ಕೇಂದ್ರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ : ಎಚ್.ಡಿ.ಕುಮಾರಸ್ವಾಮಿ
Recommended Video
ಬೆಂಗಳೂರು, ಫೆಬ್ರವರಿ 01 : 'ಕೇಂದ್ರ ಸರ್ಕಾರ ಬಜೆಟ್ ಮೂಲಕ ಜನರನ್ನು ತಾತ್ಕಾಲಿಕವಾಗಿಯಾದರೂ ಮೆಚ್ಚಿಸುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಇದೊಂದು ಬಾಂಬೆ ಮಿಠಾಯಿ ಬಜೆಟ್' ಎಂದು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಕೇಂದ್ರ ಬಜೆಟ್ ಕಡ್ಡಿಯ ತುದಿಗೆ ಕೆಂಪಗೆ ಸುತ್ತಿಕೊಡುವ ಕಾಟನ್ ಕ್ಯಾಂಡಿ ಅಥವ ಬಾಂಬೆ ಮಿಠಾಯಿ ಇದ್ದಂತೆ ಇದೆ' ಎಂದು ವ್ಯಂಗ್ಯವಾಡಿದರು.
ಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಗಳು
'ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಐದು ವರ್ಷಗಳಿಂದ ಜನರು ಈ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಬಜೆಟ್ನಲ್ಲಿ ಅದನ್ನು ಘೋಷಣೆ ಮಾಡಲಾಗಿದೆ' ಎಂದರು.
ಬಜೆಟ್ ಘೋಷಣೆಗಳೇನು? ಇಲ್ಲಿದೆ ಮಾಹಿತಿ
ಕುಮಾರಸ್ವಾಮಿ ಹೇಳಿದ್ದೇನು?
* ಕೇಂದ್ರ ಬಜೆಟ್ ಸಂಪೂರ್ಣವಾಗಿ ವಿಫಲವಾಗಿದೆ. ತಾತ್ಕಾಲಿಕವಾಗಿಯಾದರೂ ಜನರನ್ನು ಮೆಚ್ಚಿಸುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆಯೂ ಹುಸಿಯಾಗಿದೆ.
* ಕಿಸಾನ್ ಸಮ್ಮಾನ್ ಯೋಜನೆಯಿಂದಾಗಿ 12 ಕೋಟಿ ದೇಶದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕಾಗಿ 75,000 ಕೋಟಿ ಅನುದಾವನ್ನು ತೆಗೆದಿಟ್ಟಿದ್ದಾರೆ.
* ಈ ಯೋಜನೆಯಡಿ ಕರ್ನಾಟಕ 59 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ನಮ್ಮ ರಾಜ್ಯಕ್ಕೆ 3579 ಕೋಟಿ ಅನುದಾನ ಬರುತ್ತದೆ. ಆದರೆ, ಅವರದ್ದೇ ಸರ್ಕಾರ ಮತ್ತೆ ಬಂದು ಈ ಯೋಜನೆ ಜಾರಿಗೆ ಬರಬೇಕಿದೆ.
* ಕರ್ನಾಟಕ ಸರ್ಕಾರ 44 ಲಕ್ಷ ರೈತರಿಗೆ ಉಪಯೋಗವಾಗುವಂತೆ 48 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಹಾಗಾದರೆ ನಾವು ಕೇಂದ್ರ ಘೋಷಣೆ ಮಾಡಿರುವ ಯೋಜನೆಯನ್ನು ಬಾಂಬೆ ಮಿಠಾಯಿ ಎಂದು ಕರೆಯಬೇಕೆ?
* ಸಬ್ ಅರ್ಬನ್ ರೈಲು ಯೋಜನೆಗೆ ಒಪ್ಪಿಗೆ ಕೊಡಿ ಎಂದು ನನ್ನ ಮೇಲೆ ಒತ್ತಡ ಹಾಕಿದರು. ಬಜೆಟ್ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು. ಆದರೆ, ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
* ಕರ್ನಾಟಕದ 17 ಬಿಜೆಪಿ ಸಂಸದರು 5 ವರ್ಷಗಳ ಕಾಲ ಕೇಂದ್ರದಲ್ಲಿ ಹೋರಾಟ ಮಾಡಿ ರಾಜ್ಯಕ್ಕೆ ತಂದಿರುವ ಕೊಡುಗೆಗಳಿಗೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.