ದೇಶದ ಕೈಗಾರಿಕಾ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಬಜೆಟ್: ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು ಫೆಬ್ರವರಿ 1: ಹೊಸ ದಶಕದಲ್ಲಿ ಹೊಸ ಯುಗ ಸೃಷ್ಟಿಸುವ ಕೇಂದ್ರ ಬಜೆಟ್ ಇದಾಗಿದ್ದು, ಕೇಂದ್ರ ಸರಕಾರವು ಕೋವಿಡ್ ನಂತರದ ಆರ್ಥಿಕತೆಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ಇಂದಿನ ಕೇಂದ್ರ ಬಜೆಟ್ ನಲ್ಲಿ ಕಾಣಬಹುದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ, ಎಂಎಸ್ಎಂಇ, ಸ್ಟಾರ್ಟ್ ಅಪ್ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕೇಂದ್ರ ಬಜೆಟ್ ಮುನ್ನುಡಿ ಬರೆದಿದೆ. ಎಂಎಸ್ಎಂಇ ಗಳಿಗೆ 15,700 ಕೋಟಿ ರುಪಾಯಿಗಳ ಅನುದಾದ ನೀಡಲಾಗಿದ್ದು, 2 ಪಟ್ಟು ಹೆಚ್ಚು ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಬಜೆಟ್ 2021: ಇದು ಕೋವಿಡ್ ವಿರುದ್ಧ ಹೋರಾಡುವ ಭಾರತದ ಬದ್ಧತೆ: WHO ನಿರ್ದೇಶಕಿ
ಎಂಎಸ್ಎಂಇ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಸಣ್ಣ ಕಂಪನಿಗಳ ವ್ಯಾಖ್ಯಾನ ಬದಲು ಮಾಡುವ ಮೂಲಕ ಸುಮಾರು 2 ಲಕ್ಷ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.
ಏಕವ್ಯಕ್ತಿ ಕಂಪನಿಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗಿದ್ದು, ಕನಿಷ್ಠ ಕೂಲಿಯನ್ನು ಎಲ್ಲಾ ವಿಭಾಗದ ಕೂಲಿ ಕಾರ್ಮಿಕರಿಗೂ ಅನ್ವಯ ಮಾಡಿರುವುದು ಹಾಗೂ ಮಹಿಳೆಯರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಇನ್ನು 1 ವರ್ಷ ರಿಲೀಫ್ ನೀಡಲಾಗಿದ್ದು, ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿಧಿಸುವುದಿಲ್ಲ ಎಂದು ಕೇಂದ್ರ ಬಜೆಟ್ ನಲ್ಲಿ ತಿಳಿಸಲಾಗಿದೆ. ಇದು ದೇಶದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬೆಳವಣಿಗೆಗೆ ಬಹಳ ಸಹಾಯಕವಾಗಲಿದೆ.
ಒಟ್ಟಾರೆಯಾಗಿ ಪ್ರಗತಿಪರ ಹಾಗೂ ಕೋವಿಡ್ ಸಂಕಷ್ಟದಿಂದ ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಉತ್ತಮ ಹಾದಿಯನ್ನು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತೀಯ ಸಚಿವರು ತೋರಿಸಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬಣ್ಣಿಸಿದ್ದಾರೆ.
Recommended Video