ಸರ್ಕಾರಿ ಆಸ್ಪತ್ರೆಯಲ್ಲಿ ದೇವರ ಗುಡಿ ನಿರ್ಮಿಸಿ: ಸಚಿವ ರಾಮುಲು ಸೂಚನೆ
Recommended Video
ಬೆಂಗಳೂರು, ಅಕ್ಟೋಬರ್ 22: ಸರ್ಕಾರಿ ಆಸ್ಪತ್ರೆಯಲ್ಲಿ ಧನಾತ್ಮಕ ಶಕ್ತಿ ಪ್ರಹವಿಸುವಂತೆ ಮಾಡಲು ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ದೇವರ ಗುಡಿ ನಿರ್ಮಿಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಹೀಗೊಂದು ನಿರ್ದೇಶನವನ್ನು ಸಚಿವ ಶ್ರೀರಾಮುಲು ನೀಡಿದ್ದಾರೆ.
'ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಯಾವುದಾದರೂ ಸರಿ ಒಂದು ದೇವರ ಗುಡಿ ಇರಲಿ, ಇದರಿಂದ ಧನಾತ್ಮ ಶಕ್ತಿ (ಪಾಸಿಟಿವ್ ಎನರ್ಜಿ) ಪ್ರವಹಿಸುತ್ತದೆ' ಎಂದು ರಾಮುಲು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ದೇವರ ಗುಡಿ ಇರುತ್ತದೆ: ರಾಮುಲು
'ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ದೇವರ ಗುಡಿ ಅಥವಾ ದೇವರ ಮೂರ್ತಿ ಇಟ್ಟಿರುತ್ತಾರೆ. ಇದರಿಂದ ಪಾಸಿಟಿವ್ ಎನರ್ಜಿ ಸಿಗುತ್ತದೆ. ಹಾಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಸರ್ವ ಧರ್ಮೀಯರ ದೇವರ ಗುಡಿ ನಿರ್ಮಿಸಿ, ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಚಿಂತಿಸಿ ಕ್ರಮ ಕೈಗೊಳ್ಳಿ' ಎಂದು ಅವರು ಸೂಚಿಸಿದರು.
ಆರೋಗ್ಯ ಇಲಾಖೆಯಲ್ಲಿ ಹಣಕ್ಕೆ ಕೊರತೆ ಇಲ್ಲ: ರಾಮುಲು
'ಆರೋಗ್ಯ ಇಲಾಖೆಯಲ್ಲಿ ಹಣಕ್ಕೆ ಕೊರತೆ ಇಲ್ಲ, ಆದರೆ ಹಣ ಬಳಕೆಗೆ ಸೂಕ್ತ ಯೋಜನೆ ಇಲ್ಲ, ನಿಧಿ ಬಳಕೆಯಲ್ಲಿ ದಕ್ಷಿಣ ಕನ್ನಡ ಮುಂದಿದೆ. ಡಿಸೆಂಬರ್ ಅಂತ್ಯದ ಒಳಗೆ ಎಲ್ಲ ಜಿಲ್ಲೆಗಳು ಶೇ 90 ನಿಧಿ ಬಳಕೆ ಮಾಡಬೇಕು' ಎಂದು ಸಚಿವರು ಸೂಚನೆ ನೀಡಿದರು.
ಮಾದರಿ ಸಮುದಾಯ ಕೇಂದ್ರಕ್ಕೆ ಪ್ರಶಸ್ತಿ
'ಆರೋಗ್ಯಾಧಿಕಾರಿಗಳು ತಮ್ಮ ಜಿಲ್ಲೆಯ ಐದು ಪ್ರಾಥಮಿಕ ಸಮುದಾಯ ಕೇಂದ್ರವನ್ನು ಗುರುತಿಸಿ ಅದನ್ನು ಮಾದರಿ ಸಮುದಾಯ ಕೇಂದ್ರವನ್ನಾಗಿ ಮಾಡಬೇಕು. ಮೊದಲ ಮೂರು ಅತ್ಯುತ್ತಮ ಸಮುದಾಯ ಕೇಂದ್ರಕ್ಕೆ 3 ಲಕ್ಷ, 2 ಲಕ್ಷ ಹಾಗೂ ಒಂದು ಲಕ್ಷದಂತೆ ಬಹುಮಾನ ನೀಡಲಾಗುವುದು' ಎಂದು ರಾಮುಲು ಹೇಳಿದ್ದಾರೆ.
ಸೂಚನೆ ಪಾಲಿಸದವರ ವಿರುದ್ಧ ಶಿಸ್ತು ಕ್ರಮ
'ಸೂಚನೆಗಳನ್ನು ಗಂಭೀರವಾಗಿ ಪರಿಗಣಸದ ಅಧಿಕಾರಿಗಳು, ಆರೋಗ್ಯಾಧಿಕಾರಿಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆಯನ್ನೂ ಅವರು ನೀಡಿದರು.