ಬಿಎಸ್ವೈ ಮುಂದಿನ ದಿನಗಳು ಹೇಗಿರಲಿದೆ? ಪುತ್ರ ವಿಜಯೇಂದ್ರ ಸಿಡಿಸಿದ ಹೊಸ ಬಾಂಬ್!
ವರಿಷ್ಠರ ಒತ್ತಡದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮುಂದಿನ ದಿನಗಳು ಹೇಗಿರಲಿದೆ ಎನ್ನುವುದರ ಬಗ್ಗೆ ಅವರ ಪುತ್ರ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಹೊಸ ವಿಷಯವನ್ನು ಹೊರಗೆಡವಿದ್ದಾರೆ.
ಎರಡು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಯ ಪೈಕಿ ಹಾನಗಲ್ ಕ್ಷೇತ್ರದ ಉಸ್ತುವಾರಿಯೂ ಆಗಿರುವ ವಿಜಯೇಂದ್ರ ಅವರು ನಾಡಿನ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದರ್ಶನ ಪಡೆದು, ನಂತರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಆರ್ಎಸ್ಎಸ್ ಬಗ್ಗೆ ಎಚ್ಡಿಕೆ ಇಂದು ಹೇಳಿದ್ದು, ಗೌಡ್ರು ಅಂದು ಹೇಳಿದ್ದು!
ಎರಡು ಕ್ಷೇತ್ರಗಳ ಉಪಚುನಾವಣೆ ಮತ್ತು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ವಿಜಯೇಂದ್ರ, ಜೆಡಿಎಸ್ ನಡೆಸುತ್ತಿರುವ ಕಾರ್ಯಾಗಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಚುನಾವಣಾ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರಗೆ ಕೊನೆಗೂ ಸ್ಥಾನ
"ನನ್ನ ಬಳಿ ಪ್ರತ್ಯೇಕ ಗೆಲುವಿನ ತಂತ್ರವೇನೂ ಇಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಜನಪರ ಕೆಲಸವೇ ನಮ್ಮ ಪಕ್ಷವನ್ನು ಗೆಲುವಿನ ದಡ ಸೇರಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ"ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದ ಏಕೈಕ ಜನನಾಯಕರು ಎಂದರೆ ಅದು ಯಡಿಯೂರಪ್ಪನವರು
ಕುಕ್ಕೆ ಸುಬ್ರಹ್ಮಣ್ಯದ ವಿವಿಐಪಿ ಗೆಸ್ಟ್ ಹೌಸ್ನಲ್ಲಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಪ್ರಮುಖರ ಜೊತೆಗೆ ಸಭೆ ನಡೆಸಿ ಮಾತನಾಡುತ್ತಿದ್ದ ವಿಜಯೇಂದ್ರ, "ನಾಡಿನ ಬಡವರ, ದೀನ ದಲಿತರ ಧ್ವನಿಯಾಗಿ ಬಿ.ಎಸ್.ಯಡಿಯೂರಪ್ಪನವರು ಕೆಲಸ ಮಾಡಿದ್ದಾರೆ. ಆ ಕಾರಣಕ್ಕಾಗಿಯೇ, ಎಲ್ಲಾ ವರ್ಗದ ಜನರು ಒಪ್ಪಿಕೊಳ್ಳುವಂತಹ ರಾಜ್ಯದ ಏಕೈಕ ಜನನಾಯಕರು ಎಂದರೆ ಅದು ಯಡಿಯೂರಪ್ಪನವರು ಎಂದರೆ ತಪ್ಪಾಗಲಾರದು"ಎಂದು ವಿಜಯೇಂದ್ರ ಹೇಳಿದ್ದಾರೆ.
ಬಿಎಸ್ವೈ ಅವರು ಪ್ರಾಮಾಣಿಕವಾಗಿ, ಬಡವರಿಗಾಗಿಯೇ ಕಳಕಳಿಯಿಂದ ಕೆಲಸ ಮಾಡಿದವರು
"ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವಿತಾವಧಿಯಲ್ಲಿ ಅಧಿಕಾರಕ್ಕಾಗಿ ಹೋರಾಟವನ್ನು ಮಾಡಿದವರಲ್ಲ. ಪ್ರಾಮಾಣಿಕವಾಗಿ, ಬಡವರಿಗಾಗಿಯೇ ಕಳಕಳಿಯಿಂದ ಕೆಲಸ ಮಾಡಿದವರು. ಯಡಿಯೂರಪ್ಪನವರ ಮುಂದಿನ ದಿನಗಳು ಹೇಗೆ ಇರಲಿದೆ ಎನ್ನುವ ಪ್ರಶ್ನೆಗೆ, ಒಂದು ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುವುದು ಯಡಿಯೂರಪ್ಪನವರ ಸ್ವಭಾವ. ಆ ಗುರಿಯನ್ನು ತಲುಪುವಂತಹ ಶಕ್ತಿ ಯಡಿಯೂರಪ್ಪನವರಿಗೆ ಈಗಲೂ ಇದೆ"ಎಂದು ವಿಜಯೇಂದ್ರ ಹೇಳುವ ಮೂಲಕ, ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಿಂದ ದೂರವಿರುತ್ತಾರಾ ಎನ್ನುವ ಮಾತಿಗೆ ಸ್ಪಷ್ಟ ಉತ್ತರವನ್ನು ಕೊಡಲಿಲ್ಲ.
ಜೆಡಿಎಸ್ ಪಕ್ಷ ಕಾರ್ಯಾಗಾರವನ್ನು ನಡೆಸುತ್ತಿದೆ, ಮಿಷನ್ 123
"ಕಾಂಗ್ರೆಸ್ ಪಕ್ಷ ಗೆಲ್ಲುವುದು ದೂರದ ಮಾತು, ಮೊದಲು ಅವರು ತಮ್ಮ ಅಸ್ತಿತ್ವನ್ನು ಉಳಿಸಿಕೊಳ್ಳಲಿ. ಜೆಡಿಎಸ್ ಪಕ್ಷ ಕಾರ್ಯಾಗಾರವನ್ನು ನಡೆಸುತ್ತಿದೆ, ಮಿಷನ್ 123 ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಅದು ಮಿಷನ್ 123 ಅಲ್ಲ ಮಿಷನ್ 23, ಎಚ್.ಡಿ.ಕುಮಾರಸ್ವಾಮಿಯವರ ಮಹದಾಸೆ ಏನಂದರೆ ರಾಜ್ಯದಲ್ಲಿ ಅತಂತ್ರ ಅಸೆಂಬ್ಲಿ ಇರಬೇಕು. ಅವರಿಗೆ ಎಷ್ಟು ಕಮ್ಮಿ ಬಂದರೂ ಒಳ್ಳೆಯದು"ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.
Recommended Video
ಯಡಿಯೂರಪ್ಪನವರಿಗೆ ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿದೆ
"ಸೀಟು ಕಮ್ಮಿ ಬಂದರೆ ಅಧಿಕಾರ ಹಂಚಿಕೊಳ್ಳಬಹುದು ಎನ್ನುವುದು ಜೆಡಿಎಸ್ಸಿನ ಗುರಿ, ಹಾಗಾಗಿ, ಮಿಷನ್ 123 ಎನ್ನುವುದು ದೂರದ ಮಾತು" ಎಂದಿರುವ ವಿಜಯೇಂದ್ರ, "ಬಡವರು ಮತ್ತು ರೈತರ ಧ್ವನಿಯಾಗಿ ಅವಿರತವಾಗಿ ಕೆಲಸ ಮಾಡಿದ್ದಕ್ಕಾಗಿ ಯಡಿಯೂರಪ್ಪನವರಿಗೆ ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿದೆ" ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಘಟಕ ಭಾನುವಾರ ಬಿಡುಗಡೆ ಮಾಡಿದ್ದ ಚುನಾವಣಾ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಇರಲಿಲ್ಲ. ಇದಕ್ಕೆ ವಿಜಯೇಂದ್ರ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೊನೆಯ ಕ್ಷಣದಲ್ಲಿ ಹಾನಗಲ್ ವಿಧಾನಸಭಾ ಉಪಚುನಾವಣೆಯ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಸೇರ್ಪಡೆಗೊಂಡಿತ್ತು.