ನಾಯಕತ್ವ ಬದಲಾವಣೆ ಕೂಗು ತಣ್ಣಗಾಗಿಸಲು ಸಿಎಂ ಅಸ್ತ್ರ?
ಬೆಂಗಳೂರು ಡಿಸೆಂಬರ್ 30: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾಣೆ ಕುರಿತು ಎದ್ದಿರುವ ಅಸಾಮಾಧಾನಕ್ಕೆ ನಿಗಧಿಯಾಗಿದ್ದ 'ಉತ್ತಾರಾಯಣ' ಡೆಡ್ ಲೈನ್ ಸಮೀಪಿಸುತ್ತಿದೆ. ಹೊಸ ವರ್ಷದ ಸಂಕ್ರಮಣಕ್ಕೆ ಭಿನ್ನಮತ ಶಮನ ಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇದರ ಭಾಗವಾಗಿ ಮುಖ್ಯಮಂತ್ರಿ ರೂಪಿಸಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ 'ಪ್ಲಾನ್' ಯಶಸ್ಸು ಆಗುತ್ತಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಬರುವ ಸಂಕ್ರಮಣದ ಉತ್ತರಾಯಣದ ವರೆಗೂ ಕಾದು ನೋಡಿ ಎಂದು ನಾಯಕತ್ವ ಬದಲಾವಣೆಗೆ ಅಗ್ರಸ್ಥಾನಲ್ಲಿ ನಿಂತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದರು. ಅಚ್ಚರಿ ಏನೆಂದರೆ ಜನವರಿ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಭದ್ರಾವತಿಯಲ್ಲಿ ಆರ್ಎಎಫ್ ಕ್ಯಾಂಪಸ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಬರುತ್ತಿದ್ದಾರೆ.
ಅಮಿತ್ ಶಾ ಕರ್ನಾಟಕ ಭೇಟಿ ಮತ್ತು ಯತ್ನಾಳ್ 'ರಾಜಕೀಯ ಸಂಕ್ರಮಣದ' ಹೇಳಿಕೆ
ಇದರ ಭಾಗವಾಗಿ ಉತ್ತರ ಕರ್ನಾಟಕ ಭಾಗಕ್ಕೂ ಭೇಟಿ ನೀಡಲಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಸೊಲ್ಲೆತ್ತದಂತೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. ಹಂತಹಂತವಾಗಿ ಶಾಸಕರ ಜತೆ ಸಮಾಲೋಚನೆ ನಡೆಸಿ ನಾನು ಪ್ರಶ್ನಾತೀತ ನಾಯಕ ಎಂಬ ಸಂದೇಶ ಕೇಂದ್ರ ನಾಯಕರಿಗೆ ರವಾನಿಸಲು ಶಾಸಕಾಂಗ ಸಭೆ ಕರೆದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು ಜ. 2 ಮತ್ತು 3 ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಮುಗಿಯುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ಮುಖ್ಯಮಂತ್ರಿಗಳ ಸಂದೇಶ ರವಾನಿಸಿದ್ದಾರೆ.
ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿದೆಯೇ?
ಉಪ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಹೀಗಾಗಿ ನಾಯಕತ್ವ ಬದಲಾವಣೆ ಕೂಗು ಸೊರಗಿತ್ತು. ಸಂಕ್ರಾಂತಿ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂದು ಬಿಜೆಪಿಯ ನಾಯಕರು ಮಾತನಾಡಿಕೊಳ್ಳುತ್ತಿದ್ದರು. ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿದೆ. ಅಷ್ಟೇ ಬಿರುಸಾಗಿ ಬಿ. ಎಸ್. ಯಡಿಯೂರಪ್ಪ ಕೂಡ ತನ್ನ ಹೊಸ ವರ್ಷದ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕ್ಷೇತ್ರಗಳ ಅಭಿವೃದ್ಧಿ, ಅನುದಾನ ಕೊರತೆ, ಸಚಿವ ಸ್ಥಾನ ಅಸಮಾಧಾನ, ನಿಗಮ ಮಂಡಳಿ ನೇಮಕ ಕುರಿತ ಅಸಮಾಧಾನ ಕುರಿತು ಶಾಸಕರ ಜತೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಚರ್ಚೆಯ ಬಳಿಕ ಹೊಸ ವರ್ಷಕ್ಕೆ ಬಂಪರ್ ಪ್ಯಾಕೇಜ್ ನೀಡಿದರೂ ಅಚ್ಚರಿ ಪಡಬೇಕಿಲ್ಲ. ನಾಯಕತ್ವ ಬದಲಾವಣೆ ಕೂಗು ತಣ್ಣಗಾಗಿಸಲು ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಆಯೋಜಿಸುವ ಮೂಲಕ ತನ್ನ ನಾಯಕತ್ವದ ಶಕ್ತಿಯನ್ನು ತೋರಿಸಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಅಸಾಮಾಧಾನ ತೋಡಿಕೊಂಡ ಶಾಸಕರ ಜತೆ ಸಮಾಲೋಚಿಸಿ ಅವರ ಬೇಡಿಕೆ ಈಡೇರಿಸಿದಲ್ಲಿ ಕೇಂದ್ರ ನಾಯಕರು ರಾಜ್ಯಕ್ಕೆ ಬರುಷ್ಟರಲ್ಲಿ ನಾಯಕತ್ವದ ಬದಲಾವಣೆ ಕೂಗು ತಣ್ಣಗಾಗಬಹುದು ಎಂಬ ಆಲೋಚನೆ ಯಡಿಯೂರಪ್ಪ ಅವರದ್ದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಮೊದಲ ಸಭೆ: ಜನವರಿ 4 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ ಯಾದಗಿರಿ ಭಾಗದ ಬಿಜೆಪಿಯ ಹದಿನೇಳು ಶಾಸಕರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಎರಡನೇ ಸಭೆ: ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ ವರೆಗೆ ಮುಂಬಯಿ ಮತ್ತು ಮಧ್ಯ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ಶಾಸಕರ ಜತೆ ಸಭೆ ನಡೆಯಲಿದೆ.
ಮೂರನೇ ಸಭೆ: ಸಂಜೆ 6.30 ರಿಂದ ರಾತ್ರಿ 8 ಗಂಟೆ ವರೆಗೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಶಾಸಕರ ಜತೆ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ.
ನಾಲ್ಕನೇ ಸಭೆ: ಜನವರಿ 5 ರಂದು ಮಧ್ಯಾಹ್ನ 12 ಗಂಟೆಯಿಂದ 1.30 ರ ವರೆಗೆ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಂರಾಜನಗರ, ಮೈಸೂರು, ಮಂಡ್ಯ ಮತ್ತು ರಾಮನಗರ ಬಿಜೆಪಿ ಶಾಸಕರ ಜತೆ ಚರ್ಚೆ.
Recommended Video
ಐದನೇ ಸಭೆ: ಮಧ್ಯಾಹ್ನ 2. 30 ರಿಂದ ಸಂಜೆ 4 ಗಂಟೆ ವರೆಗೆ ಕೇಂದ್ರ ಭಾಗದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಬಿಜೆಪಿ ಶಾಸಕರ ಜತೆ ಚರ್ಚೆ ನಡೆಯಲಿದೆ.