವರ ನಿವಾಸಕ್ಕೆ ತೆರಳಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಹಲವು ತಾಸಿನ ಸಭೆಯ ಬಳಿಕ ಇಬ್ರಾಹಿಂ ಮನಸ್ಸು ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
'ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿಲ್ಲ ಎಂದು ಕೋಪಗೊಂಡಿದ್ದಾರೆ. ಕಾಂಗ್ರೆಸ್ನ ಎಲ್ಲಾ ನಾಯಕರೂ ಇಬ್ರಾಹಿಂ ಅವರೊಂದಿಗೆ ಮಾತನಾಡಿದ್ದಾರೆ. ನಾನೂ ಅವರ ಜೊತೆ ಮಾತನಾಡುತ್ತೇನೆ. ಆದರೆ, ಸ್ವಲ್ಪ ಕೋಪ ಕಡಿಮೆಯಾಗಲಿ ಎಂದು ಕಾಯುತ್ತಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
'ಚುನಾವಣೆಗೆ ಒಂದು ವರ್ಷ ಇರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾದ ನೀವು ಪಕ್ಷ ಬಿಡುವ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಇದರಿಂದ ನಿಮ್ಮ ಸಮುದಾಯಕ್ಕೆ ಹಿನ್ನಡೆ ಉಂಟು ಮಾಡಿದಂತಾಗುತ್ತದೆ. ಹೀಗಾಗಿ ಆಗಿರುವ ಲೋಪದೋಷಗಳನ್ನು ಸಹಿಸಿಕೊಂಡು ಪಕ್ಷದಲ್ಲಿಯೇ ಮುಂದುವರಿಯುವುದು ಎಲ್ಲರಿಗೂ ಒಳಿತು' ಎಂದು ಮಹಾದೇವಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿರುವುದರ ಹಿಂದೆ ಹೈಕಮಾಂಡ್ ಸಹ ಕೆಲಸ ಮಾಡಿದೆ. ವಿದ್ಯಾರ್ಥಿ ಸಂಘಟನೆಯಿಂದಲೂ ಕಾಂಗ್ರೆಸ್ನಲ್ಲಿ ಇರುವ ಹರಿಪ್ರಸಾದ್ ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಸಂಘಟನೆಯಲ್ಲಿ ಅವರಿಗೆ ಉತ್ತಮ ಅನುಭವ ಇದೆ. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಹೊರತು ಇಬ್ರಾಹಿಂ ಅವರಿಗೆ ಹುದ್ದೆ ತಪ್ಪಿಸಬೇಕು ಎಂಬ ಹುನ್ನಾರ ಯಾರದ್ದೂ ಅಲ್ಲ ಎಂದು ಹೇಳಿದ್ದಾರೆ.
ಹೀಗೆ ಸುಮಾರು ಹೊತ್ತು ಚರ್ಚೆ ನಡೆಸಿ ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಇಬ್ರಾಹಿಂ ಅವರ ಮನವೊಲಿಸುವ ಕೆಲಸ ಮಾಡಲಾಗಿದೆ. ಬಳಿಕ ಅವರು ಕಾಂಗ್ರೆಸ್ನಲ್ಲಿಯೇ ಉಳಿಯುವ ನಿರ್ಧಾರಕ್ಕೆ ಬಂದರು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇಬ್ರಾಹಿಂ ಅವರಿಂದ ಇನ್ನೂ ಸ್ಪಷ್ಟ ಹೇಳಿಕೆ ಬರಬೇಕಾಗಿದೆ.
ಅಲಿಂಗ ಚಳವಳಿ ಮಾಡುವುದಾಗಿ ಹೇಳಿದ್ದ ಇಬ್ರಾಹಿಂ:
ಬಹುಸಂಖ್ಯಾತರು ಹಿಂದುಳಿದವರನ್ನು ಅಪ್ಪಿಕೊಳ್ಳುವ 'ಅಲಿಂಗ ಚಳವಳಿ' ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಘೋಷಿಸಿದ್ದರು. ಅನೇಕ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದೇನೆ, 'ಅಲಿಂಗ ಚಳವಳಿ' ಮಾಡುತ್ತೇವೆ. ಅಲ್ಪಸಂಖ್ಯಾತರು, ಲಿಂಗಾಯತರು, ಗೌಡರನ್ನು ಒಂದಾಗಿಸಬೇಕು. ಬಹುಸಂಖ್ಯಾತರು ದಲಿತರನ್ನು, ಹಿಂದುಳಿದವರನ್ನು ಆಲಿಂಗನ ಮಾಡಿಕೊಳ್ಳಬೇಕು. ಇದೇ 'ಅಲಿಂಗ ಚಳುವಳಿ' ಎಂದು ಕಳೆದ ಶನಿವಾರ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ದಿನಾಂಕ ಪ್ರಕಟಿಸುವೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ಮತಾಂತರ ನಿಷೇಧ ಬಿಲ್ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಎಂದು ಸದ್ಯಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದ ಸಿಎಂ ಇಬ್ರಾಹಿಂ. ನಾನು ಅಲ್ಲಾಡಿದ್ದಕ್ಕೆ ಮೊಹಮ್ಮದ್ ನಲಪಾಡ್ಗೆ ಅಧ್ಯಕ್ಷ ಸ್ಥಾನ, ಯುಟಿ ಖಾದರ್ಗೆ ವಿಧಾನಸಭೆ ಉಪನಾಯಕ ಸ್ಥಾನ ಸಿಕ್ಕಿದೆ ಎಂದೂ ಸಹ ಹೇಳಿಕೆ ನೀಡಿದ್ದರು.
Recommended Video