ಗವಿಗಂಗಾಧರೇಶ್ವರನಿಗೆ ಬಿ.ವೈ. ವಿಜಯೇಂದ್ರ ತೀರಿಸಿದ ಹರಕೆ ಏನು?
ಬೆಂಗಳೂರು, ಫೆ. 13: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾದ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹರಕೆ ತೀರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿರುವುದು ಭಾರೀ ಕುತೂಹಲ ಕೆರಳಿಸಿದೆ.
ಇಂದು (ಫೆ.13) ಬೆಳಗ್ಗೆ 9 ಗಂಟೆಯಿಂದ 10 ಗಂಟೆಯ ಸಮಯದಲ್ಲಿ ವಿಜಯೇಂದ್ರ ಅವರು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಹರಕೆ ತೀರಿಸಿದರು. ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಗವಿಗಂಗಾಧರೇಶ್ವರನಿಗೆ ಕ್ಷೀರಾಭಿಷೇಕ ನೆರವೇರಿಸಿದ ವಿಜಯೇಂದ್ರ ಅವರು ತಮ್ಮ ವಿಶೇಷ ಪ್ರಾರ್ಥನೆ ಮಾಡಿದರು. ಹರಕೆ ತೀರಿಸಲು ವಿಜಯೇಂದ್ರ ಅವರು ಕ್ಷೀರಾಭಿಷೇಕ ಪೂಜೆ ನೆರವೇರಿಸಿದ್ದು ಯಾಕೆ? ಅದ್ಯಾವ ಹರಕೆಯನ್ನು ವಿಜಯೇಂದ್ರ ತೀರಿಸಿದರು? ಮುಂದಿದೆ ಸಂಪೂರ್ಣ ಮಾಹಿತಿ!
ಸ್ಫಟಿಕ ಲಿಂಗ ಸಲ್ಲಿಸಿದ ವಿಯೇಂದ್ರ
ಬಿ.ವೈ. ವಿಜಯೇಂದ್ರ ಅವರು ಗವಿಗಂಗಾಧರೇಶ್ವರನಿಗೆ ಸ್ಫಟಿಕ ಲಿಂಗವನ್ನು ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹರಕೆ ತೀರಿಸಿದ್ದಾರೆ. ಜೊತೆಗೆ ಬಿವೈ ವಿಜಯೇಂದ್ರ ಅವರು ಕ್ಷೀರಾಭಿಷೇಕವನ್ನು ನೆರವೇರಿಸಿ ಸೋಮಸುಂದರ್ ದೀಕ್ಷಿತ್ ಅವರ ಆಶೀರ್ವಾದ ಪಡೆದರು.
ವಿಜಯೇಂದ್ರ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದ ಸಮಯದಲ್ಲಿ ಸ್ಥಳೀಯ ಕಾರ್ಯಕರ್ತ ಬಾಬು ಅನ್ನೋರು ಹರಕೆ ಹೊತ್ತಿದ್ದರು. ವಿಜಯೇಂದ್ರ ಅವರು ಗುಣಮುಖರಾದ ಬಳಿಕ ವಿಜಯೇಂದ್ರ ಅವರಿಂದ ಕ್ಷೀರಾಭಿಷೇಕ ಮಾಡಿಸುವುದಾಗಿ ಹರಕೆ ಹೊತ್ತಿದ್ದರು. ಹೀಗಾಗಿ ಇಂದು ವಿಜಯೇಂದ್ರ ಮೂಲಕ ಹರಕೆಯನ್ನು ತೀರಿಸಿದ್ದಾರೆ. ಸ್ಫಟಿಕ ಲಿಂಗವನ್ನು ವಿಜಯೇಂದ್ರ ಅವರ ಕೈಯಿಂದ ಶಿವನಿಗೆ ಅರ್ಪಿಸಿ ಹರಕೆ ತೀರಿಸಿದರು.
ಪ್ರಧಾನಿ ಮೋದಿ ಬಲಪಡಿಸಲು ಪೂಜೆ
ಕೊರೊನಾ ವೈರಸ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಮ್ಮ ದೇಶ ಈಗ ಎದುರಿಸುತ್ತಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ಸಮಸ್ಯೆಗಳನ್ನು ಎದುರಿಸಲು ದೊಡ್ಡ ಶಕ್ತಿ ಸಿಗಬೇಕು. ಜೊತೆಗೆ ರಾಜ್ಯದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಕ್ತಿ ನೀಡಲಿ ಎಂದು ನಮ್ಮ ಶಾಸಕ ರವಿಸುಬ್ರಮಣ್ಯ ಹಾಗೂ ಬಾಬು ಅವರು ವಿಶೇಷ ಹರಕೆ ಹೊತ್ತಿದ್ದರು. ಹೀಗಾಗಿ ಇವತ್ತು ಹರಕೆ ಸಲ್ಲಿಸಿದ್ದೇವೆ ಎಂದು ಪೂಜೆ ಸಲ್ಲಿಸಿದ ಬಳಿಕ ಬಿ.ವೈ. ವಿಜಯೇಂದ್ರ ಅವರು ಹೇಳಿಕೆ ನೀಡಿದ್ದಾರೆ.
ನಾನು ಸೂಪರ್ ಸಿಎಂ ಅಲ್ಲ
ನಾನು ಸೂಪರ್ ಸಿಎಂ ಅಲ್ಲ ಎಂದು ಇದೇ ಸಂದರ್ಭದಲ್ಲಿ ಬಿ.ವೈ. ವುಜಯೇಂದ್ರ ಅವರು ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಯಾವುದೇ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನಾನು ಪಕ್ಷದ ಕಾರ್ಯಕರ್ತ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ. ಪಕ್ಷ ಸಂಘನೆ ಮಾಡಲು ನಾನು ಕೆಲಸ ಮಾಡಿತ್ತಿದ್ದೇನೆ. ನನ್ನ ಇತಿಮಿತಿಯೂ ನನಗೆ ಗೊತ್ತಿದೆ. ತಂದೆಯವರ ಕೆಲಸದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ವಿಜಯೇಂದ್ರ ತಿರುಗೇಟು ಕೊಟ್ಟರು.
ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಸ್ಪರ್ಧೆ?
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ವಿಜಯೇಂದ್ರ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೆ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ನಾನು ಅಲ್ಲಿ ಕೆಲಸ ಮಾಡುತ್ತೇನೆ ಎಂದರು. ಆದರೆ ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಸ್ಪಷ್ಟವಾಗಿ ಏನನ್ನೂ ವಿಜಯೇಂದ್ರ ಅವರು ಹೇಳಲಿಲ್ಲ. ಆ ಮೂಲಕ ಮತ್ತಷ್ಟು ಕುತೂಹಲವನ್ನು ವಿಜಯೇಂದ್ರ ಅವರು ಮೂಡಿಸಿದ್ದಾರೆ.