ಉಪಚುನಾವಣೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿ ಮಾಡಲಾಗಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಘೋಷಣೆ ಆಗಿದೆ.
ಉಪಚುನಾವಣೆ ದಿನಾಂಕ ಘೊಷಣೆ ಆಗುತ್ತಿದ್ದಂತೆ ಮೂರೂ ಪ್ರಮುಖ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದ್ದು, ಟಿಕೆಕ್ ಆಕಾಂಕ್ಷಿಗಳ ಲಾಭಿಯೂ ಪ್ರಾರಂಭವಾಗಿದೆ.
ಉಪಚುನಾವಣೆ ಘೋಷಣೆಯಾದ ವಿಧಾನಸಭೆ ಕ್ಷೇತ್ರಗಳ ಪಟ್ಟಿ
ಉಪಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿದ್ದು, ಮೂರೂ ಪಕ್ಷಗಳಿಗೆ ಅತ್ಯಂತ ಮಹತ್ವದ ಉಪಚುನಾವಣೆ ಇದಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಪ್ರತಿಷ್ಟೆಯ ವಿಷಯವಾಗಿದ್ದರೆ, ಬಿಜೆಪಿಗೆ ಸರ್ಕಾರ ಉಳಿವಿಗೆ ಉಪಚುನಾವಣೆ ಅತ್ಯಂತ ಅಗತ್ಯವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಭಾರಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಪಚುನಾವಣೆಯಲ್ಲಿ ಹಿಂಪಡೆಯುವ ಯತ್ನ ನಡೆಸುತ್ತಿದ್ದು, ಚುನಾವಣೆ ಟಿಕೆಟ್ ಅನ್ನು ಅತ್ಯಂತ ಜಾಗೃತೆಯಿಂದ ಹಂಚಲಿದೆ.
Breaking: ಉಪಚುನಾವಣೆಗೆ ದಿನಾಂಕ ನಿಗದಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
ಉಪಚುನಾವಣೆಯ ಹದಿನೈದು ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತೆ ಇದೆ.
ಗೋಕಾಕ ಕ್ಷೇತ್ರಕ್ಕೆ ಜಾರಕಿಹೊಳಿ ಕುಟುಂಬದ ಸದಸ್ಯ
ಮೈತ್ರಿ ಸರ್ಕಾರ ಪತನವಾಗಲು ಮೂಲ ಕಾರಣಕರ್ತರಾದ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ ಕ್ಷೇತ್ರದಲ್ಲಿ ಅವರ ಕುಟುಂಬದವರನ್ನೇ ಚುನಾವಣೆ ನಿಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದ್ದು ಲಖನ್ ಜಾರಕಿಹೊಳಿಗೆ ಟಿಕೆಟ್ ದೊರಕುವ ಬಹುಪಾಲು ಸಂಭವ ಇದೆ. ಕಳೆದ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಅಥಣಿ ಕ್ಷೇತ್ರದಿಂದ ಎ.ಬಿ.ಪಾಟೀಲ್?
ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಅವರ ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಎ.ಬಿ.ಪಾಟೀಲ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಎ.ಬಿ.ಪಾಟೀಲ್ ಅವರು ಕಾಂಗ್ರೆಸ್ನ ಹಿರಿಯರಲ್ಲಿ ಒಬ್ಬರಾಗಿದ್ದು, ಅವರನ್ನು ಕಡೆಗಣಿಸಲಾಗಿತ್ತು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದರು. ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವ ಸಂಭವ ಇದೆ.
ವಿಜಯನಗರ ದಿಂದ ಸಂತೋಶ್ ಲಾಡ್?
ವಿಜಯನಗರ ಕ್ಷೇತ್ರದಿಂದ ಆನಂದ್ ಸಿಂಗ್ ಎದುರು ಕಾಂಗ್ರೆಸ್ ಮಾಜಿ ಶಾಸಕ ಸಂತೋಶ್ ಲಾಡ್ ಅವರಿಗೆ ಟಿಕೆಟ್ ಸಿಗುವ ಸಂಭವ ಇದೆ. ಕಾಗವಾಡ ಕ್ಷೇತ್ರದಿಂದ ಎಸ್.ಬಿ.ಪಾಟೀಲ್ ಎದುರಿಗೆ ಪ್ರಕಾಶ್ ಹುಕ್ಕೇರಿ ಅಥವಾ ರಾಜು ಕಾಗೆ ಅವರಿಗೆ ಟಿಕೆಟ್ ದೊರೆಯುವ ಸಂಭವ ಇದೆ.
ರಾಣೆ ಬೆನ್ನೂರು: ಕೋಳಿವಾಡ ಪುತ್ರನಿಗೆ ಟಿಕೆಟ್
ರಾಣೆ ಬೆನ್ನೂರು ಕ್ಷೇತ್ರದಿಂದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಅವರಿಗೆ ಟಿಕೆಟ್ ದೊರೆಯುವ ಸಂಭವ ಇದೆ. ಕೆ.ಬಿ.ಕೋಳಿವಾಡ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಬಿ.ಸಿ.ಪಾಟೀಲ್ ಅವರ ಹಿರೆಕೆರೂರು ಕ್ಷೇತ್ರದಿಂದ ಬಣಕಾರ್ ಕುಟುಂಬದ ಯು.ಬಿ.ಬಣಕಾರ್ ಅಥವಾ ಅವರ ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಹೊಸಕೋಟೆಯಲ್ಲಿ ಆಪರೇಷನ್ ಕಾಂಗ್ರೆಸ್?
ಹೊಸಕೋಟೆ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರತಿಷ್ಟೆಯ ಕ್ಷೇತ್ರವಾಗಿದ್ದು. ಹೊಸಕೋಟೆಯಲ್ಲಿ ಮಾಲೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಮಾಲೂರು ಮಂಜುನಾಥ್ ಟಿಕೆಟ್ ನಿರಾಕರಿಸಿದ್ದರು. ಹಾಗಾಗಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್ ಕರೆತಂದು ಚುನಾವಣೆಗೆ ನಿಲ್ಲಿಸುವ ಸಾಧ್ಯತೆ ಇದೆ.
ಕೆ.ಆರ್.ಪುರ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ?
ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮೂರು ಮಂದಿ ಆಕಾಂಕ್ಷಗಳಿದ್ದಾರೆ. ಪ್ರಶಾಂತ್ ದೇಶಪಾಂಡೆ, ಶಶಿಭೂಷಣ್ ಹೆಗಡೆ, ಭೀಮಣ್ಣ ನಾಯ್ಕ ಮೂವರಲ್ಲಿ ಒಬ್ಬರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಕೆ.ಆರ್.ಪುರ ಸಹ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು, ಇಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ನಾರಾಯಣಸ್ವಾಮಿ, ಉದಯ್ಕುಮಾರ್ ರೆಡ್ಡಿ, ಧನಂಜಯ ನಡುವೆ ತುರುಸಿನ ಸ್ಪರ್ಧೆ ಇದೆ.
ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ಗೆ ಅವಕಾಶ?
ಶಿವಾಜಿನಗರ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಇದೆ. ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಅವರನ್ನು ಹೊರತುಪಡಿಸಿದರೆ ಹುಸೇನ್ ಅವರೂ ಸಹ ಟಿಕೆಟ್ ರೇಸಿನಲ್ಲಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಮಾಗಡಿ ಬಾಲಕೃಷ್ಣ ಅಥವಾ ಎಚ್.ಸಿ.ಮಂಜುನಾಥ್ ಅವರಲ್ಲಿ ಒಬ್ಬರಿಗೆ ಟಿಕೆಟ್ ಪಕ್ಕಾ.
ಯಶವಂತಪುರ ಕ್ಷೇತ್ರದಿಂದ ಪ್ರಿಯಾಕೃಷ್ಣಗೆ ಅವಕಾಶ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಪ್ರಿಯಾಕೃಷ್ಣ ಅವರಿಗೆ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಅವರ ಹೆಸರು ಆರ್.ಆರ್.ನಗರ ಕ್ಷೇತ್ರಕ್ಕೂ ಕೇಳಿ ಬರುತ್ತಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕೆ.ಬಿ.ಚಂದ್ರಶೇಕರ್ ಅವರಿಗೆ ಟಿಕೆಟ್ ದೊರೆಯುವ ಸಂಭವ ಇದೆ.
ಹುಣಸೂರು ಕ್ಷೇತ್ರಕ್ಕೆ ಆಯ್ಕೆಯ ಗೊಂದಲ
ಹುಣಸೂರು ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಎಚ್.ಪಿ.ಮಂಜುನಾಥ್ ಅವರಿಗೇ ಈ ಬಾರಿಯೂ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚಿಂತಾಮಣಿ ವಿಧಾಸನಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದ ಎಂಸಿ.ಸುಧಾಕರ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.