ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಪತ್ರ ಬರೆದ ಬಿ.ವೈ. ವಿಜಯೇಂದ್ರ
ಬೆಂಗಳೂರು, ಸೆಪ್ಟೆಂಬರ್ 12 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಕುರಿತು ವಿಜಯೇಂದ್ರ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಅಭಿಮಾನಿಗಳಿಗೆ ಪಕ್ಷದ ಕಾರ್ಯಕರ್ತರಿಗೆ ಎರಡು ಪುಟದ ಪತ್ರವನ್ನು ಬರೆದಿದ್ದಾರೆ. "ಕೆಲವರು ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ" ಎಂದು ಪತ್ರದಲ್ಲಿ ದೂರಿದ್ದಾರೆ.
"ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ ಯಡಿಯೂರಪ್ಪನವರೇ"
"ನಾನು ಕುಟುಂಬ ರಾಜಕಾರಣದಿಂದ ಪ್ರೇರಿತನಾಗಿ ರಾಜಕೀಯ ಪ್ರವೇಶಿಸಿಲ್ಲ, ಯಡಿಯೂರಪ್ಪನವರ ಹೋರಾಟದ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆಂಬ ಹಂಬಲದಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಕುಮಾರಸ್ವಾಮಿಗೆ ಟ್ವೀಟರ್ ಮೂಲಕ ತಿರುಗೇಟು ಕೊಟ್ಟ ವಿಜಯೇಂದ್ರ!
"ಕೆಲವು ಶಕ್ತಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದು ಮಾಡಿಕೊಂಡು ಕಪೋಲಕಲ್ಪಿತವಾದ ಸುದ್ದಿಗಳನ್ನು ಹರಡುವುದರಲ್ಲಿ ನಿರತರಾಗಿರುವುದು ಲಜ್ಜೆಗೇಡಿ ರಾಜಕಾರಣದ ಪರಮಾವಧಿಯಾಗಿದೆ" ಎಂದು ಪತ್ರದಲ್ಲಿ ವಿಜಯೇಂದ್ರ ತಿಳಿಸಿದ್ದಾರೆ.
ಮಗ ವಿಜಯೇಂದ್ರ ಮೂಲಕ ಯಡಿಯೂರಪ್ಪ ವರ್ಗಾವಣೆ ದಂಧೆ: ಎಚ್ ಡಿಕೆ
ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದೇನೆ
"ರಾಜಕೀಯವಾಗಿ ಈಗಷ್ಟೇ ಅಂಬೆಗಾಲಿಡುತ್ತಿರುವ ನಾನು, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆಗೊಂಡು, ಪೂಜ್ಯ ತಂದೆಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಹೋರಾಟದ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆಂಬ ಹಂಬಲದಿಂದ ಭಾರತೀಯ ಜನತಾಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡು ಯುವ ಸಮುದಾಯದಲ್ಲಿ ಒಂದು ಆತ್ಮ ವಿಶ್ವಾಸವನ್ನು ತುಂಬಿ ರಾಷ್ಟ್ರ ಕಟ್ಟುವ ಕಾಯಕದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ" ಎಂದು ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಅಪಪ್ರಚಾರದಲ್ಲಿ ತೊಡಗಿದ್ದಾರೆ
"ನನ್ನ ನಡೆ, ನುಡಿಯಲ್ಲಿ ಏನಾದರೂ ಲೋಪ-ದೋಷ ಕಂಡಾಗ ಅದನ್ನು ತಿದ್ದುವ ಅಥವಾ ಆರೋಗ್ಯಕರ ಮನಸ್ಸಿನಿಂದ ತಿಳಿಹೇಳುವ ಮಾತುಗಳನ್ನು ಹೃನ್ಮನಸ್ಸಿನಿಂದ ಸ್ವೀಕಾರ ಮಾಡುವ ಮನೋಭಾವ ಬೆಳೆಸಿಕೊಂಡಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾನು ಮುಖ್ಯಮಂತ್ರಿಗಳ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಕೆಲ ಪಟ್ಟಭದ್ರ ಹಿತ್ತಾಸಕ್ತಿಗಳು ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಇಲ್ಲ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ".
"ಸರ್ಕಾರದ ಆಡಳಿತ ಹಾಗೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆಂದು, ಕೆಲವರು ವ್ಯವಸ್ಥಿತ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪಗಳಲ್ಲಿ ತೊಡಗಿದ್ದಾರೆ. ಇದು ರಾಜಕಿಯ ಹತಾಶೆ ಹಾಗೂ ಅಸೂಯೆಯಲ್ಲದೆ ಬೇರೇನೂ ಅಲ್ಲ. ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಹಾಗೂ ನನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರ ಈ ಅಪಪ್ರಚಾರದ ಹಿಂದಿದೆ ಎಂದು ಅತ್ಯಂತ ನೋವಿನಿಂದ ಹೇಳಬೇಕಾಗಿದೆ".
ಕುಟುಂಬ ರಾಜಕಾರಣ
"ನಾನು ಕುಟುಂಬ ರಾಜಕಾರಣದಿಂದ ಪ್ರೇರಿತನಾಗಿ ರಾಜಕೀಯ ಪ್ರವೇಶಿಸಿಲ್ಲ, ಬದಲಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ಜನರ ಪ್ರೀತಿಯ ಬಂಧನಕ್ಕೆ ತಲೆಬಾಗಿ, ಕಾರ್ಯಕರ್ತರ ಒತ್ತಡಕ್ಕೆ ಮಣಿದು, 'ಇಲ್ಲ' ಎನ್ನಲಾಗದೆ ಸಾರ್ವಜನಿಕ ಕ್ಷೇತ್ರಕ್ಕೆ ಅಡಿಯಿಡಬೇಕಾದ ಅನಿರೀಕ್ಷಿತ ಬೆಳವಣಿಗೆ, ನಾನು ರಾಜಕೀಯ ಪ್ರವೇಶಿಸಬೇಕಾದ ಪರಿಸ್ಥಿತಿಗೆ ಕಾರಣವಾಯಿತು"
"ಚುನಾವಣಾ ರಾಜಕೀಯಕ್ಕೆ ಮುನ್ನ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ವರಿಷ್ಠರು ನೀಡಿದ ಸೂಚನೆಯನ್ವಯ ಇಡೀ ರಾಜ್ಯದಲ್ಲಿ ಸಂಚರಿಸಿ ಪಕ್ಷ ಕಟ್ಟುವ ಕಾಯಕದಲ್ಲಿ ನಿರತನಾಗಿದ್ದೇನೆಯೇ ಹೊರತು ಅಧಿಕಾರ-ರಾಜಕಾರಣದಲ್ಲಿ ಮೂಗು ತೂರಿಸುವ ಅನಿವಾರ್ಯತೆ ನನಗಿಲ್ಲ. ಆದರೆ, ನನ್ನಲ್ಲಿ ನಿವೇದನೆ ಮಾಡಿಕೊಳ್ಳಲು ಬರುವ ಬಡವರ, ಜನಸಾಮಾನ್ಯರ ಹಾಗೂ ಕಾರ್ಯಕರ್ತರ ನಿರೀಕ್ಷೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸುವುದು ನನ್ನ ಕರ್ತವ್ಯವಾಗಿರುತ್ತದೆ ಎಂಬುದನ್ನು ನಾನು ಇಲ್ಲಿ ಸ್ಪಷ್ಟಪಡಿಸ ಬಯಸುತ್ತೇನೆ".
ರಾಜ್ಯವನ್ನೇ ತಲ್ಲಣಗೊಳಿಸಿದೆ
"ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಅನೀರಿಕ್ಷಿತವಾಗಿ ನಾಡಿಗೆ ಎರಗಿ ಬಂದ 'ನೆರೆ ಹಾವಳಿ' ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ, ಅನೇಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ, ಊರು-ಕೇರಿಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡು ದಿಕ್ಕೆಟ್ಟುಹೋಗಿವೆ. ಇಂತಹ ಕಡುಕಷ್ಟದ ಸಂದರ್ಭವನ್ನು ನಿಭಾಯಿಸಲು ಸರ್ಕಾರ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಇದರ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಲಜ್ಜೆಗೇಡಿ ರಾಜಕಾರಣ
"ಇಂತಹ ಸಂದರ್ಭದಲ್ಲಿ ಸರ್ಕಾರದ ಹೆಜ್ಜೆಯೊಂದಿಗೆ ಹೆಜ್ಜೆಯನ್ನಿರಿಸಿ ಸಹಕಾರ ನೀಡಬೇಕಾದ ಕೆಲವು ಶಕ್ತಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದು ಮಾಡಿಕೊಂಡು ಕಪೋಲಕಲ್ಪಿತವಾದ ಸುದ್ದಿಗಳನ್ನು ಹರಡುವುದರಲ್ಲಿ ನಿರತರಾಗಿರುವುದು ಲಜ್ಜೆಗೇಡಿ ರಾಜಕಾರಣದ ಪರಮಾವಧಿಯಾಗಿದೆ. ನಾಡು ಸಮೃದ್ಧಗೊಳಿಸುವ ಮೂಲಕ 'ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ಭಾರತ ಕಟ್ಟುವ ಯೋಜನೆಗೆ' ಮಹತ್ವದ ಕೊಡುಗೆ ನೀಡುವ ಛಲ ಹೊತ್ತು ದಣಿವರಿಯದ, ದಕ್ಷ ಆಡಳಿತ ನೀಡುತ್ತಿರುವ ಶ್ರೀ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರಕ್ಕೆ ಅಪಖ್ಯಾತಿ ತರಬೇಕೆಂಬ ಹತಾಶೆಯ ಮನಸ್ಸುಗಳು ಈ ಅಪಪ್ರಚಾರದ ಮೂಂಚೂಣಿಯಲ್ಲಿರುವುದು ದುರ್ದೈವದ ಸಂಗತಿ" ಎಂದು ವಿಜಯೇಂದ್ರ ಹೇಳಿದ್ದಾರೆ.
ಆಧಾರರಹಿತ ಆರೋಪ
"ಪ್ರೀತ್ಯಾಧಾರಗಳಿಂದ ಸೂಕ್ತ ಮಾರ್ಗದರ್ಶನ ನೀಡಿ ಕೈ ಹಿಡಿದು ಮುನ್ನಡೆಸುವ ಹಿರಿಯರೂ ಹಾಗೂ ಅಭಿಮಾನಿ ಹಿತೈಷಿಗಳು ನಮ್ಮೊಂದಿಗೆ ಇರುವಾಗ ಆಧಾರರಹಿತ ಅಪಪ್ರಚಾರ, ಪಿತೂರಿ, ಹುನ್ನಾರಗಳಿಗೆ ನಾನಾಗಲೀ, ನಮ್ಮ ಪಕ್ಷದ ಕಾರ್ಯಕರ್ತರಾಗಲೀ ಎದೆಗುಂದುವ ಮಾತೇ ಇಲ್ಲ, ಬದಲಾಗಿ ಭಾರತೀಯ ಜನತಾ ಪಾರ್ಟಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಹಾಗೂ ಸಮಾಜದ ಸರ್ವವರ್ಗಗಳ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ನಮ್ಮ ಉತ್ಸಾಹವನ್ನು ಯಾರೂ ಕುಗ್ಗಿಸಲಾಗದು. ಎದುರಾಗುವ ಟೀಕೆ, ಸುಳ್ಳು-ವದಂತಿಗಳಿಗೆ ಯಾವುದೇ ಮಾನ್ಯತೆ ನೀಡದೇ, ನಾನು ನಂಬಿರುವ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧನಾಗಿ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸವೆಸಿದ ಹಾದಿಯಲ್ಲಿ ಸಮಾಜ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡು ಮುನ್ನಡೆಯಲು ನಿಮ್ಮ ಆಶೀರ್ವಾದವನ್ನು ಸದಾ ನಿರೀಕ್ಷಿಸುತ್ತೇನೆ" ಎಂದು ಹೇಳಿದ್ದಾರೆ.