ಉಪ ಸಮರ ಫಲಿತಾಂಶದ ಬಗ್ಗೆ ಅನರ್ಹ ಶಾಸಕರಿಗೇಕೆ ಆತಂಕ?
ಬೆಂಗಳೂರು, ಡಿಸೆಂಬರ್ 07: ಯಡಿಯೂರಪ್ಪ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 6 ಸ್ಥಾನಗಳನ್ನಾದರೂ ಗೆಲ್ಲಿಸಿಕೊಳ್ಳಬೇಕು. ಜೊತೆಗೆ ಗೆದ್ದ ಕ್ಷೇತ್ರದ ಶಾಸಕರಿಗೆ ನೀಡಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಇದಲ್ಲದೆ, ಎರಡು ಮೂರು ಎಂಎಲ್ಸಿ ಸ್ಥಾನಗಳನ್ನು ತುಂಬಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ. ಹೀಗಾಗಿ, ಸೋಮವಾರ(ಡಿಸೆಂಬರ್ 09) ರಂದು ಹೊರ ಬರಲಿರುವ ಉಪ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಮೂಡಿದೆ.
ಇದಲ್ಲದೆ, ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಇಲ್ಲವೆಂಬ ಬಿಜೆಪಿ ತೀರ್ಮಾನದ ಹಿನ್ನೆಲೆಯಲ್ಲಿ ಚುನಾವಣೆ ಫಲಿತಾಂಶತ್ತ ಅನರ್ಹ ಶಾಸಕರ ಆತಂಕದ ನೋಟ ಬೀರಿದ್ದಾರೆ. ಒಂದು ವೇಳೆ ಗೆಲುವು ಕಷ್ಟವಾದರೆ ತಮ್ಮ ರಾಜಕೀಯ ಭವಿಷ್ಯ ಏನು ಅನ್ನುವ ಚಿಂತೆ ಕೆಲವರಿಗೆ ಕಾಡುತ್ತಿದೆ.
ಟಿಕೆಟ್ಗೆ ಮುಂಚೆಯೇ ಷರತ್ತು ಹಾಕಿದ್ದ ಬಿಜೆಪಿ ಹೈಕಮಾಂಡ್, ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತರೆ ಸಚಿವ ಸ್ಥಾನ ಕೊಡಲ್ಲ ಎಂದಿದೆ. ಆದರೆ ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಮಾತ್ರ ಸೋಲಲಿ ಗೆಲ್ಲಲಿ ಎಲ್ಲರಿಗೂ ಮಂತ್ರಿಗಿರಿ ನೀಡುವ ಭರವಸೆ ಕೊಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರನ್ನು ಎಂಎಲ್ಸಿ ಮಾಡಿ, ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಅನರ್ಹರ ಪರ ಜನರ ಒಲವು? ಸಮೀಕ್ಷೆಗಳು ಹೇಳುವುದೇನು?
ಸಂಪುಟ ಪುನಾರಚನೆ ವೇಳೆ ಹೇಗಾದರೂ ಮಂತ್ರಿ ಸ್ಥಾನ ಹಿಡಿಯಲು ಲಾಬಿ ತೀವ್ರ ಗೊಳಿಸಿರುವ ಬಿಜೆಪಿ ಶಾಸಕರು, ಹಿರಿಯ ಮುಖಂಡರು, ಸಿಎಂ ಮನೆಗೆ ಭೇಟಿ ನೀಡುತ್ತಿದ್ದಾರೆ.
ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ
ಬಿಎಸ್ ವೈ ಸಂಪುಟದಲ್ಲಿ ಖಾಲಿ ಇವೆ ಇನ್ನು 16 ಖಾತೆಗಳು, ಚುನಾವಣೆಯಿಂದ ಹಿಂದೆ ಸರಿದಿರುವ ಅನರ್ಹ ಶಾಸಕ ಆರ್. ಶಂಕರ್ ಅವರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ.
ಎಲ್ಲಾ ಸಮೀಕ್ಷೆಗಳ ಸರಾಸರಿ ಹೇಗಿದೆ
ಎಲ್ಲಾ ಸಮೀಕ್ಷೆಗಳ ಸರಾಸರಿ ನೋಡಿದರೆ ಕೇವಲ 8 ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಬಿಜೆಪಿ ಸಮೀಕ್ಷೆ ಕೂಡ 10ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ವರದಿ ಬಂದಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನಿಗಮ-ಮಂಡಳಿಗಳಿಗೆ ನೇಮಕಾತಿಯೂ ಕಷ್ಟವಾಗಲಿದೆ. ಹೀಗಾಗಿ, ಸರ್ಕಾರ ಉಳಿಯುವ ಆತಂಕ ದೂರಾದರೂ ಎಲ್ಲರಿಗೂ ಸ್ಥಾನ ಕಲ್ಪಿಸುವ ಭರವಸೆ ಈಡೇರಿಸುವ ಬಗ್ಗೆ ಯಡಿಯೂರಪ್ಪ ಅವರಿಗೂ ಆತಂಕವಿದೆ.
ಉಮೇಶ್ ಕತ್ತಿ ಸೇರಿದಂತೆ ಹಿರಿಯರು ಕಾದಿದ್ದಾರೆ
8 ಬಾರಿ ಶಾಸಕರಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಬಹುಕಾಲದಿಂದ ಸಂಪುಟ ಸೇರಲು ಕಾದಿದ್ದಾರೆ. ಅನೇಕ ಬಾರಿ ಮಂತ್ರಿ ಸ್ಥಾನ ಬಗ್ಗೆ ಬಹಿರಂಗವಾಗಿ ತಮ್ಮ ಆಸೆ ತೋಡಿಕೊಂಡಿದ್ದಾರೆ. ಕತ್ತಿಗೆ ಈ ಬಾರಿ ಸ್ಥಾನ ಕಲ್ಪಿಸದಿದ್ದರೆ ಬಂಡಾಯ ಏಳುವ ಭೀತಿ ಇರುವುದರಿಂದ ಕತ್ತಿಗೆ ಉತ್ತಮ ಸ್ಥಾನ ಸಿಗುವುದು ಖಾತ್ರಿಯಾಗಿದೆ. ಜೊತೆಗೆ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಜೊತೆಗೆ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ಬಾಕಿಯಿದೆ.
ಹಾಲಿ ಸಚಿವ ಸಂಪುಟ ಹೀಗಿದೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ. ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮುಂದಿನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.