ಉಪ ಚುನಾವಣೆ; ಬಿಜೆಪಿಗೆ ಕಗ್ಗಂಟಾದ ಮೂರು ಕ್ಷೇತ್ರದ ಬಂಡಾಯ
ಬೆಂಗಳೂರು, ನವೆಂಬರ್ 19 : 15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣೆಯ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಬಂಡಾಯ ಶಮನ ಮಾಡಲು ಮುಂದಾಗಿದ್ದಾರೆ.
ಬಂಡಾಯದ ಕಾರಣದಿಂದ ಉಪ ಚುನಾವಣೆಯಲ್ಲಿ ಹಿನ್ನಡೆ ಆಗಬಾರದು ಎಂಬುದು ಯಡಿಯೂರಪ್ಪ ಚಿಂತನೆಯಾಗಿದೆ. ಆದ್ದರಿಂದ, ಬಂಡಾಯ ಉಂಟಾಗಿರುವ ಕ್ಷೇತ್ರದಲ್ಲಿ ಅದನ್ನು ಶಮನಗೊಳಿಸಲು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಿದ್ದಾರೆ.
ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆ
ಮೂವರು ಉಪ ಮುಖ್ಯಮಂತ್ರಿಗಳು, ಹಿರಿಯ ಸಚಿವರಾದ ಆರ್. ಅಶೋಕ, ಬಸವರಾಜ ಬೊಮ್ಮಾಯಿ, ಜೆ. ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಜಗದೀಶ್ ಶೆಟ್ಟರ್ ಬಂಡಾಯ ಶಮನಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.
15 ಕ್ಷೇತ್ರದ ಉಪ ಚುನಾವಣೆ; ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್
ನವೆಂಬರ್ 21 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಷ್ಟರೊಳಗೆ ಅಭ್ಯರ್ಥಿಗಳ ಮನವೊಲಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬೆಳಗಾವಿ ಬಂಡಾಯ ತಪ್ಪಿಸಲು ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ
ಯಾವ-ಯಾವ ಕ್ಷೇತ್ರದಲ್ಲಿ ಬಂಡಾಯ
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ವಿಜಯನಗರ, ಅಥಣಿ ಮತ್ತು ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಬಗ್ಗೆ ಯಡಿಯೂರಪ್ಪ ಮತ್ತು ಎಂಟಿಬಿ ನಾಗರಾಜ್ ತಲೆಕೆಡಿಸಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬಿಜೆಪಿ ನಾಯಕರ ಮಾತಿಗೆ ಯಾವುದೇ ಬೆಲೆ ಕೊಡುತ್ತಿಲ್ಲ.
ಅಥಣಿ ಕ್ಷೇತ್ರದ ಬಂಡಾಯ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿಲ್ಲ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರಪ್ಪ ದಾಶ್ಯಾಳ ಜೆಡಿಎಸ್ನಿಂದ ಕಣಕ್ಕಿಳಿದಿದ್ದು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ. ಲಕ್ಷ್ಮಣ ಸವದಿ ಆಪ್ತರಾದ ಗುರಪ್ಪ ಬಂಡಾಯದ ಬಾವುಟ ಹಾರಿಸಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ. ಅವರ ಮನವೊಲಿಕೆ ಮಾಡುವ ಜವಾಬ್ದಾರಿಯನ್ನು ಯಡಿಯೂರಪ್ಪ ಲಕ್ಷ್ಮಣ ಸವದಿಗೆ ನೀಡಿದ್ದಾರೆ. ಸಂಧಾನ ಫಲ ಕೊಡುವುದೇ? ಎಂದು ಕಾದು ನೋಡಬೇಕಿದೆ.
ಹೊಸಕೋಟೆ ಕ್ಷೇತ್ರ
ತಂದೆ ಬಿ. ಎನ್. ಬಚ್ಚೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ, ಎಂಟಿಬಿ ನಾಗರಾಜ್ ಎಲ್ಲರಿಗೂ ಸೆಡ್ಡು ಹೊಡೆದು ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶರತ್ ಬಚ್ಚೇಗೌಡ ಕಣದಲ್ಲಿ ಉಳಿದರೆ ಎಂಟಿಬಿ ನಾಗರಾಜ್ ಗೆಲುವು ಕಷ್ಟವಾಗಲಿದೆ. ಆದ್ದರಿಂದ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣಗೆ ಶರತ್ ಬಚ್ಚೇಗೌಡ ಮನವೊಲಿಕೆ ಜವಾಬ್ದಾರಿ ನೀಡಲಾಗಿದೆ. ಕೆಲವು ಸ್ವಾಮೀಜಿಗಳ ಮೂಲಕ ಮನವೊಲಿಕೆ ಯತ್ನವನ್ನು ಮಾಡಲಾಗುತ್ತಿದೆ. ಆದರೆ, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. 15 ಕ್ಷೇತ್ರಗಳಲ್ಲಿ ಹೊಸಕೋಟೆ ಕ್ಷೇತ್ರದ ಚುನಾವಣೆ ಕುತೂಹಲದ ಕಣವಾಗಿದೆ.
ವಿಜಯನಗರ ಕ್ಷೇತ್ರ
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರವೂ ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಪಕ್ಷದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕವಿರಾಜ್ ಅರಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಆನಂದ್ ಸಿಂಗ್. ಆರೋಗ್ಯ ಸಚಿವ ಬಿ. ಶ್ರೀರಾಮುಲು ಕವಿರಾಜ್ ಅರಸ್ ಜೊತೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಕವಿರಾಜ್ ಜೊತೆ ಮಾತುಕತೆ ನಡೆಸಿ, ಆನಂದ್ ಸಿಂಗ್ ಗೆಲ್ಲಲೇಬೇಕು ಎಂದು ಯಡಿಯೂರಪ್ಪ ಬಳ್ಳಾರಿ ಜಿಲ್ಲಾ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್ನಿಂದ ಎನ್. ಎಂ. ನಬಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾರೆ.