ಫಲಿತಾಂಶಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಪ್ರಕ್ರಿಯೆಯತ್ತ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ 13 ಸ್ಥಾನಗಳು ಲಭಿಸಲಿವೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. 15 ರಲ್ಲಿ ಕನಿಷ್ಠ 7 ಸ್ಥಾನಗಳನ್ನಾದರೂ ಬಿಜೆಪಿ ಗೆದ್ದರೆ ಮಾತ್ರ ಸರ್ಕಾರ ಸೇಫ್ ಆಗಲಿದೆ. ಆದರೆ, ಫಲಿತಾಂಶ ಪ್ರಕ್ರಿಯೆಗೂ ಮುನ್ನವೇ ಬಿ.ಎಸ್ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಕಸರತ್ತಿಗೆ ಕೈ ಹಾಕಿದ್ದಾರೆ.
ಸಾಗರದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ''ಉಪಚುನಾವಣೆಯಲ್ಲಿ ಕನಿಷ್ಠ 13 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್, ಜೆಡಿಎಸ್ ತಲಾ 1 ಸ್ಥಾನ ಗೆದ್ದರೆ ಹೆಚ್ಚು. ಮುಂದಿನ ಮೂರೂವರೆ ವರ್ಷಗಳ ಕಾಲ ಸ್ಥಿರ ಸರ್ಕಾರವನ್ನು ನೀಡುತ್ತೇವೆ. ಮುಂದಿನ ಬಜೆಟ್ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಶೀಘ್ರವೇ ಚರ್ಚಿಸುತ್ತೇನೆ ಎಂದರು.
ಕರ್ನಾಟಕದ 17 ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿದ್ದು ಈಗ ಇತಿಹಾಸ. ರಾಜೀನಾಮೆ ನೀಡಿದ್ದ ಶಾಸಕರು ಅನರ್ಹಗೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡರು.
ಉಪ ಸಮರ ಫಲಿತಾಂಶದ ಬಗ್ಗೆ ಅನರ್ಹ ಶಾಸಕರಿಗೇಕೆ ಆತಂಕ?
17 ಕ್ಷೇತ್ರಗಳ ಪೈಕಿ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಹೊರತುಪಡಿಸಿ ಮಿಕ್ಕ 15 ಕ್ಷೇತ್ರಗಳಿಗೆ ಡಿಸೆಂಬರ್ 05ರಂದು 4185 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಸಲಾಗಿತ್ತು. ಶೇ 67.90ರಷ್ಟು ಮತದಾನ ದಾಖಲಾಗಿತ್ತು. ಡಿಸೆಂಬರ್ 09ರಂದು 219 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
By-Election Results LIVE: ಎಲ್ಲರ ಚಿತ್ತ ಉಪಚುನಾವಣೆ ಮತಎಣಿಕೆಯತ್ತ
ಉಪ ಚುನಾವಣೆ ಪ್ರಚಾರದ ವೇಳೆ ಎಲ್ಲಾ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಶಾಸಕರಿಗೂ ಸಚಿವ ಸ್ಥಾನದ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದ್ದಾರೆ. ಇದಲ್ಲದೆ, ಎರಡು ಮೂರು ಎಂಎಲ್ಸಿ ಸ್ಥಾನಗಳನ್ನು ತುಂಬಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ.
ಸಮೀಕ್ಷೆಗಳ ಸರಾಸರಿಯಲ್ಲಿ ಬಿಜೆಪಿಗೆ ಗೆಲುವು
ಎಲ್ಲಾ ಸಮೀಕ್ಷೆಗಳ ಸರಾಸರಿ ನೋಡಿದರೆ ಕೇವಲ 8 ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಬಿಜೆಪಿ ಸಮೀಕ್ಷೆ ಕೂಡ 10ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ವರದಿ ಬಂದಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನಿಗಮ-ಮಂಡಳಿಗಳಿಗೆ ನೇಮಕಾತಿಯೂ ಕಷ್ಟವಾಗಲಿದೆ. ಹೀಗಾಗಿ, ಸರ್ಕಾರ ಉಳಿಯುವ ಆತಂಕ ದೂರಾದರೂ ಎಲ್ಲರಿಗೂ ಸ್ಥಾನ ಕಲ್ಪಿಸುವ ಭರವಸೆ ಈಡೇರಿಸುವ ಬಗ್ಗೆ ಯಡಿಯೂರಪ್ಪ ಅವರಿಗೂ ಆತಂಕವಿದೆ. ಏನಾದರೂ ಕನಿಷ್ಠ 7 ಸ್ಥಾನ ಗೆಲ್ಲುವುದು ಬಿಜೆಪಿಗೆ ಮೊದಲ ಗುರಿಯಾಗಲಿದೆ.
ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ
ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೂ ಹಾಲಿ ಎಂಎಲ್ಸಿಗಳ ಸ್ಥಾನಗಳನ್ನು ಖಾಲಿ ಮಾಡಿಸಿಯಾದರೂ ಹೊಸಬರಿಗೆ ಅವಕಾಶ ನೀಡುವ ಮುನ್ಸೂಚನೆ ಸಿಕ್ಕಿದೆ.
ಹಿರಿಯರಿಗೆ ಸ್ಥಾನ ಕಲ್ಪಿಸಬೇಕಿದೆ
8 ಬಾರಿ ಶಾಸಕರಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಬಹುಕಾಲದಿಂದ ಸಂಪುಟ ಸೇರಲು ಕಾದಿದ್ದಾರೆ. ಅನೇಕ ಬಾರಿ ಮಂತ್ರಿ ಸ್ಥಾನ ಬಗ್ಗೆ ಬಹಿರಂಗವಾಗಿ ತಮ್ಮ ಆಸೆ ತೋಡಿಕೊಂಡಿದ್ದಾರೆ. ಕತ್ತಿಗೆ ಈ ಬಾರಿ ಸ್ಥಾನ ಕಲ್ಪಿಸದಿದ್ದರೆ ಬಂಡಾಯ ಏಳುವ ಭೀತಿ ಇರುವುದರಿಂದ ಕತ್ತಿಗೆ ಉತ್ತಮ ಸ್ಥಾನ ಸಿಗುವುದು ಖಾತ್ರಿಯಾಗಿದೆ. ಜೊತೆಗೆ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಜೊತೆಗೆ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ಬಾಕಿಯಿದೆ.
ಮೂವರು ಡಿಸಿಎಂಗಳಿರುವ ಸಚಿವ ಸಂಪುಟ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ. ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಇವರಿಬ್ಬರಿಗೂ ಈ ಬಾರಿ ಡಿಸಿಎಂ ಹುದ್ದೆ ನೀಡಿದರೂ ಅಚ್ಚರಿಯೇನಿಲ್ಲ.
ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಮುಂದಿನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕು
ಸದ್ಯ ಬಿಜೆಪಿ ಕರ್ನಾಟಕ ವಿಧಾನಸಭೆಯಲ್ಲಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕು. ಆಗ ಮಾತ್ರ ಸರ್ಕಾರ ಬಹುಮತ ಪಡೆಯಲು ಸಾಧ್ಯ. ಇನ್ನೂ 2 ಕ್ಷೇತ್ರದ ಉಪ ಚುನಾವಣೆ ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಲಿದೆ.