4 ಪರಿಷತ್, 2 ಲೋಕಸಭಾ ಸದಸ್ಯರ ಸ್ಥಾನಕ್ಕೆ ಮರುಚುನಾವಣೆ!
ಬೆಂಗಳೂರು, ಮೇ 16: ಇದೀಗ ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದೆ. ಆದರೆ ಚುನಾವಣೆಗಳು ಇನ್ನೂ ಮುಗಿದಿಲ್ಲ. ಜನರು ಇನ್ನಷ್ಟು ಉಪಚುನಾವಣೆಗಳನ್ನು ಎದುರು ನೋಡಬೇಕಾಗಿದೆ. ಸಂಸದರು, ವಿಧಾನಪರಿಷತ್ ಸದಸ್ಯರು ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗುವ ಸ್ಥಾನಗಳಲ್ಲಿ ಮತ್ತೆ ಉಪಚುನಾವಣೆ ನಡೆಯಲಿದೆ.
ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಗೆದ್ದ ಅಭ್ಯರ್ಥಿಗಳು ಬೀಗುತ್ತಿದ್ದರೆ, ಸೋತವರು ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ. ಮತದಾರರು ಮಾತ್ರ ತಾವು ನೀಡಿದ ತೀರ್ಪಿನ ಬಗ್ಗೆ ಪರಮರ್ಶಿಸುತ್ತಿದ್ದಾರೆ. ಅದರಂತೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲಿ ಇಬ್ಬರು ಸಂಸದರು, ನಾಲ್ವರು ವಿಧಾನಪರಿಷತ್ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಆ ಆರು ಸ್ಥಾನಗಳಿಗೆ ಮರು ಚುನಾವಣೆ ನಡೆಯಲಿದೆ.
ಬಿಜೆಪಿ ಭದ್ರಕೋಟೆಯಾದ ಶಿವಮೊಗ್ಗ, ಚುನಾವಣೆಯಲ್ಲಿ ಗೆದ್ದವರು, ಸೋತವರು
ಶಿವಮೊಗ್ಗ ಸಂಸದ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿದೆ. 6 ತಿಂಗಳೊಳಗಾಗಿ ಆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿಧಾನಪರಿಷತ್ ಸದಸ್ಯರಲ್ಲಿ ನಾಲ್ವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ವಿ.ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್, ಡಾ. ಜಿ. ಪರಮೇಶ್ವರ್, ಬಿ.ಎಸ್.ಸುರೇಶ್ ತಮ್ಮ ಕ್ಷೇತ್ರಗಳಲ್ಲಿ ಮತದಾರರ ಆಶೀರ್ವಾದ ಪಡೆದಿದ್ದಾರೆ. ಈ ಪೈಕಿ ಬಿ.ಎಸ್. ಸುರೇಶ್ ಅವಧಿ ಜೂನ್ 17ಕ್ಕೆ ಅಂತ್ಯವಾಗಲಿದೆ.
ಉಳಿದಂತೆ ಈಶ್ವರಪ್ಪ ಹಾಗೂ ಪರಮೇಶ್ವರ್ ಅವಧಿ 2020 ಜೂನ್ 30, ಯತ್ನಾಳ್ ಹಾಗೂ ವಿ. ಸೋಮಣ್ಣ ಅವಧ 2022ವರೆಗೂ ಇರಲಿದೆ. ಹೀಗಾಗಿ ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ಅವಧಿಗೂ ಮುನ್ನವೇ ಚುನಾವಣೆ ನಡೆಸಬೇಕಾಗಿದೆ.