ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ಗೆ ಬಂದ ಮಗನ ಬಗ್ಗೆ ಸಿಎಂ ಲಿಂಗಪ್ಪ ಹೇಳಿದ್ದೇನು?
ರಾಮನಗರ, ನವೆಂಬರ್ 1: ರಾಮನಗರ ಅಭ್ಯರ್ಥಿಯಾಗಿದ್ದ ಮಗ ಎಲ್. ಚಂದ್ರಶೇಖರ್ ಅವರು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡ ನಿರ್ಧಾರವನ್ನು ಕಾಂಗ್ರೆಸ್ ಎಂಎಲ್ಸಿ ಸಿಎಂ ಲಿಂಗಪ್ಪ ಖಂಡಿಸಿದ್ದಾರೆ.
ಟಿಕೆಟ್ ನೀಡಿದ ಪಕ್ಷಕ್ಕೆ ಕೈಕೊಟ್ಟು ಈಗ ಚುನಾವಣೆ ಹೊಸ್ತಿಲಲ್ಲಿ ಕಣದಿಂದ ಹಿಂದೆ ಸರಿಯುವ ತೀರ್ಮಾನ ಎಳ್ಳಷ್ಟೂ ಸರಿಯಲ್ಲ. ಆತ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಬಳಿಕ ತನ್ನ ರಾಜಕೀಯದ ನಡೆಯನ್ನು ನಿರ್ಧರಿಸಬೇಕಿತ್ತು. ತಾವು ಅಭ್ಯರ್ಥಿಯಾಗಿದ್ದರೆ ಸ್ಪರ್ಧಾ ಕಣದಿಂದ ಹಿಂದೆ ಸರಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ
ಚುನಾವಣಾ ಕಣದಿಂದ ಮಗ ಹಿಂದಕ್ಕೆ ಸರಿದಿರುವುದು ಅಸಹ್ಯಕರ ತೀರ್ಮಾನ. ಇದರಿಂದ ಹೇಸಿಗೆಯಾಗುತ್ತಿದೆ ಎಂದು ಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ಎಲ್. ಚಂದ್ರಶೇಖರ್, ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದರು. ಆಗಲೂ ಲಿಂಗಪ್ಪ ಅಸಮಾಧಾನಗೊಂಡಿದ್ದರು. ಬಿಜೆಪಿ ಸೇರುವುದು ಬೇಡ ಎಂದು ಕಿವಿಮಾತು ಹೇಳಿದ್ದರೂ ಮಗ ಕೇಳಲಿಲ್ಲ ಎನ್ನುವುದು ಅವರ ಸಿಟ್ಟಿಗೆ ಕಾರಣವಾಗಿತ್ತು.
ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ
ಆದರೆ, ಸ್ಪರ್ಧೆಗೆ ಇಳಿದ ಮೇಲೆ ಚುನಾವಣೆಯನ್ನು ಎದುರಿಸಬೇಕಿತ್ತು. ಹೀಗೆ ಹಠಾತ್ತಾಗಿ ಅದರಿಂದ ಹೊರಬಂದಿರುವುದು ತಪ್ಪು ಎಂದು ಹೇಳಿದ್ದಾರೆ.
ಲಿಂಗಪ್ಪ ಅವರು ಮಗನ ನಡೆಗೆ ನೀಡಿರುವ ಪ್ರತಿಕ್ರಿಯೆ ಹೀಗಿದೆ...
ಬಿಲ್ಕುಲ್ ಬೇಡ ಎಂದಿದ್ದೆ
ಮನೆಯಲ್ಲಿ ನಾನು, ನನ್ನ ಹೆಂಡಿ ಮತ್ತು ಮಗ ಮೂವರು ಕುಳಿತಾಗ ಬಿಜೆಪಿ ಸೇರ್ಪಡೆ ವಿಚಾರವನ್ನು ಆತ ಮುಂದಿಟ್ಟಿದ್ದ. ಬಹಳ ಕಹಿ ಅನುಭವ ಆಗುತ್ತದೆ. ಬಿಲ್ ಕುಲ್ ಬಿಜೆಪಿ ಸೇರಲೇಬೇಡ ಎಂದು ಹೇಳಿದ್ದೆ. ಅದಕ್ಕೆ ಆತ ಒಪ್ಪಿಕೊಂಡಿದ್ದ. ಆದರೆ, ಮರುದಿನ ಟಿವಿಯಲ್ಲಿ ಆತ ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು, ಅದರ ಶಾಲನ್ನು ಹಾಕಿಕೊಳ್ಳುತ್ತಿರುವ ಸುದ್ದಿ ನೋಡಿದೆ. ಅಂದಿನಿಂದ ಆತನ ಜತೆ ನಾನು ಮಾತನಾಡಿಲ್ಲ.
ನಾನಾಗಿದ್ದರೆ ಸ್ಪರ್ಧಿಸುತ್ತಿದ್ದೆ
ಇದು ಹೇಳಿ ಮಾಡಿಸಿದ ಕೃತ್ಯ. ಇಂತಹವು ರಾಜಕೀಯದಲ್ಲಿ ನಡೆಯಬಾರದು. ನನಗೂ ಈ ವಿಚಾರ ತಿಳಿದಿರಲಿಲ್ಲ. ನಾನು ಬಳ್ಳಾರಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಬೆಳಿಗ್ಗೆ ಸ್ನೇಹಿತರು ಫೋನ್ ಮಾಡಿದ ಬಳಿಕವೇ ಆತ ಕಾಂಗ್ರೆಸ್ ಸೇರಿಕೊಳ್ಳುತ್ತಿರುವುದು ಗೊತ್ತಾಗಿದ್ದು. ನನಗೆ ಈ ಚಟುವಟಿಕೆಗಳ ಮಾಹಿತಿ ಇಲ್ಲ. ತಂದೆ-ಮಕ್ಕಳ ನಡುವೆ ಏನೋ ಇದೆ ಎಂದರೆ ಅದು ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ನಾನು ಸುಳ್ಳು ಹೇಳುತ್ತಿಲ್ಲ. ಒಂದು ವೇಳೆ ನಾನು ಹಾಗೆ ಸ್ಪರ್ಧಿಸಿದ್ದರೆ, ಚುನಾವಣೆಯನ್ನು ಎದುರಿಸುತ್ತಿದ್ದೆನೇ ಹೊರತು ಹೀಗೆ ಪಕ್ಷ ತೊರೆಯುತ್ತಿರಲಿಲ್ಲ. ಯಾರೂ ಸಹ ಈ ರೀತಿ ಮಾತಬಾರದು.
ರಾಮನಗರ ಚುನಾವಣೆ : ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೆ ಆಸಕ್ತಿಯೇ ಇಲ್ಲ!
50 ವರ್ಷದ ಮಗ ಮಾತು ಕೇಳ್ತಾನಾ?
ಈಗಿನ ಕಾಲದಲ್ಲಿ 20 ವರ್ಷದ ಮಗನೇ ತಂದೆಯ ಮಾತು ಹೇಳುವುದಿಲ್ಲ. ಇನ್ನು 50 ವರ್ಷದವನು ಕೇಳುತ್ತಾನೆಯೇ? ಸಾಮಾನ್ಯವಾಗಿ ನಾನು ಅವನೊಂದಿಗೆ ಹೆಚ್ಚು ಮಾತನಾಡುವುದಿಲ್ಲ. ಮನೆಯಲ್ಲಿ ನಾನು ಬೇಡ ಎಂದ ಬಳಿಕವೂ ಆತ ಅದಕ್ಕೆ ಒಪ್ಪಿಕೊಂಡು, ಮರುದಿನ ಬಿಜೆಪಿ ಸೇರಿದ್ದ. ಈಗ ಕಾಂಗ್ರೆಸ್ಗೆ ಮರಳಿ ಬಂದಿದ್ದಾನೆ. ಈ ನಡೆಯ ಬಗ್ಗೆ ನನ್ನ ಜತೆ ಯಾವ ಚರ್ಚೆಯನ್ನೂ ಮಾಡಲಿಲ್ಲ.
ತಟಸ್ಥ ನೀತಿ ಎಂದ ಲಿಂಗಪ್ಪ
ಪಕ್ಷದವರು ನನಗೆ ಹೇಳದೆ ಇರುವುದಕ್ಕೆ ಕಾರಣಗಳಿರಬಹುದು. ಈಗ ಎಲ್ಲರೂ ಚುನಾವಣೆಯ ಬಿಜಿಯಲ್ಲಿದ್ದಾರೆ. ಎಲ್ಲರೂ ಹೊರಗೆ ಪ್ರಚಾರ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಮಗ ಪಕ್ಷಕ್ಕೆ ವಾಪಸ್ ಸೇರಿಕೊಳ್ಳುತ್ತಿದ್ದಾನೆ ಎಂಬುದರ ಕುರಿತು ಅವರು ನನಗೆ ಒಂದು ಮಾತು ಹೇಳಿಲ್ಲ ಎಂಬ ಆಕ್ಷೇಪಣೆ ಇಲ್ಲ. ಹಾಗೆಯೇ ಅದನ್ನು ನಾನು ಸ್ವಾಗತಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?
ದುಡ್ಡು ಕೊಟ್ಟರೆಂದು ಆಗಲೂ ಹೇಳಿದ್ದರು
50 ವರ್ಷದಿಂದ ಕಾಂಗ್ರೆಸ್ನಲ್ಲಿ ನಿಷ್ಠೆಯಿಂದ ಇದ್ದೇನೆ. ಈ ಬೆಳವಣಿಗೆ ನನಗೆ ಹೇಸಿಗೆ ತರಿಸುತ್ತಿದೆ. ಈ ಹಿಂದೆ ಆತನನ್ನು ಬಿಜೆಪಿಗೆ ಸೇರಿಕೊಂಡ ನಾಯಕರು, ಮತ್ತೆ ಅವರನ್ನು ಕಾಂಗ್ರೆಸ್ಗೆ ಮರಳಿ ಸೇರಿಸಿಕೊಂಡ ನಾಯಕರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ನನಗೆ ಏನೇನು ನಡೆಯಿತು ಎಂಬುದು ಗೊತ್ತಿಲ್ಲ. ಆತ ಬಿಜೆಪಿಗೆ ಹೋದಾಗಲೂ ಹಣ ಕೊಟ್ಟರು ಎಂಬ ಕಾರಣಕ್ಕೆ ಹೋದರು ಎಂದು ಮಾತನಾಡಿಕೊಂಡರು. ಈಗಲೂ ಅದೇ ರೀತಿ ಆರೋಪ ಮಾಡಬಹುದು. ಅಂತಹ ಮಾತುಗಳು ಬರುವುದು ಸಹಜ.