ನೆರೆ ಪರಿಹಾರ ಪ್ಯಾಕೇಜ್ ಘೋಷಿಸಿ: ಪ್ರಧಾನಿ ಮೋದಿಗೆ ಯಡಿಯೂರಪ್ಪ ಪತ್ರ
ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆರೆ ಪರಿಹಾರಕ್ಕೆ 10 ಸಾವಿರ ಕೋಟಿ ರೂ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಪ್ರಧಾನಿಗೆ ಅವರು ಅಕ್ಟೋಬರ್ 17ರಂದು ಮೂರು ಪುಟಗಳ ಪತ್ರ ಬರೆದಿದ್ದು, ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರೈತರು ಹಾಗೂ ಜನಸಾಮಾನ್ಯರಿಗೆ ಪುನರ್ ವಸತಿ ಕಲ್ಪಿಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಅವರು ವಿವರಿಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸುರಿದ ಭಾರಿ ಮಳೆಯಿಂದ ರಾಜ್ಯಕ್ಕೆ ಸುಮಾರು 21,609 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಅಪಾರ ಬೆಳೆ ನಾಶವಾಗಿದೆ. ಇವರೆಲ್ಲರಿಗೂ ಕೂಡಲೇ ಪರಿಹಾರ ನೀಡಬೇಕಾಗ ಅಗತ್ಯವಿದೆ. ಹೀಗಾಗಿ ಸಹಾಯ ಹಸ್ತ ಚಾಚುವಂತೆ ಅವರು ಮನವಿ ಮಾಡಿದ್ದಾರೆ. ಮುಂದೆ ಓದಿ.
ಮೂರು ತಿಂಗಳಲ್ಲಿ ನಷ್ಟದ ವಿವರ
ಆಗಸ್ಟ್ನಿಂದ ಸೆಪ್ಟೆಂಬರ್ 15ರವರೆಗೆ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಭಾರಿ ಮಳೆಯಿಂದ ಅಂದಾಜು 9,441 ಕೋಟಿ ರೂ ಹಾನಿಯಾಗಿದೆ. ಸೆಪ್ಟೆಂಬರ್ 15ರ ಬಳಿಕ ಉಂಟಾದ ಮಳೆ ಹಾಗೂ ಪ್ರವಾಹದಿಂದ ಸುಮಾರು 5,668 ಕೋಟಿ ರೂ ನಷ್ಟ ಸಂಭವಿಸಿದೆ. ಈಗ ಅಕ್ಟೋಬರ್ ಮೊದಲ ವಾರದಿಂದ ಸುರಿಯುತ್ತಿರುವ ಮಳೆಯಿಂದ ಇದುವರೆಗೂ 6,500 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
30,000 ಮನೆಗಳಿಗೆ ಹಾನಿ
ಈ ಮೂರು ತಿಂಗಳಲ್ಲಿ ಉಂಟಾದ ಮಳೆ-ಪ್ರವಾಹದಿಂದ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಆರು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ನಾಶವಾಗಿದೆ. ರಸ್ತೆ, ಸೇತುವೆಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಹಾಗೂ ವಿದ್ಯುತ್ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಜನರು ಅತಂಕದಲ್ಲಿದ್ದಾರೆ
ಸತತ ಎರಡು ವರ್ಷಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದೆ. ಪ್ರವಾಹ, ಭೂಕುಸಿತ ಮುಂತಾದ ಅವಘಡಗಳಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷವೂ ಉಂಟಾಗುತ್ತಿರುವ ಪ್ರವಾಹದ ಹಾನಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದಾರೆ.
Recommended Video
ಪರಿಹಾರ ಕ್ರಮ ಕೈಗೊಳ್ಳಲಾಗಿದೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ. ತಕ್ಷಣದ ಪರಿಹಾರ ಕ್ರಮವಾಗಿ ತಲಾ 10 ಸಾವಿರ ರೂ ನೀಡಲಾಗುತ್ತಿದೆ. ಸಂಪೂರ್ಣ ಮತ್ತು ಭಾಗಶಃ ಮನೆ ಕಳೆದುಕೊಂಡವರಿಗೆ ಮನೆಗಳ ಪುನರ್ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಹಾಗೂ ಮನೆಗಳ ಸಣ್ಣಪುಟ್ಟ ದುರಸ್ತಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.