ಬಿ.ವೈ. ವಿಜಯೇಂದ್ರಗೆ ಟಿಕೆಟ್ ತಪ್ಪುವಂತೆ ಬಿಜೆಪಿಯಲ್ಲಿ ಬತ್ತಿ ಇಡುತ್ತಿರುವರು ಯಾರು?
ಬೆಂಗಳೂರು, ಮೇ 25: ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶಾಸಕನಾಗುವ ಅವಕಾಶವನ್ನು ಪದೇ ಪದೇ ತಪ್ಪಿಸಲಾಗುತ್ತಿದೆ. 2018 ನೇ ಸಾರ್ವತ್ರಿಕ ಚುನಾವಣೆ ವೇಳೆ ವರುಣಾದಿಂದ ಸ್ಪರ್ಧಿಸಲು ವಿಜಯೇಂದ್ರ ತಯಾರಿ ನಡೆಸಿದ್ದರು. ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಇದೀಗ 2022 ರಲ್ಲಿ ವಿಧಾನ ಪರಿಷತ್ ಟಿಕೆಟ್ ಕೊಡಿಸುವ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನ ಎರಡನೇ ಸಲವೂ ವಿಫಲವಾಗಿದೆ. ಶಾಸಕನಾಗಿ ವಿಧಾನಸೌಧ ಪ್ರವೇಶಿಸುವ ವಿಜಯೇಂದ್ರ ಗೆ ಅವಕಾಶ ತಪ್ಪಿಸುತ್ತಿರುವುದು ಯಾರು ? ಯಾಕೆ ?
ಆಪರೇಷನ್ ಕಮಲವೋ, ವಾಮಮಾರ್ಗವೋ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ತಂದುಕೊಟ್ಟಿದ್ದೇ ಬಿ.ಎಸ್.ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಮೊಟ್ಟ ಬೊದಲ ಬಾರಿಗೆ ಕಮಲ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದ ಯಡಿಯೂರಪ್ಪ ಎದುರಲ್ಲಿ ಯಾವ ಹೈಕಮಾಂಡ್ ಇರಲಿಲ್ಲ. ಆದರೆ, ಕಳೆದ ಐದು ವರ್ಷದಲ್ಲಿ ಬಿಜೆಪಿಯಲ್ಲಿ ಚಿತ್ರಣವೇ ಬದಲಾಗಿ ಹೋಗಿದೆ.
ಕಳೆದ 2018 ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಾಗಿತ್ತು. ಅಷ್ಟೊತ್ತಿಗಾಗಲೇ ಬಿಜೆಪಿಯ ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ವಿಜಯೇಂದ್ರ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಪ್ರತಿನಿಧಿಸುತ್ತಿದ್ದ ವರುಣಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ವಿಜಯೇಂದ್ರ ತಯಾರಾಗಿದ್ದರು. ಇನ್ನೇನು ಬಿಜೆಪಿಯಿಂದ ಬಿ ಫಾರಂ ಸಿಗಲಿದೆ ಎಂದು ಪ್ರಚಾರವನ್ನು ಆರಂಭಿಸಿದ್ದರು. ಕೊನೆ ಕ್ಷಣದಲ್ಲಿ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಬಿಜೆಪಿ ವರಿಷ್ಠರ ನಿರ್ಧಾರದ ಬಗ್ಗೆ ಬಿ.ಎಸ್ ಯಡಿಯೂರಪ್ಪ ಮುನಿಸಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ವಿಜಯೇಂದ್ರ ಅಭಿಮಾನಿಗಳು ರೊಚ್ಚೆಗೆದ್ದಿದ್ದರು. ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದ್ದರು.
ಬಿ.ಎಲ್. ಸಂತೋಷ್ ಹೆಸರು
2018 ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆನಂತರ ಯಡಿಯೂರಪ್ಪ ರೂಪಿಸಿದ ತಂತ್ರದಿಂದ ಸಮ್ಮಿಶ್ರ ಸರ್ಕಾರ ಮುರಿದು ಬಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರನ್ನು ಸೆಳೆದು ಪುನಃ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ರಣ ತಂತ್ರ ರೂಪಿಸಿ ಯಶಸ್ವಿಯಾಗಿದ್ದರು. ವಯೋ ಸಹಜ ಕಾರಣ ನೀಡಿ ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಇಳಿಸಲಾಯಿತು. ಅಂದಿನಿಂದ ಈವರೆಗೂ ಯಡಿಯೂರಪ್ಪ ಅವರ ಮಾತಿಗೆ ಹೈಕಮಾಂಡ್ ಮನ್ನಣೆ ನೀಡುತ್ತಿಲ್ಲ. ಯಡಿಯೂರಪ್ಪ ಮತ್ತು ಕುಟುಂಬಕ್ಕೆ ಅಧಿಕಾರ ಸಿಗದಂತೆ ಬಿಜೆಪಿಯಲ್ಲಿ ಒಂದು ವರ್ಗ ಹೈಕಮಾಂಡ್ ಮೇಲೆ ಪ್ರಭಾವ ಬೀರುತ್ತಿದೆ. ಅದರಲ್ಲೂ ಪ್ರಮುಖವಾಗಿ ಆರ್ಎಸ್ಎಸ್ ಮುಖಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಕೇಳಿ ಬರುತ್ತಿದೆ.
ಶಿರಾ ಉಪ ಚುನಾವಣೆ ಎದುರಾಗುವ ವೇಳೆಗೆ ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಉಪ ಚುನಾವಣೆ ಗೆಲುವನ್ನು ಪಕ್ಷಕ್ಕೆ ತಂದುಕೊಡುವ ಮೂಲಕ ಬಿಜೆಪಿ ರಾಜ್ಯ ಚಾಣಕ್ಯ ಎಂದೆಲ್ಲಾ ಖ್ಯಾತಿ ಪಡೆದಿದ್ದರು. ಶಿರಾ ಉಪ ಚುನಾವಣೆಯಲ್ಲಿ ವಿಜಯೇಂದ್ರ ಚುನಾವಣೆ ಎದುರಿಸಿದ್ದಲ್ಲಿ ಬಹುಶಃ ಶಾಸಕರಾಗಿ ಅಯ್ಕೆಯಾಗುವ ಎಲ್ಲಾ ಸಾಧ್ಯತೆಗಳು ಇದ್ದವು. ಅದಕ್ಕೆ ಬಿಜೆಪಿ ಅವಕಾಶ ನೀಡಲಿಲ್ಲ.
ಸಿಎಂ ಖುರ್ಚಿಯಿಂದ ಯಡಿಯೂರಪ್ಪ ಅವರನ್ನು ಇಳಿಸಿದ ಬಳಿಕ ಅವರ ಮಾತಿಗೆ ಬಿಜೆಪಿ ನಾಯಕರು ಮಹತ್ವವನ್ನೇ ಕೊಡುತ್ತಿಲ್ಲ. ಇದೀಗ ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ ಕಳಿಸುವಂತೆ ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ವಿಜಯೇಂದ್ರ ಹೆಸರು ಹೈಕಮಾಂಡ್ ಗೆ ರವಾನಿಸಲು ತೀರ್ಮಾನ ಕೈಗೊಂಡಿತ್ತು. ಅಂತಿಮ ಕ್ಷಣದಲ್ಲಿ ವಿಧಾನ ಪರಿಷತ್ ಗೆ ಪ್ರವೇಶಿಸುವ ಅವಕಾಶವನ್ನು ತಪ್ಪಿಸಲಾಗಿದೆ.
ಎರಡು ಬಾರಿ ವಿಜಯೇಂದ್ರ ಬಿಜೆಪಿ ಟಿಕೆಟ್ ವಂಚಿತರಾಗಿದ್ದಾರೆ. ಪಕ್ಷ ಕಟ್ಟಲು ಯಡಿಯೂರಪ್ಪ ಮಗ ವಿಜಯೇಂದ್ರ ಬೇಕು. ಅಧಿಕಾರದ ವಿಚಾರಕ್ಕೆ ಬಂದರೆ ಯಡಿಯೂರಪ್ಪ ಮಕ್ಕಳನ್ನು ದೂರ ಇಡಬೇಕು. ಯಾವುದು ನ್ಯಾಯ ಎಂಬ ವಿಚಾರ ಇದೀಗ ವಿಜಯೇಂದ್ರ ಅವರ ಬೆಂಬಲಿಗರ ಬಳಗದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ವಿಜಯೇಂದ್ರ ಅವರಿಗೆ ಪರಿಷತ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.
Recommended Video
ಕೇಂದ್ರ ಬಿಜೆಪಿ ನಾಯಕ ಜೆ.ಪಿ. ನಡ್ಡಾ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡದಿದ್ದಲ್ಲಿ ಮುಂದೆ ಬಿಜೆಪಿ ಅದರ ಪರಿಣಾಮ ಎದುರಿಸಲಿದೆ ಎಂದೇ ಹೇಳಲಾಗುತ್ತಿದೆ.