ಹೊಸಕೋಟೆ ಕ್ಷೇತ್ರ ಪರಿಚಯ: ಎಂಟಿಬಿಗೆ ಪ್ರತಿಷ್ಠೆ, ಕಾಂಗ್ರೆಸ್ಗೆ ಪ್ರತೀಕಾರದ ಹಂಬಲ
ಬೆಂಗಳೂರಿನ ಬಗಲಿಗೆ ಅಂಟಿಕೊಂಡೇ ಇರುವ ಹೊಸಕೋಟೆ ಕ್ಷೇತ್ರ ಭಾರಿ ಈ ಬಾರಿಯ ಉಪಚುನಾವಣೆಯಲ್ಲಿ ಕುತೂಹಲದ ಕೇಂದ್ರ. ಈ ಉಪಚುನಾವಣೆ ಎಂಟಿಬಿ ನಾಗರಾಜುಗೆ ಪ್ರತಿಷ್ಠೆಯ ವಿಷಯವಾಗಿದ್ದರೆ, ಕಾಂಗ್ರೆಸ್ಗೆ ಪ್ರತೀಕಾರದ ಅವಕಾಶವಾಗಿದೆ.
ಬಹುದಶಕ ಹೊಸಕೋಟೆಯಲ್ಲಿ ನಡೆದ ತೋಳ್ಬಲದ ರಾಜಕಾರಣದಿಂದಾಗಿ ಇದನ್ನು ಕರ್ನಾಟಕದ ಬಿಹಾರವೆಂದೇ ಕರೆಯಲಾಗುತ್ತದೆ. ಬಚ್ಚೇಗೌಡರ ಕುಟುಂಬಸ್ಥರ 'ಧೃತರಾಷ್ಟ್ರ ಅಪ್ಪುಗೆ' ಮುಕ್ತಿ ಪಡೆಯಲೆಂದೇ ಇಲ್ಲಿನ ಜನ ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜು ಅವರನ್ನು ಗೆಲ್ಲಿಸಿದ್ದಾರೆ. ಈ ಮುಂಚೆ 2004 ರಲ್ಲಿಯೂ ಒಮ್ಮೆ ಅವರು ಶಾಸಕಾರಿದ್ದರು. ಆದರೆ ಎಂಟಿಬಿ ನಾಗರಾಜು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ನಡೆಯಲು ಕಾರಣವಾಗಿದ್ದಾರೆ.
ಎಂಟಿಬಿ ನಾಗರಾಜು ರಾಜೀನಾಮೆ ನೀಡಲು ಕಾರಣವೇನು ಎಂಬುದು ಸ್ವತಃ ಕ್ಷೇತ್ರದ ಜನಕ್ಕೇ ಅರ್ಥವಾಗಿಲ್ಲ. ಎಂಟಿಬಿ ನಾಗರಾಜು ಮೇಲೆ ಸಿದ್ದರಾಮಯ್ಯ ಅವರ ಕೃಪಕಟಾಕ್ಷ ಅವರ ಮೇಲೆ ತುಸು ಹೆಚ್ಚಿಗೆ ಎನ್ನುವಷ್ಟೆ ಇತ್ತು. ಮೈತ್ರಿ ಸರ್ಕಾರದ ಸಚಿವ ಸ್ಥಾನ ಆಕಾಂಕ್ಷಿಗಳ ದೊಡ್ಡ ಗುಂಪಿದ್ದರೂ ಸಹ ಎಂಟಿಬಿ ನಾಗರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗಿದ್ದಾಗಲೂ ಸಹ ಎಂಟಿಬಿ ನಾಗರಾಜು ಶಾಸಕ ಸ್ಥಾನಕ್ಕೆ ರಾಜೀನಾಮೆ ಏಕೆ ನೀಡಿದರು? ಎಂಬ ಪ್ರಶ್ನೆಗೆ ಕ್ಷೇತ್ರದ ಜನ ಉತ್ತರ ಹುಡುಕುತ್ತಲೇ ಇದ್ದಾರೆ.
ಹೊಸಕೋಟೆ ಕ್ಷೇತ್ರದಲ್ಲಿ ಸುಮಾರು 2.50 ಲಕ್ಷ ಮತದಾರರಿದ್ದಾರೆ. ಕುರುಬ ಮತ್ತು ಒಕ್ಕಲಿಗ ಸಮುದಾಯದ ಮತಗಳೇ ಕ್ಷೇತ್ರದಲ್ಲಿ ಹೆಚ್ಚು. ಎಂಟಿಬಿ ನಾಗರಾಜು, ತಮ್ಮ ಕುರುಬ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್ನ ನಿಷ್ಠಾವಂತ ಮತದಾರರ ಕೃಪೆಯಿಂದಾಗಿಯೇ 3 ಬಾರಿ ಗೆದ್ದು ಬಂದಿದ್ದಾರೆ. ಆದರೆ ಈ ಬಾರಿ ಲೆಕ್ಕಾಚಾರ ಬೇರೆಯೇ ಆಗುವ ಸಂಭವವಿದೆ. ಈ ಬಾರಿ ಕಾಂಗ್ರೆಸ್ನ ನಿಷ್ಠಾವಂತ ಮತದಾರರ ಕೃಪೆ ಎಂಟಿಬಿ ನಾಗರಾಜು ಮೇಲಿರುವುದಿಲ್ಲ ಮತ್ತು ಕುರುಬ ಸಮುದಾಯದ ಮತ ಛಿಧ್ರ ಮಾಡಲೆಂದೇ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಹೊಸಕೋಟೆಗೆ ಈಗಾಗಲೇ ಅಡಿ ಇಟ್ಟಿದ್ದಾರೆ.
ಕ್ಷೇತ್ರ ಪರಿಚಯ : ಬೆಂಗಳೂರು ನಗರಕ್ಕೆ ಸೇರಿ ಹೋಗಿರುವ ಹೊಸಕೋಟೆ!
ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣದಿಂದ ಹಾಗೂ ಕೈಗಾರಿಕಾ ಪ್ರದೇಶ ಹಾಗೂ ವಿಮಾನ ನಿಲ್ದಾಣಕ್ಕೂ ಹತ್ತಿರದಲ್ಲೇ ಇರುವ ಹೊಸಕೋಟೆ ಅಭಿವೃದ್ಧಿಯಲ್ಲಿ ತೀರಾ ಹಿಂದೆಯೇನೂ ಉಳಿದಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ದಶಕದಿಂದ ಈ ಕ್ಷೇತ್ರದ ಬೆನ್ನು ಬಿಡುತ್ತಿಲ್ಲ. ಸಚಿವರಾಗಿ ಎಂಟಿಬಿ ನಾಗರಾಜುಗೆ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಕೈಹಾಕುವ ಸುವರ್ಣಾವಕಾಶ ಲಭಿಸಿತ್ತು, ಆದರೆ ಅದನ್ನು ಅವರು ಕೈಯಾರೆ ಹಾಳು ಮಾಡಿಕೊಂಡಿದ್ದಾರೆ.
2000 ನೇ ಇಸವಿಯಲ್ಲಿ ಸಣ್ಣ ಬಾಡಿಗೆ ಶೆಡ್ನಲ್ಲಿ ಇಟ್ಟಿಗೆ ಕಾರ್ಖಾನೆ ಪ್ರಾರಂಭ ಮಾಡಿ ಈಗ 1000 ಕೋಟಿಗೂ ಹೆಚ್ಚಿನ ಆಸ್ತಿಯ ಒಡೆಯನಾಗಿರುವ ಎಂಟಿಬಿಗೆ ಹೊಸಕೋಟೆಯಲ್ಲಿ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಕೇವಲ ಕಾಂಗ್ರೆಸ್ ಟಿಕೆಟ್ನಿಂದ ಎಂಟಿಬಿ ಗೆಲ್ಲುತ್ತಿದ್ದರು ಎಂಬುದು ಒಪ್ಪಲಾರದ ಮಾತು. ಆದರೆ ಎಂಟಿಬಿ ನಾಗರಾಜು ಅವರು ರಾಜೀನಾಮೆ ನೀಡುವ ಮೂಲಕ ಜನರಲ್ಲಿ ಸಂದೇಹವೊಂದನ್ನು ನೆಟ್ಟು ಬಿಟ್ಟಿದ್ದಾರೆ, ಅದು ಅವರಿಗೆ ವ್ಯತಿರಿಕ್ತವಾಗಿ ಕಾರ್ಯ ಮಾಡುವ ಸಾಧ್ಯತೆಯೇ ಹೆಚ್ಚೆಂದು ಹೇಳಲಾಗುತ್ತಿದೆ.
ಎಂಟಿಬಿ ನಾಗರಾಜ್ ಎದೆಯಲ್ಲೀಗ ಸಿದ್ದರಾಮಯ್ಯ ಇಲ್ಲ, ಮತ್ತಿನ್ಯಾರಿದ್ದಾರೆ?
ಈ ಬಾರಿ ಉಪಚುನಾವಣೆಗೆ ಎಂಟಿಬಿ ನಾಗರಾಜು ಅವರ ಬದಲಿಗೆ ಅವರ ಪುತ್ರ ನಿತಿನ್ ಪುರುಶೋತ್ತಮ ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ, ಅದೂ ಬಿಜೆಪಿ ಟಿಕೆಟ್ನಿಂದ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದಿಡುವ ಬಚ್ಚೇಗೌಡರಿಗೂ ಎಂಟಿಬಿಗೂ ಹಾವು-ಮುಂಗುಸಿಯ ವೈರ. ಹಾಗೊಮ್ಮೆ ಬಿಜೆಪಿ ಟಿಕೆಟ್ ಪಡೆಯಲು ಎಂಟಿಬಿ ನಾಗರಾಜು ಸಫಲರಾದರೆ ಬಚ್ಚೇಗೌಡ ಅವರು ತಿರುಗುಬೀಳುವುದು ಬಹುತೇಕ ಖಚಿತ. ಅದರ ಲಾಭವನ್ನು ಕಾಂಗ್ರೆಸ್ ಪಡೆಯದೇ ಬಿಡುವುದಿಲ್ಲ.
ಉಪಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿಗೆ ಗೆಲುವು ಸುಲಭದ ತುತ್ತೇನಲ್ಲ!
ಸಿದ್ದರಾಮಯ್ಯ ಅವರನ್ನು ಎದೆಯಲ್ಲಿಟ್ಟಿಕೊಂಡಿದ್ದ ಎಂಟಿಬಿ ನಾಗರಾಜು ಈಗ ಅವರನ್ನೇ ಎದುರುಹಾಕಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಂತೂ ಸದನದಲ್ಲಿಯೇ 'ನನ್ನ ಎಂಟಿಬಿ ಭೇಟಿ ಹೊಸಕೋಟೆ ರಣರಂಗದಲ್ಲಿ' ಎಂದುಸವಾಲು ಹಾಕಿದ್ದಾರೆ, ಈ ಎಲ್ಲ ಕಾರಣಗಳಿಗಾಗಿ ಹೊಸಕೋಟೆ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.