BTS2020: ಗ್ರಾಮೀಣ ಐಟಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ; ಫೈನಲ್ಗೆ ಕನ್ನಡಿಗ!
ಬೆಂಗಳೂರು, ನ. 21: ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ಕಂಪನಿ ಟಿಸಿಎಸ್ ನಡೆಸುವ ಗ್ರಾಮೀಣ ಐಟಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿದ್ದಾರೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020ರಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಜಸ್ಥಾನದ ಸೂರತ್ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿ ಹಿಮಾಂಶು ಮೊದಲ ಸುತ್ತಿನಿಂದಲೇ ಸರಿಯಾದ ಉತ್ತರಗಳನ್ನು ನೀಡಿ ಅಂತಿಮ ಸುತ್ತಿನ ತನಕ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 350 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಪ್ರಥಮ ಸ್ಥಾನದೊಂದಿಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.
BTS2020: ರಾಜ್ಯದ ಮೊದಲ ಜೈವಿಕ ಆರ್ಥಿಕತೆ ವರದಿ ಬಿಡುಗಡೆ!
300 ಅಂಕಗಳನ್ನು ಗಳಿಸಿ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಅವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು. ಕನ್ನಡಿಗ ಸುಹಾಸ್ ಶೈನೈ ಅಂತಿಮ ಸುತ್ತಿನವರೆಗೆ ಬಂದಿದ್ದರು.
ಪೈನಲ್ಗೆ ಕನ್ನಡಿಗ
ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ, ಗುಜರಾತ್ನ ಭಾವನಗರದ ಪರಸ್ ಗಥಾನಿ, ಛತ್ತೀಸ್ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.
5 ಸುತ್ತಿನ ಸ್ಪರ್ಧೆ
ಬೈಟ್ ಅಬಂಡೆನ್ಸ್, ಟೆಕ್ ವಿಶನ್, ಟೆಕ್ ಕ್ಲೌಡ್, ಟೆಕ್ ಅಜೈಲ್ ಮತ್ತು ಟೆಕ್ ಎಕೋಸಿಸ್ಟಮ್ ಹೀಗೆ ಐದು ವಿಭಾಗಗಳಲ್ಲಿ ರಸಪ್ರಶ್ನೆಗಳನ್ನು ಕೇಳಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸುವುದು, ಐಟಿ ಕಂಪನಿಗಳು, ಉತ್ಪನ್ನಗಳ ಲೋಗೋಗಳು, ಚಿತ್ರಗಳನ್ನು ಗುರುತಿಸಿ ಅವುಗಳ ಹಿನ್ನೆಲೆಯನ್ನು ವಿವರಿಸುವುದು, ಕಂಪನಿಗಳು, ಉತ್ಪನ್ನಗಳ ಅಸ್ತವ್ಯಸ್ತಗೊಂಡ ಹೆಸರುಗಳನ್ನು ಗುರುತಿಸುವುದು, ಕಂಪನಿಗಳ ಘೋಷವಾಕ್ಯಗಳನ್ನು ಗುರುತಿಸುವ ಸವಾಲನ್ನು ಒಡ್ಡಲಾಯಿತು. ರಾಷ್ಟ್ರೀಯ ಮಟ್ಟವಾಗಿದ್ದರಿಂದ ಪ್ರಶ್ನೆಗಳು ತುಸು ಕಠಿಣವಾಗಿಯೇ ಇದ್ದವು. ಪಿಕ್ಬ್ರೈನ್ ಎಂದೇ ಹೆಸರುವಾಸಿಯಾದ ಬಾಲಸುಬ್ರಮಣಿಂ ಕ್ವಿಝ್ ಮಾಸ್ಟರ್ ಆಗಿದ್ದರು.
ದಾಖಲೆ ಸೇರಿದ ಕ್ವಿಜ್
ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಅರಿವು ಪರೀಕ್ಷಿಸುವ ಹಾಗೂ ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಈ ಕ್ವಿಝ್ ನಡೆಯುತ್ತಿದ್ದು, ಈ ತನಕ 18 ದಶಲಕ್ಷ ಮಕ್ಕಳನ್ನು ತಲುಪಿದೆ. 8 ರಿಂದ 12ನೇ ತರಗತಿಯ ತನಕದ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಕ್ವಿಝ್ ಈಗಾಗಲೇ ಲಿಮ್ಕಾ ದಾಖಲೆ ಸೇರಿದೆ.
ಪ್ರಶಸ್ತಿ ಪ್ರಧಾನ
ಟಿಸಿಎಸ್ನ ಆಪರೇಶನ್ಸ್ ಮುಖ್ಯಸ್ಥ ಸುನಿಲ್ ದೇಶಪಾಂಡೆ ಅವರು ವರ್ಚುವಲ್ ಆಗಿ ಪ್ರಶಸ್ತಿ ವಿತರಣೆ ಮಾಡಿದರು. ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.
Recommended Video