ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ 'ಹೌದು ಹುಲಿಯಾ', ಇಲ್ಲಾಂದ್ರೆ!
ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬೀಳಲು ಕೇವಲ ಒಂದು ದಿನ ಬಾಕಿಯಿದೆ. ಫಲಿತಾಂಶದ ಮೇಲೆ ಸರಕಾರದ ಅಳಿವು ಉಳಿವು ನಿಂತಿರುವುದರಿಂದ, ರಿಸಲ್ಟ್ ಇನ್ನಿಲ್ಲದ ಕುತೂಹಲ ಹುಟ್ಟುಹಾಕಿದೆ.
ಈ ಉಪಚುನಾವಣೆಯ ಫಲಿತಾಂಶ, ಕಾಂಗ್ರೆಸ್ಸಿಗೆ ಹೇಗೆ ಮಹತ್ವದ್ದೋ, ಅದೇ ರೀತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕೂಡಾ... ಇದು, ಒಂದು ರೀತಿಯಲ್ಲಿ ಅವರ ಪ್ರತಿಷ್ಠೆಯ ಪ್ರಶ್ನೆ ಎನ್ನುವುದಕ್ಕೆ ಹಲವು ಕಾರಣಗಳಿವೆ.
ಆದರೆ, ಮತಗಟ್ಟೆ ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ, ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಹಿನ್ನಡೆಯಾಗಲಿದೆ. ಸಿದ್ದರಾಮಯ್ಯ, ಹಠತೊಟ್ಟು ಪಡೆದುಕೊಂಡ ವಿರೋಧ ಪಕ್ಷದ ನಾಯಕನ ಸ್ಥಾನದ ನಂತರ, ನಡೆಯುತ್ತಿರುವ ಚುನಾವಣೆ ಇದಾಗಿದೆ.
ಉಪಚುನಾವಣಾ ಫಲಿತಾಂಶಕ್ಕೂ ಮುನ್ನವೇ ಅನರ್ಹರ ಭಾರೀ ಡಿಮಾಂಡ್?
ಒಂದು ವೇಳೆ, ಸಿದ್ದರಾಮಯ್ಯ ನಿರೀಕ್ಷಿತ ಸ್ಥಾನ ಗೆಲ್ಲಿಸಿಕೊಡುವಲ್ಲಿ ವಿಫಲರಾದರೆ, ಪಕ್ಷದೊಳಗಿನ ಅವರ ವಿರೋಧಿ ಬಣ, ಚುರುಕುಗೊಳ್ಳುವುದಂತೂ ನಿಶ್ಚಿತ. ಇದು, ರಾಜ್ಯ ಕಾಂಗ್ರೆಸ್ಸಿನ ಆಂತರಿಕ ಬೆಳವಣಿಗೆಗಳಲ್ಲಿ ಯಾವಯಾವ ಆಯಾಮಗಳನ್ನು ಪಡೆದುಕೊಳ್ಳಬಹುದು?
ಸಿದ್ದರಾಮಯ್ಯ ಸ್ಪಷ್ಟ ಮೇಲುಗೈ
ಎಲ್ಲಾ ಹದಿನೈದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟ ಮೇಲುಗೈಯನ್ನು ಸಾಧಿಸಿದ್ದರು. ಪಕ್ಷದ ಹಿರಿಯ ಮುಖಂಡರು ಅಥವಾ ಕ್ಷೇತ್ರಾವಾರು ಮುಖಂಡರ ಶಿಫಾರಸು ಏನಿದ್ದರೂ, ಕೊನೆಗೆ, ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿಗಳಿಗೇ ಟಿಕೆಟ್ ಸಿಕ್ಕಿದ್ದು. ಇದಕ್ಕೆ, ಒಂದು ಉದಾಹರಣೆ, ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ.
ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್
ಸಿದ್ದರಾಮಯ್ಯನವರ ವಿರುದ್ದ ಮೂಲ ಕಾಂಗ್ರೆಸ್ಸಿಗರ ಬಣ ಕತ್ತಿ ಮಸಿಯುತ್ತಲೇ ಇರುವುದು ಗೊತ್ತಿರುವ ವಿಚಾರ. ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್ ಬಹಿರಂಗವಾಗಿಯೇ, ಸಿದ್ದರಾಮಯ್ಯನವರ ವಿರುದ್ದ ಕೋಪ ಹೊರಹಾಕುತ್ತಲೇ ಇದ್ದರು. ಎಲ್ಲರೂ ನೀವು ಆಯ್ಕೆಮಾಡಿದ ಅಭ್ಯರ್ಥಿಗಳು, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದಲ್ಲವೇ ಎನ್ನುವ ತಿರುಗೇಟನ್ನೂ, ಸಿದ್ದರಾಮಯ್ಯಗೆ ನೀಡಿದ್ದರು.
ಐದು ಗೆದ್ದರೂ ಬಿಜೆಪಿ ಸರಕಾರ ಸೇಫ್: ಅಡ್ಡಗೋಡೆ ಮೇಲೆ ಸಿದ್ದರಾಮಯ್ಯ ದೀಪ
ಜನಾದೇಶವನ್ನು ಧಿಕ್ಕರಿಸಿದವರು
ಆಪರೇಷನ್ ಕಮಲದ ಮೂಲಕ, ಗೆದ್ದ ಪಕ್ಷಕ್ಕೆ ಮೋಸ ಮಾಡಿದವರು, ಜನಾದೇಶವನ್ನು ಧಿಕ್ಕರಿಸಿದವರು ಎಂದು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಬಹಿರಂಗ ಪ್ರಚಾರದಲ್ಲಿ ಸಾರುತ್ತಲೇ ಬರುತ್ತಿದ್ದರು. ಒಂದು ವೇಳೆ, ಬಿಜೆಪಿ ಸರಕಾರ ಸೇಫ್ ಆದರೆ, ಈ ವಿಚಾರವನ್ನು ಮತದಾರರಿಗೆ ಮನದಟ್ಟು ಮಾಡಲು, ಸಿದ್ದರಾಮಯ್ಯ ವಿಫಲರಾದರು ಎನ್ನುವ ಆಪಾದನೆ ಅವರ ಮೇಲೆ ಬರಬಹುದು.
ಹಿರಿಯ ಮುಖಂಡರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ
ಕಾಂಗ್ರೆಸ್ ಪರ ಪ್ರಚಾರಕ್ಕೆ ಹಿರಿಯ ಮುಖಂಡರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕೊನೆಕೊನೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದನ್ನು ಬಿಟ್ಟರೆ, "ಎಲ್ಲರ ಬೆಂಬಲ ನನಗೆ ಸಿಗುತ್ತಿಲ್ಲ" ಎನ್ನುವ ನೋವನ್ನೂ ಸಿದ್ದರಾಮಯ್ಯ, ಹೈಕಮಾಂಡ್ ಬಳಿ ತೋಡಿಕೊಂಡಿದ್ದರು. ಇವರಿಗೆಲ್ಲಾ ಸಿದ್ದರಾಮಯ್ಯನವರ ಮೇಲಿನ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಮಾತ್ರ 'ಹೌದು ಹುಲಿಯಾ'
ಕಾಂಗ್ರೆಸ್ಸಿಗೆ ಈ ಚುನಾವಣೆಯಲ್ಲಿ ಹಿನ್ನಡೆಯಾದರೆ, ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಕೂಗು ಜೋರಾಗಬಹುದು. ಸಿದ್ದರಾಮಯ್ಯನವರ ವಿರುದ್ದದ ಧ್ವನಿ, ಇನ್ನಷ್ಟು ತೀವ್ರ ಪಡೆದುಕೊಳ್ಳಬಹುದು. ಆದರೆ, ಕಾಂಗ್ರೆಸ್ ಈ ಉಪಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ಸಿದ್ದರಾಮಯ್ಯ ಮಾತ್ರ 'ಹೌದು ಹುಲಿಯಾ' ಎನ್ನುವುದು ವೆರಿ ವೆರಿ ಕ್ಲಿಯರ್...