ಸ್ಪಷ್ಟನೆಯ ನಂತರವೂ ಅಸೆಂಬ್ಲಿ ಉಪ ಚುನಾವಣೆಗೆ ವಿಜಯೇಂದ್ರ ಸ್ಪರ್ಧೆಯ ಸುದ್ದಿ!
ಇತ್ತೀಚಿನ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರೀ ಸದ್ದು ಮಾಡುತ್ತಿರುವ ಹೆಸರೆಂದರೆ ಅದು ಬಿ.ವೈ.ವಿಜಯೇಂದ್ರ ಅವರದ್ದು. ಅವರು ರಾಜ್ಯ ಉಪಾಧ್ಯಕ್ಷರು ಎನ್ನುವುದಕ್ಕಿಂತ ಹೆಚ್ಚಾಗಿ ಸಿಎಂ ಯಡಿಯೂರಪ್ಪನವರ ಪುತ್ರ ಎನ್ನುವ ಕಾರಣಕ್ಕಾಗಿಯೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ, ಹಾಗೂ, ಒಬ್ಬರು ಇಬ್ಬರದಲ್ಲ. ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಮತ್ತವರ ಪುತ್ರನ ವಿರುದ್ದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ
ಇದರ ಜೊತೆಗೆ, ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಕೂಡಾ ರಾಜ್ಯಪಾಲರಿಗೆ ನೇರವಾಗಿ ದೂರು ನೀಡಿರುವ ವಿಚಾರ ಸಂಚಲನವನ್ನು ಮೂಡಿಸಿರುವುದು ಗೊತ್ತಿರುವ ವಿಚಾರ.
ಮುಗಿದಿಲ್ಲ ಬಿಜೆಪಿ ಬಿಕ್ಕಟ್ಟು; ಸಿಪಿ ಯೋಗೀಶ್ವರ್, ಯತ್ನಾಳ್ ಭೇಟಿ!
ಇವೆಲ್ಲದರ ನಡುವೆ, ಈಗಾಗಲೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ವಿಜಯೇಂದ್ರ ಸ್ಪಷ್ಟನೆಯನ್ನು ನೀಡಿದ್ದರೂ, ಮತ್ತೆ ಅವರ ಹೆಸರು ಮುನ್ನಲೆಗೆ ಬರುತ್ತಿದೆ. ಅದು ಉಪ ಚುನಾವಣೆ ನಡೆಯಬೇಕಾಗಿರುವ ಒಂದು ಕ್ಷೇತ್ರಕ್ಕೆ:
ಮಸ್ಕಿ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಕಳುಹಿಸಿ, ಎಲ್ಲಾ ಗೊಂದಲಕ್ಕೆ ತೆರೆ
ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆಯ ವೇಳೆಯೂ ವಿಜಯೇಂದ್ರ ಹೆಸರು ಕೇಳಿ ಬರುತ್ತಿತ್ತು. ಬಸವಕಲ್ಯಾಣದಿಂದ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿತ್ತು. ಆದರೆ, ಬಿಜೆಪಿ ವರಿಷ್ಠರು ಅವರನ್ನು ಮಸ್ಕಿ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಕಳುಹಿಸಿ, ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದರು. ಮಸ್ಕಿಯಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು.
ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರ
ಈಗ, ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಕ್ಷೇತ್ರದ ಶಾಸಕರಾಗಿದ್ದ ಉದಾಸಿಯವರು ಜೂನ್ ಎಂಟರಂದು ನಿಧನರಾಗಿದ್ದರು. ಅವರ ಪುತ್ರ ಶಿವಕುಮಾರ್ ಉದಾಸಿಯವರು ಹಾವೇರಿ ಕ್ಷೇತ್ರದ ಸಂಸದರಾಗಿದ್ದಾರೆ.
ನಮ್ಮ ವರಿಷ್ಠರು ನಿರ್ಧರಿಸಲಿದ್ದಾರೆ, ಸಚಿವ ಬೈರತಿ ಬಸವರಾಜ್ ಹೇಳಿಕೆ
ಬಿಜೆಪಿಯ ಭದ್ರಕೋಟೆಯಾಗಿರುವ ಹಾವೇರಿ ಜಿಲ್ಲೆ ಮತ್ತು ಹಾನಗಲ್ ನಲ್ಲಿ ಲಿಂಗಾಯತ ಸಮುದಾಯದ ಮತಬ್ಯಾಂಕ್ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಆ ಕಾರಣಕ್ಕಾಗಿಯೋ ಏನೋ, ವಿಜಯೇಂದ್ರ ಹೆಸರು ಓಡಾಡಲು ಆರಂಭಿಸಿದೆ. "ವಿಜಯೇಂದ್ರ ಅವರು ಸ್ಪರ್ಧಿಸಬೇಕೋ, ಬೇಡವೋ ಎನ್ನುವುದನ್ನು ನಮ್ಮ ವರಿಷ್ಠರು ನಿರ್ಧರಿಸಲಿದ್ದಾರೆ"ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.
Recommended Video
ನಿಲ್ಲುವುದಾದರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದು ಎರಡು ವರ್ಷದ ನಂತರ ತೀರ್ಮಾನ
"ಇನ್ನು ನಾನು ಚುನಾವಣೆಗೆ ನಿಲ್ಲಬೇಕೋ ಬೇಡವೋ? ನಿಲ್ಲುವುದಾದರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದು ಎರಡು ವರ್ಷದ ನಂತರ ತೀರ್ಮಾನವಾಗುತ್ತೆ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ"ಎಂದು ವಿಜಯೇಂದ್ರ ಸ್ಪಷ್ಟನೆಯನ್ನು ನೀಡಿದ ನಂತರವೂ ಅವರ ಸ್ಪರ್ಧೆಯ ವಿಚಾರ ಇನ್ನೂ ಚರ್ಚೆಯ ವಿಷಯವಾಗಿದೆ.