ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ, ನಿರೀಕ್ಷೆಗಳು ನೂರಾರು
ಬೆಂಗಳೂರು, ಮಾ. 02: ಇಂದಿನಿಂದ ಮಾರ್ಚ್ 31ರವರೆಗೆ ವಿಧಾನ ಮಂಡಳ ಬಜೆಟ್ ಅಧಿವೇಶನ ನಡೆಯಲಿದ್ದು, ನಾಡಿನ ಜನರು ನೂರಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 15ನೇ ವಿಧಾನಸಭೆಯ 6ನೇ ಮುಂದುವರೆದ ಅಧಿವೇಶನ ಇದಾಗಿದೆ. ಇದೇ ಸಂದರ್ಭದಲ್ಲಿ ಭಾರತ ಸಂವಿಧಾನ ಅಂಗೀಕರಿಸಿ 70 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಂವಿಧಾನದ ಮೇಲೆ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಉತ್ತರ ಕೊಡಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ಕುರಿತು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಹಾಗೂ ಅವರ ಹೇಳಿಕೆಯನ್ನು ಇತರ ಬಿಜೆಪಿ ಸಚಿವರು ಬೆಂಬಲಿಸುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಿವೆ. ಇದೇ ಮಾರ್ಚ್ 5 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಮಾರ್ಚ್ 2 ರಿಂದ ಅಧಿವೇಶನ ಆರಂಭ, ಗದ್ದಲಕ್ಕೆ ವಿಪಕ್ಷ ಸಜ್ಜು
ಇಂದು ವಿಧಾನಸಭೆ, ವಿಧಾನ ಪರಿಷತ್ಗಳಲ್ಲಿ ಸಿಎಂ ಉತ್ತರ
ಕಳೆದ ಫೆ. 17 ರಂದು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ್ದ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಉತ್ತರ ಕೊಡಲಿದ್ದಾರೆ. ಫೆ. 18 ರಿಂದ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಲು ಚರ್ಚೆ ನಡೆದಿದೆ. ಎನ್ಆರ್ಸಿ ಹಾಗೂ ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಆಮಾಯಕರು ಸಾವನ್ನಪ್ಪಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಸಭಾತ್ಯಾಗದ ಮೂಲಕ ವಿರೋಧ ವ್ಯಕ್ತಪಡಿಸಿದೆ.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕೊಡಲಿದ್ದು, ಅದಕ್ಕಿಂತ ಮೊದಲೇ ಕಲಾಪ ಆರಂಭವಾಗುತ್ತಿದ್ದಂತೆಯೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಮೇಲೆ ಬಿಜೆಪಿ ನಾಯಕರು ಮಾಡಿರುವ ಆರೋಪಗಳ ಬಗ್ಗೆ ವಿರೋಧ ಪಕ್ಷಗಳು ಆಡಳಿತ ಪಕ್ಷ ಬಿಜೆಪಿ ಮೇಲೆ ಮುಗಿಬೀಳಲು ಸಜ್ಜಾಗಿವೆ.
ಸ್ವಾತಂತ್ಯ ಹೋರಾಟಗಾರ ದೊರೆಸ್ವಾಮಿ ವಿಚಾರ ಪ್ರಸ್ತಾಪ
ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರಸ್ವಾಮಿ ಅವರ ಕುರಿತು ಮಾತನಾಡಿರುವ ಮಾಜಿ ಸಚಿವ, ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕು. ಇಲ್ಲದೆ ಇದ್ದರೆ ಬಜೆಟ್ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆಯೆ ಇದೇ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಂಡಿವೆ.
ಇದರಿಂದಾಗಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಉತ್ತರ ಕೊಡುವುದಕ್ಕೂ ಮೊದಲೇ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಹೋರಾಟಕ್ಕೆ ಅಣಿಯಾಗಲಿವೆ.
"ಸಿದ್ದರಾಯ್ಯನವರಿಗೆ ಉತ್ತರ ನೀಡಲು ಸಿಎಂ ಸಮರ್ಥರು'
ನಾಳೆ, ನಾಡಿದ್ದು ಸಂವಿಧಾನದ ಮೇಲೆ ನಡೆಯಲಿದೆ ವಿಶೇಷ ಚರ್ಚೆ
ಮಾರ್ಚ್ 3 ಹಾಗೂ 4ರಂದು ಎರಡು ದಿನಗಳ ಕಾಲ ಸಂವಿಧಾನದ ಮೇಲೆ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಭಾರತ ಸಂವಿಧಾನ ಅಂಗೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ವಿಶೇಷ ಚರ್ಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟಿದ್ದಾರೆ. ಸಂವಿಧಾನದ ಮೇಲೆ ನಡೆಯುವ ಚರ್ಚೆಯಲ್ಲಿ ರಾಜಕೀಯ ಇರಬಾರದು ಎಂದು ಎಲ್ಲ ಶಾಸಕರಿಗೆ ಸ್ಪೀಕರ್ ಕಾಗೇರಿ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.
ಆದರೆ ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ, ದೇಶದಲ್ಲಿ ಎನ್ಆರ್ಸಿ, ಸಿಎಎ ಕಾನೂನುಗಳ ಜಾರಿ ಕುರಿತಂತೆ ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡಲಿದ್ದಾರೆ. ಇದು ಸಂವಿಧಾನದ ಮೇಲೆ ನಡೆಯುವ ಚರ್ಚೆ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಗಲಿದೆ. ಜೊತೆಗೆ ವಿರೋಧ ಪಕ್ಷಗಳ ಸದಸ್ಯರು ಇದೇ ವಿಚಾರ ಇಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮಾರ್ಚ್ 5ರಂದು ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ
ಸಂವಿಧಾನದ ಮೇಲೆ ಎರಡು ದಿನಗಳ ಕಾಲ ವಿಶೇಷ ಚರ್ಚೆ ನಡೆದ ಬಳಿಕ ಮಾರ್ಚ್ 5 ರಂದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಮಾರ್ಚ್ 5 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಜೊತೆಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಲೋಕಾಯುಕ್ತ ತಿದ್ದುಪಡಿ ವಿಧೇಯಕ, ರಾಜ್ಯ ಬಹಿರಂಗ ಸ್ಥಳಗಳ ತಿದ್ದುಪಡಿ ವಿಧೇಯಕ, ಹಣಕಾಸು ವಿಧೇಯಕ ಸೇರಿದಂತೆ 15ಕ್ಕೂ ಹೆಚ್ಚು ವಿಧೇಯಕಗಳು ಉಭಯ ಸದನಗಳಲ್ಲಿ ಅಂಗೀಕಾರವಾಗಲಿವೆ.
ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ
ರಾಜ್ಯಪಾಲರು ಜಂಟಿ ಅಧಿವೇಶ ಉದ್ದೇಶಿಸಿ ಮಾಡಿರುವ ಭಾಷಣ ಮೇಲೆ ವಿಧಾನ ಪರಿಷತ್ನಲ್ಲಿ ನಡೆದ ಚರ್ಚೆಗೆ ಸಿಎಂ ಯಡಿಯೂರಪ್ಪ ಸರ್ಕಾರದ ಉತ್ತರ ಕೊಡಲಿದ್ದಾರೆ. ವಿಧಾನಸಭೆಯ ಬಳಿಕ ವಿಧಾನ ಪರಿಷತ್ನಲ್ಲಿ ಬಿಎಸ್ವೈ ಅವರು ಉತ್ತರ ಕೊಡಲಿದ್ದಾರೆ.
ಸ್ವಾತಂತ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕರ, ನಾಯಕರ ಹೇಳಿಕೆ, ಎನ್ಆರ್ಸಿ, ಸಿಎಎ ಕಾಯ್ದೆ ವಿರೋಧಿಸಿ ನಡೆದ ಹೋರಾಟಗಳಲ್ಲಿ ಆಗಿರುವ ಹಿಂಸೆ ಕುರಿತಂತೆ ಮೇಲ್ಮನೆಯಲ್ಲಿಯೂ ವಿರೋಧ ಪಕ್ಷಗಳ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ. ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಮೇಲೆ ಬಿಜೆಪಿ ನಾಯಕರು ಮಾಡಿರುವ ಆರೋಪಗಳು ಸರ್ಕಾರಕ್ಕೆ ಬಿಸಿ ತುಪ್ಪವಾಗಲಿರುವುದು ಸತ್ಯ.