ಪ್ರವಾಹ, ದಸರಾಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಇಲ್ಲ
ಬೆಂಗಳೂರು, ಸೆಪ್ಟೆಂಬರ್ 22 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿದೆ. ಆದರೆ, ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದರು. "ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ, ನೆರೆ ಪರಿಹಾರ ಕಾರ್ಯಗಳಿಗೆ ಇದು ಅಡ್ಡಿಯಾಗುವುದಿಲ್ಲ" ಎಂದು ಹೇಳಿದರು.
"ನೆರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬಹುದು. ಆದರೆ, ಹೊಸ ಯೋಜನೆಗಳ ಉದ್ಘಾಟನೆಯಂತಹ ಕಾರ್ಯಕ್ರಮಗಳಿಂದ ರಾಜಕಾರಣಿಗಳು ದೂರವಿರಬೇಕು. ದಸರಾ ಉತ್ಸವಗಳಿಗೆ ವಿಶೇಷ ಅನುಮತಿ ಪಡೆದು ಕಾರ್ಯಕ್ರಮಗಳನ್ನು ನಡೆಸಬಹುದು. ರಾಜಕಾರಣಿಗಳು ಕೆಲವು ನಿರ್ಬಂಧ ಪಾಲಿಸಬೇಕಾಗುತ್ತದೆ" ಎಂದು ತಿಳಿಸಿದರು.
ದೀಪಾವಳಿಗೂ ಮುನ್ನವೇ ಉಪಚುನಾವಣೆ: 15 ಕ್ಷೇತ್ರಗಳ ಪಟ್ಟಿ ಹೀಗಿದೆ
"ವಿಧಾನಸಭಾ ಕ್ಷೇತ್ರಗಳು ಇರುವ ಜಿಲ್ಲೆಗಳಿಗೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆ. ಮತದಾರರನ್ನು ಓಲೈಸುವಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯ ತನಕ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ" ಎಂದು ಸಂಜೀವ್ ಕುಮಾರ್ ಸ್ಪಷ್ಟಪಡಿಸಿದರು.
ಅನರ್ಹ ಶಾಸಕರು ಉಪ ಚುನಾವಣೆ ಸರ್ಧಿಸಲು ಅವಕಾಶವಿಲ್ಲ
ಚುನಾವಣೆ ನಡೆಯುವ ಕ್ಷೇತ್ರಗಳು
ಕರ್ನಾಟಕದ 1.ಯಲ್ಲಾಪುರ (ಉತ್ತರ ಕನ್ನಡ), 2.ಯಶವಂತಪುರ (ಬೆಂಗಳೂರು), 3.ವಿಜಯನಗರ (ಬಳ್ಳಾರಿ), 4. ಶಿವಾಜಿನಗರ (ಬೆಂಗಳೂರು), 5. ಹೊಸಕೋಟೆ (ಬೆಂಗಳೂರು ಗ್ರಾಮಾಂತರ), 6. ಹುಣಸೂರು (ಮೈಸೂರು), 7.ಕೃಷ್ಣರಾಜಪೇಟೆ (ಮಂಡ್ಯ), 8. ಮಹಾಲಕ್ಷ್ಮೀ ಲೇಔಟ್ (ಬೆಂಗಳೂರು), 9. ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ), 10. ಗೋಕಾಕ್ (ಬೆಳಗಾವಿ), 11. ಅಥಣಿ (ಬೆಳಗಾವಿ), 12. ರಾಣೆಬೆನ್ನೂರು (ಹಾವೇರಿ), 13.ಕಾಗವಾಡ (ಬೆಳಗಾವಿ), 14. ಹಿರೇಕೆರೂರು (ಹಾವೇರಿ), 15. ಕೆ. ಆರ್. ಪುರ (ಬೆಂಗಳೂರು) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ
15 ಕ್ಷೇತ್ರಗಳ ಚುನಾವಣೆಗೆ ಸೆಪ್ಟೆಂಬರ್ 23ರ ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 3 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ, ಅಕ್ಟೋಬರ್ 21ರಂದು ಮತದಾನ ನಡೆಯಲಿದೆ, ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.
37.49 ಲಕ್ಷ ಮತದಾರರು
2019ರ ಜನವರಿ 1ಕ್ಕೆ ಅನ್ವಯವಾಗುವಂತೆ ಹೊಸ ಮತದಾರರು ಅಕ್ಟೋಬರ್ 23ರೊಳಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ಹೆಸರು ಸೇರಿಸಿದರೆ ಅಕ್ಟೋಬರ್ 21ರಂದು ಮತದಾನ ಮಾಡಲು ಅವಕಾಶವಿದೆ.
15 ಕ್ಷೇತ್ರದಲ್ಲಿ ಪ್ರಸ್ತುತ 19.12 ಲಕ್ಷ ಪುರುಷರು, 18.36 ಲಕ್ಷ ಮಹಿಳೆಯರು ಸೇರಿ ಒಟ್ಟು 37.49 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ 70,619 ಮಂದಿ 18 ವರ್ಷದ ಮತದಾರರು.
ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆ
17 ಅನರ್ಹ ಶಾಸಕರ ಪೈಕಿ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ರಾಜರಾಜೇಶ್ವರಿ ನಗರ ಮತ್ತು ಮುಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು.