ಹೆಬ್ಬಾಳ ಕಾಂಗ್ರೆಸ್ ಟಿಕೆಟ್ : ಭೈರತಿ ಸುರೇಶ್ v/s ರೆಹಮಾನ್ ಷರೀಫ್
Recommended Video
ಬೆಂಗಳೂರು, ಜನವರಿ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಹೆಬ್ಬಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ?. ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರು ಸಹ ಕ್ಷೇತ್ರದ ಟಿಕೆಟ್ ಆಕಾಂಕ್ಷಿ
2016ರ ಫೆಬ್ರವರಿಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಟಿಕೆಟ್ಗೆ ಭಾರೀ ಪೈಪೋಟಿ ಎದುರಾಗಿತ್ತು. ಕೊನೆ ಕ್ಷಣದ ತನಕ ಭೈರತಿ ಸುರೇಶ್ ಹೆಸರು ಕೇಳಿ ಬರುತ್ತಿತ್ತು. ಅಂತಿಮವಾಗಿ ರೆಹಮಾನ್ ಷರೀಫ್ ಟಿಕೆಟ್ ಪಡೆದಿದ್ದರು, ಸೋತಿದ್ದರು.
ಹೆಬ್ಬಾಳ ಚುನಾವಣೆ ಕಾಂಗ್ರೆಸ್ ನಾಯಕರಿಗೆ ಕಲಿಸಿದ್ದೇನು?
ಈ ಬಾರಿಯ ಚುನಾವಣೆಯಲ್ಲಿಯೂ ರೆಹಮಾನ್ ಷರೀಫ್ ಟಿಕೆಟ್ ಆಕಾಂಕ್ಷಿ. ಈಗಾಗಲೇ ಸಿ.ಕೆ.ಜಾಫರ್ ಷರೀಫ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೊಮ್ಮಗನಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಭೈರತಿ ಸುರೇಶ್ ಹೆಸರು ಸಹ ಕೇಳಿಬರುತ್ತಿದೆ.
ಸಿ.ಕೆ.ಜಾಫರ್ ಷರೀಫ್ ರಾಹುಲ್ ಗಾಂಧಿ ಭೇಟಿ ಮಾಡಿದ್ದೇಕೆ?
ಹೆಬ್ಬಾಳ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತರಾದ ಆರ್.ಜಗದೀಶ್ ಗೆಲುವು ಸಾಧಿಸಿದ್ದರು. ಆದರೆ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಆಗ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಗೆಲುವು ಸಾಧಿಸಿದ್ದಾರೆ.
ಭೈರತಿ ಸುರೇಶ್ ಸ್ಪರ್ಧೆ ಖಚಿತ?
ವಿಧಾನ ಪರಿಷತ್ ಸದಸ್ಯ ಭೈರತಿ ಸುರೇಶ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ಭೈರತಿ ಸುರೇಶ್ ಹೆಸರಲ್ಲಿ ಸಿದ್ಧವಾಗಿದ್ದ ಬಿ-ಫಾರಂಗೆ ಹೈಕಮಾಂಡ್ ತಡೆ ನೀಡಿತ್ತು. ಆದ್ದರಿಂದ, ಟಿಕೆಟ್ ಕೈ ತಪ್ಪಿತ್ತು.
ಕ್ಷೇತ್ರದಲ್ಲಿ ಪ್ರಚಾರ ಆರಂಭ
ಭೈರತಿ ಸುರೇಶ್ ಹೆಬ್ಬಾಳ ಕ್ಷೇತ್ರದಲ್ಲಿ ಕಚೇರಿ ತೆರೆದು, ಪ್ರಚಾರ ಕಾರ್ಯ ಆರಂಭಿಸಿದ್ದಾರೆ ಎಂಬುದು ಸ್ಥಳೀಯರು ಹೇಳುವ ಮಾತು. ಕಳೆದ ಬಾರಿ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಅವರು ಸ್ಪರ್ಧಿಸಲಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಜನರು.
ರೆಹಮಾನ್ ಷರೀಫ್ಗೆ ಸೋಲು
ಸಿ.ಕೆ.ಜಾಫರ್ ಷರೀಫ್ ಅವರ ಒತ್ತಾಯಕ್ಕೆ ಮಣಿದು ಹೆಬ್ಬಾಳ ಕ್ಷೇತ್ರದಲ್ಲಿ ಅವರ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ 2013ರ ಚುನಾವಣೆ, 2016ರ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ, ಎರಡು ಬಾರಿಯೂ ಅವರು ಸೋಲು ಕಂಡಿದ್ದಾರೆ. ಆದ್ದರಿಂದ, ಈ ಬಾರಿ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಮೊಮ್ಮಗನಿಗೆ ಟಿಕೆಟ್ ಕೊಡಿಸಲು ಯತ್ನ
ಸಿ.ಕೆ.ಜಾಫರ್ ಷರೀಫ್ ಈ ಬಾರಿಯೂ ಮೊಮ್ಮಗನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರೆಹಮಾನ್ ಷರೀಫ್ಗೆ ಟಿಕೆಟ್ ಕೇಳಿದ್ದಾರೆ. 'ಚುನಾವಣೆ ದಿನಾಂಕ ಘೋಷಣೆಯಾಗಲಿ ನೋಡೋಣ' ಎಂದು ರಾಹುಲ್ ಗಾಂಧಿ ಹೇಳಿ ಕಳಿಸಿದ್ದಾರೆ.
ಬಿಜೆಪಿ ವಶದಲ್ಲಿರುವ ಕ್ಷೇತ್ರ
2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಆರ್.ಜಗದೀಶ್ ಕುಮಾರ್ 38,162 ಮತಗಳನ್ನು ಪಡೆದು ಜಯಗಳಿಸಿದ್ದರು. 2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಖಚಿತ ಎನ್ನುವುದು ಸದ್ಯದ ಮಾತು.