ಬುಲ್ಬುಲ್ ಪ್ರಭಾವ, ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭ
ಬೆಂಗಳೂರು, ನವೆಂಬರ್ 7: ಬುಲ್ ಬುಲ್ ಚಂಡಮಾರುತದ ಪ್ರಭಾವ ರಾಜ್ಯದ ಮೇಲೆ ಬೀಳಲಾರಂಭಿಸಿದ್ದು, ಮತ್ತೆ ಮಳೆ ಶುರುವಾಗಿದೆ.
ಶಿವಮೊಗ್ಗ, ಧಾರವಾಡ, ಕೊಡಗಿನಲ್ಲಿ ಈಗಾಗಲೆ ಮಳೆ ಶುರುವಾಗಿದ್ದು, ಮತ್ತೆ ಪ್ರವಾಹಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.
ಮಳೆ ನಿಂತು ಒಂದು ವಾರವೂ ಕೂಡ ಕಳೆದಿಲ್ಲ ಮತ್ತೆ ಶುರುವಾಗಿದೆ. ಈ ಬಾರಿ ಬಿಸಿಲನ್ನು ಕಾಣುತ್ತೇವೋ ಇಲ್ಲವೋ ಎನ್ನುವುದೇ ಸಂದೇಹವಾಗಿದೆ.
ವರ್ಷದ 7ನೇ ಸೈಕ್ಲೋನ್ ಬುಲ್ ಬುಲ್: ಎಷ್ಟು ಅಪಾಯಕಾರಿ, ಎಲ್ಲೆಲ್ಲಿ ಮಳೆ?
ಅರಬ್ಬಿ ಸಮುದ್ರದಲ್ಲಿ ಉದ್ಭವವಾದ ಕ್ಯಾರ್ ಹಾಗೂ ಮಹಾ ಚಂಡಮಾರುತದಿಂದ ಸಾಕಷ್ಟು ಅಪಾಯವಿದೆ. ಆದರೆ ಬುಲ್ ಬುಲ್ ಚಂಡ ಮಾರುತ ಅತಿ ಹೆಚ್ಚು ಅನಾಹುತವನ್ನು ಸೃಷ್ಟಿಸಲಾರದು ಎಂದು ಹೇಳಲಾಗಿದೆ. ಆದರೆ ಗಾಳಿಯ ಒತ್ತಡ ಎಷ್ಟಿರುತ್ತದೆ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ.
ಶಿವಮೊಗ್ಗದಲ್ಲಿ ಮತ್ತೆ ಮಳೆ
ಶಿವಮೊಗ್ಗದಲ್ಲಿ ಭಾರಿ ಮಳೆಯಾಗಿದೆ. ಬುಲ್ ಬುಲ್ ಚಂಡಮಾರುತದ ಪ್ರಭಾವ ಶುರುವಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಹಲವೆಡೆ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ. ನವೆಂಬರ್ 8ರಿಂದ ಮಳೆ ಇನ್ನಷ್ಟು ಚುರುಕಾಗುವ ಸಾಧ್ಯತೆ ಇದೆ.
ಕೊಡಗಿನಲ್ಲೂ ಮಳೆ
ಕೊಡಗಿನಲ್ಲೂ ಬುಧವಾರ ಧಾರಾಕಾರ ಮಳೆ ಸುರಿದಿದೆ. ಬುಲ್ ಬುಲ್ ನಿಂದಾಗಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದರೂ ಹಿಂದುಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 8ರ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ವಿದ್ಯಾರ್ಥಿಗಳ ಪರದಾಟ.
ಧಾರವಾಡ ಜಿಲ್ಲೆಯಲ್ಲಿ ಸಂಜೆ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ತಾಲೂಕಿನ ಲಕಮಾಪುರ ಗ್ರಾಮದ ಸರಕಾರಿ ಶಾಲೆಗೆ ಮಳೆ ನೀರು ನುಗ್ಗಿ ಶಾಲೆ ಜಲಾವೃತವಾಗಿದೆ. ಹೀಗಾಗಿ ಮಕ್ಕಳು ಪರದಾಡುವಂತಾಗಿತ್ತು. ಸಂಜೆ ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಮಕ್ಕಳು, ಶಿಕ್ಷಕರು ಶಾಲೆಯಿಂದ ಹೊರಗಡೆ ಬರಲು ಪರದಾಡಿದ್ದಾರೆ. ಇನ್ನು ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಗ್ರಾಮಸ್ಥರು ಸಹ ಹೈರಾಣಾಗಿದ್ದರು. ಸಂಜೆ ಸುರಿದ ಮಳೆಯಿಂದ ಕೃಷಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಕಾರ್ಮಿಕರು ಸಹ ಪರದಾಡುವಂತಾಗಿದೆ. ಜಿಲ್ಲೆಯ ನವಲಗುಂದ, ಕಲಘಟಗಿ, ಕುಂದಗೋಳ, ಹುಬ್ಬಳ್ಳಿ ಸೇರಿದಂತೆ ಹಲವು ಕಡೇ ಸಂಜೆ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ
ಕರ್ನಾಟಕ ಕರಾವಳಿ ಭಾಗ, ಮಲೆನಾಡು, ಗುಜರಾತ್ ಒಡಿಶಾದಲ್ಲಿ ಚಂಡಮಾರುತ ಪ್ರಭಾವ ಇರಲಿದೆ. ಒಡಿಶಾದ 16 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.2018ರಲ್ಲಿ ಆರು ಚಂಡಮಾರುತಗಳು ರೂಪುಗೊಂಡಿದ್ದವು.ಈ ಬಾರಿ ನವೆಂಬರ್ನಲ್ಲೇ ಆ ಸಂಖ್ಯೆಯನ್ನು ನಾವು ತಲುಪಲಿದ್ದೇವೆ. ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ನಾವು ಆ ಸಂಖ್ಯೆಯನ್ನು ತಲುಪುತ್ತಿದ್ದೇವೆ. ಕ್ಯಾರ್ ಸೈಕ್ಲೋನ್ ಬರುವುದಕ್ಕೂ ಮುನ್ನ ಸೂಪರ್ ಸೈಕ್ಲೋನ್ ನಿರ್ಮಾಣವಾಗಿತ್ತು. 2007ರಲ್ಲಿ 'ಗೋನು' ಸೈಕ್ಲೋನ್ ತೀವ್ರ ದೇಶದ ಮೇಲೆ ತೀವ್ರ ಪರಿಣಾಮ ಬೀರಿತ್ತು.