ಉಪ ಚುನಾವಣೆ; ಮಿಷನ್ 12 ಜೊತೆ ಕಣಕ್ಕಿಳಿದ ಸಿದ್ದರಾಮಯ್ಯ!
Recommended Video
ಬೆಂಗಳೂರು, ಸೆಪ್ಟೆಂಬರ್ 23 : 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಯನ್ನು ಕಾಂಗ್ರೆಸ್ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 12 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಪಣತೊಟ್ಟಿದ್ದಾರೆ.
ಕಾಂಗ್ರೆಸ್-ಜೆಡಿಎಸ್ನ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಸ್ಪೀಕರ್ ಅನರ್ಹಗೊಳಸಿದರು. ಇದರಿಂದಾಗಿ ಉಪ ಚುನಾವಣೆ ಎದುರಾಗಿದೆ. ಉಪ ಚುನಾವಣೆ ಎದುರಾಗಲು ಕಾರಣವಾದ ಶಾಸಕರಲ್ಲಿ ಹಲವರು ಸಿದ್ದರಾಮಯ್ಯ ಆಪ್ತರು.
ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಟಿಕೆಟ್ ಹಂಚಿಕೆಯೇ ತಲೆನೋವು!
ಪಕ್ಷಕ್ಕೆ ದ್ರೋಹ ಬಗೆದ ಶಾಸಕರು ಈ ಬಾರಿ ಗೆಲುವು ಸಾಧಿಸಬಾರದು ಎಂಬುದು ಸಿದ್ದರಾಮಯ್ಯ ತಂತ್ರವಾಗಿದೆ. ಗೆಲ್ಲುವ ಅಭ್ಯರ್ಥಿ ಮುಖ್ಯವಾಗಬೇಕೆ ಹೊರತು ಬೇರೆ ಯಾವುದೂ ಅಲ್ಲ ಎಂದು ತೀರ್ಮಾನಿಸಿರುವ ಕಾಂಗ್ರೆಸ್ ನಾಯಕರು ಉತ್ಸಾಹದಿಂದ ಸಿದ್ಧತೆ ಆರಂಭಿಸಿದ್ದಾರೆ.
ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್
ಕೆ. ಆರ್. ಪುರ, ಯಶವಂತಪುರ, ಹೊಸಕೋಟೆ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ. ಅಗತ್ಯವಿದ್ದರೆ ಬೇರೆ ಪಕ್ಷದ ನಾಯಕರನ್ನು ಸೆಳೆದು ಟಿಕೆಟ್ ನೀಡಲು ಗಂಭೀರವಾದ ಚಿಂತನೆ ನಡೆಸಲಾಗುತ್ತಿದೆ.
ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಕಾಂಗ್ರೆಸ್ಗೆ?
ಸಂಭಾವ್ಯರ ಪಟ್ಟಿ ಸಿದ್ಧ
ಈಗಾಗಲೇ ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ನಡೆಸುವ ಮೂಲಕ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಿದ್ದಾರೆ. ಹೈಕಮಾಂಡ್ ನಾಯಕರಿಗೆ ಅದನ್ನು ಸಲ್ಲಿಕೆ ಮಾಡಲಿದ್ದು, ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕವೇ ಪ್ರಕಟಿಸಲಾಗುತ್ತದೆ.
ಜೆಡಿಎಸ್ ಜೊತೆ ಮೈತ್ರಿ ಇಲ್ಲ
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ. ಅತ್ತ ಜೆಡಿಎಸ್ ಸಹ ಮೈತ್ರಿ ಮುಗಿದ ಅಧ್ಯಾಯ ಎಂದು ಹೇಳಿರುವುದು ಸ್ವತಂತ್ರವಾಗಿ ಕಣಕ್ಕಿಳಿಯಲು ಎರಡೂ ಪಕ್ಷ ಸಿದ್ಧ ಎಂಬ ಸಂದೇಶ ಕೊಟ್ಟಿದೆ.
12 ಕ್ಷೇತ್ರ ಗೆಲ್ಲುವ ಗುರಿ
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರ ಗೆಲ್ಲಬೇಕು ಎಂಬುದು ಕಾಂಗ್ರೆಸ್ ಗುರಿಯಾಗಿದೆ. ಆದ್ದರಿಂದ, ಎಲ್ಲಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಹೊಸಕೋಟೆಯಲ್ಲಿ ಸಮಾವೇಶ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.
ಬೇರೆ ಪಕ್ಷದ ನಾಯಕರಿಗೆ ಗಾಳ
ಯಶವಂತಪುರದಲ್ಲಿ ಜೆಡಿಎಸ್ನ ಜವರಾಯಿ ಗೌಡ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ನಾಯಕ ರಾಜು ಕಾಗೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿ ಮಾಡಲು ಸಿದ್ದರಾಮಯ್ಯ ಚಿಂತನೆ ನಡೆಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ? ಎಂದು ಕಾದು ನೋಡಬೇಕಿದೆ.