ಜನತೆ ಈಗಲೂ ಬಿಜೆಪಿ ಸರ್ಕಾರವನ್ನೇ ಬಯಸುತ್ತಾರೆ: ಯಡಿಯೂರಪ್ಪ
ಬೆಂಗಳೂರು, ಜೂನ್ 29: ರಾಜ್ಯದ ಜನರು ಈಗಲೂ ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 130 ಸ್ಥಾನ ಗೆಲ್ಲುತ್ತೇವೆ ಎಂದು ನಾವೆಲ್ಲಾ ಕೆಲಸ ಮಾಡಿದ್ದೆವು, ಆದರೂ 104 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ, ಪ್ರತಿಯೊಬ್ಬರು ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಹೇಳುತ್ತಿದ್ದಾರೆ, ಈಗಲೂ ಕಾಲ ಮಿಂಚಿಲ್ಲ ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು ಎಂದರು.
ಬಿಜೆಪಿ ಕಾರ್ಯಕಾರಣಿಯಲ್ಲಿ ಏನೇನು ಚರ್ಚೆ ಆಗುತ್ತೆ?
ರಾಜ್ಯದಲ್ಲಿ ಪರಿಸಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಬಿಜೆಪಿಯ ಪರವಾಗಿ ನಿಂತಿದ್ದಾರೆ, ದೇಶದಲ್ಲಿ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಸಿಂಗಲ್ ಲಾರ್ಜೆಸ್ಟ್ ಪಕ್ಷಕ್ಕೆ ಅವಕಾಶ ಕೊಡುವುದು ನಮಗೆಲ್ಲ ತಿಳಿದಿದೆ.
ಆದರೆ ಸುಪ್ರೀಂಕೋರ್ಟ್ನಲ್ಲಿ ಮಧ್ಯರಾತ್ರಿ ಈ ಕುರಿತು ಚರ್ಚೆಯಾಗಿತ್ತು, ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶವಿದ್ದರೂ 24 ಗಂಟೆಗಳ ಅವಕಾಶ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
ಬಿಜೆಪಿಯ 104 ಶಾಸಕರು ಹಾಗೂ 8 ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಾವಿವತ್ತು 40ಸ್ಥಾನದಿಂದ 104 ಸ್ಥಾನಕ್ಕೆ ಮುಟ್ಟಿದ್ದೇವೆ, ಕಾಂಗ್ರೆಸ್ 132ರಿಂದ 78ಕ್ಕೆ ಕುಸಿದಿದ್ದಾರೆ ಜೆಡಿಎಸ್ 38ಕ್ಕೆ ಕುಸಿದಿದೆ ಇದರಿಂದ ರಾಜ್ಯದ ಜನರು ಬಿಜೆಪಿ ಪಕ್ಷದ ಬಗ್ಗೆಯೇ ಹೆಚ್ಚು ವಿಶ್ವಾಸವಿಟ್ಟಿರುವುದು ಗೋಚರವಾಗುತ್ತದೆ ಎಂದು ಹೇಳಿದರು.