ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಶಿಕಾರಿಪುರಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ!
ಬೆಂಗಳೂರು, ಜೂ. 12: ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಬಿ.ಎಸ್. ಯಡಿಯೂರಪ್ಪ ಅವರು ದಿಢೀರ್ ಎಂದು ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳಿರುವುದು ಕುತೂಹಲ ಮೂಡಿಸಿದೆ. ಕಳೆದ ಆರು ತಿಂಗಳುಗಳಿಂದ ಒಂದಲ್ಲ ಒಂದು ಅರ್ಥದಲ್ಲಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಚರ್ಚೆ ಆಗುತ್ತಲೇ ಇವೆ. ಪಕ್ಷದಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಮಾತುಗಳಿಂದ ಬೇಸತ್ತಿದ್ದ ಸಿಎಂ ಯಡಿಯೂರಪ್ಪ ಅವರು, "ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡಲು ಸಿದ್ಧ" ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದರು.
ಅದಾದ ಬಳಿಕ ಯಡಿಯೂರಪ್ಪ ಅವರಿಗೆ ಆಪ್ತ ಶಾಸಕರು ಹಾಗೂ ಸಚಿವರಿಂದ ಸಾಲುಸಾಲಾಗಿ ಬೆಂಬಲ ವ್ಯಕ್ತವಾಗಿತ್ತು. ಆದರೂ ಸಿಎಂ ಯಡಿಯೂರಪ್ಪ ಅವರ 'ಪರ' ಅಥವಾ 'ವಿರೋಧ'ವಾಗಿ ಯಾರೂ ಹೇಳಿಕೆ ಕೊಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೂಚನೆ ಹೊರಡಿಸಿದ್ದರು.
ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ
ಈ ಎಲ್ಲದರ ಮಧ್ಯೆ ಇದೀಗ ಸಿಎಂ ಯಡಿಯೂರಪ್ಪ ಅವರು ದಿಢೀರ್ ಎಂದು ತಮ್ಮ ರಾಜಕೀಯ ತವರೂರು ಶಿಕಾರಿಪುರದಲ್ಲಿ ಎರಡು ದಿನಗಳ ಕಾಲ ಇರಲಿದ್ದಾರೆ. ಬಿಡುವಿಲ್ಲದ ಕೆಲಸಗಳು ಹಾಗೂ ಕೊರೊನಾ ನಿಯಂತ್ರಣದ ಸವಾಲಿನ ಮಧ್ಯೆ ಎರಡು ದಿನಗಳ ಕಾಲ ಅವರು ಅಲ್ಲಿ ವಾಸ್ತವ್ಯ ಹೂಡಿರುವುದು ಬಿಜೆಪಿ ಪಾಳೆಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಸಿಎಂ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ವಾಸ್ತವ್ಯ ಮಾಡಿದ್ದು ಯಾಕೆ?
ಶಿಕಾರಿಪುರಕ್ಕೆ ಸಿಎಂ ದಿಢೀರ್ ಭೇಟಿ!
ಹಾಸನದಿಂದ ನಿನ್ನೆ (ಜೂ.11) ನೇರವಾಗಿ ಶಿಕಾರಿಪುರಕ್ಕೆ ತೆರಳಿರುವ ಸಿಎಂ ಯಡಿಯೂರಪ್ಪ ಅವರು ಅಲ್ಲಿನ ತಮ್ಮ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದಾರೆ. ನಿನ್ನೆ ಮತ್ತು ಇವತ್ತು ಶಿಕಾರಿಪುರದಲ್ಲಿ ಕಳೆದಿರುವ ಅವರು, ನಾಳೆ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಅದಾದ ಬಳಿಕ ಬಿಜೆಪಿಯ ಶಾಸಕ ಅರವಿಂದ್ ಬೆಲ್ಲದ್ ಅವರು ಇದೀಗ ದೆಹಲಿಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು 'ಶಿಕಾರಿಪುರ'ದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಮಾಡಿದ್ದಾರೆ.
ಶಿಕಾಪುರದಲ್ಲಿ ಖಾಸಗಿ ಕಾರ್ಯಕ್ರಮಗಳಿಲ್ಲ!
ಯಾವುದೇ ಖಾಸಗಿ ಕಾರ್ಯಕ್ರಮಗಳು ಇಲ್ಲದಿದ್ದರೂ ಸಿಎಂ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಮಾಡಿದ್ದಾರೆ. ಇನ್ನು ಸರ್ಕಾರಿ ಕಾರ್ಯಕ್ರಮಗಳನ್ನು ಗಮನಿಸಿದೆ ಕೊರೊನಾ ನಿಯಂತ್ರಣದ ಕುರಿತು ಸಭೆಗಳನ್ನು ಮಾಡಿದ್ದಾರೆ. ಖಾಸಗಿ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿರುವುದಾಗಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೊಂದೆಡೆ ಸಿಎಂ ಆಪ್ತ ವಲಯದಲ್ಲಿರುವ ಶಾಸಕ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರವ ಪರವಾಗಿ ಸಹಿಸಂಗ್ರಹದಲ್ಲಿ ತೊಡಗಿದ್ದರೆ. ಈ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಉಳಿದುಕೊಂಡಿರುವುದರ ಹಿಂದೆ ರಾಜಕೀಯ ಕಾರಣಗಳಿವೆ ಎನ್ನುತ್ತಾರೆ ಯಡಿಯೂರಪ್ಪ ಅವರನ್ನು ಬಲ್ಲವರು. ಅಷ್ಟಕ್ಕೂ ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಅವರು ಮಾಡುತ್ತಿರುವುದೇನು?
ಲಾಕ್ಡೌನ್ ಸಡಿಲಿಕೆ: ತರ್ಕಕ್ಕೇ ನಿಲುಕದ ಸರಕಾರದ ಮಾರ್ಗಸೂಚಿಗಳು
ಹುಚ್ಚೂರಾಯಸ್ವಾಮಿ ಮೊರೆ ಹೋದ ಸಿಎಂ?
ರಾಜಕೀಯ ಸವಾಲು ಅಥವಾ ವೈಯಕ್ತಿಕ ಕಷ್ಟಗಳು ಎದುರಾದಾಗ ಸಿಎಂ ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ ಹೋಗುವುದು ವಾಡಿಕೆ ಎನ್ನಲಾಗುತ್ತಿದೆ. ಶಿಕಾರಿಪುರದ ಹುಚ್ಚೂರಾಯಸ್ವಾಮಿ ಯಡಿಯೂರಪ್ಪ ಅವರ ಇಷ್ಟದ ದೇವರು. ಆ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸುವುದು ರೂಢಿ. ಹಿಂದೆಯೂ ಕೂಡ ಅನೇಕ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಾದ ಹುಚ್ಚೂರಾಯ ಸ್ವಾಮೀಯ ದರ್ಶನದ ಬಳಿಕ ಪ್ರಕಟಿಸಿದ್ದು ಇದೆ. ಆದರೆ ಈಗ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಹುಚ್ಚೂರಾಯ ಸ್ವಾಮಿ ದೇವಸ್ಥಾನವನ್ನು ಕೂಡ ಭಕ್ತರಿಗೆ ಬಂದ್ ಮಾಡಲಾಗಿದೆ.
ದೇವಸ್ಥಾನವನ್ನು ಪ್ರವೇಶ ಮಾಡದಿದ್ದರೂ ಕ್ಷೇತ್ರಕ್ಕೆ ಭೇಟಿ ಕೊಡುವುದರಿಂದ ಅಂದುಕೊಂಡಿದ್ದು ಈಡೇರಲಿದೆ ಎಂದು ಯಡಿಯೂರಪ್ಪ ಅವರು ನಂಬಿದ್ದಾರೆ ಎನ್ನಲಾಗಿದೆ. ಜೊತೆಗೆ ಸ್ಥಳೀಯ ಆಪ್ತರೊಂದಿಗೆ ಚರ್ಚಿಸುತ್ತಾರೆ ಎನ್ನಲಾಗಿದೆ. ಹೀಗಾಗಿ ಮಹತ್ವದ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಅವರು ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
Recommended Video
ಬಿಜೆಪಿ ನಾಯಕತ್ವ ಬದಲಾವಣೆ?
ಸಿಎಂ ಬದಲಾವಣೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೊದಲ ಬಾರಿ ಪ್ರಸ್ತಾಪ ಮಾಡಿದ್ದರು. ಈವರೆಗೂ ಅವರ ಮೇಲೆ ಯಾವುದೇ ಶಿಸ್ತುಕ್ರಮವನ್ನು ಕೈಗೊಳ್ಳಲು ರಾಜ್ಯ ಬಿಜೆಪಿ ಅಥವಾ ಹೈಕಮಾಂಡ್ ಮುಂದಾಗಿಲ್ಲ. ಅವರು ಹೇಳಿಕೆ ಕೊಟ್ಟ ಬಳಿಕ ಕಳೆದ ಡಿಸೆಂಬರ್ 1, 2020 ರಂದು ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನಾಯ್ಕ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಸ್ಪೋಟಕ ಪತ್ರವೊಂದನ್ನು ಬರೆದಿದ್ದರು. ರಾಜ್ಯ ಬಿಜೆಪಿ ಸರ್ಕಾರ 'ಬಿಜೆಪಿ ಸಿದ್ದಾಂತ'ಗಳನ್ನು ಮೀರಿ ಆಡಳಿತ ನಡೆಸುತ್ತಿದೆ. ಈ ಬಗ್ಗೆ ಚರ್ಚೆ ಮಾಡಲು 'ಶಾಸಕರ' ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದರು.
ಇದೀಗ ಮತ್ತಷ್ಟು ಹೇಳಿಕೆಗಳು ಇದೇ ಬೇಡಿಕೆಯ ಹಿನ್ನೆಲೆಯಲ್ಲಿ ಕೇಳಿ ಬಂದಿವೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಖಡಕ್ ಸಂದೇಶವನ್ನು ರವಾನಿಸಬೇಕಿದೆ. ಉಳಿದ ಅವಧಿಗೆ ನಾನೇ ಸಿಎಂ ಎಂದು ಹಾಸನದಲ್ಲಿ ಯಡಿಯೂರಪ್ಪ ಅವರು ಘೋಷಣೆ ಮಾಡಿಕೊಂಡಿದ್ದಾರೆ. ಆದರೂ ಶಿಕಾರಿಪುರಕ್ಕೆ ಸಿಎಂ ಯಡಿಯೂರಪ್ಪ ಅವರು ಹೋಗಿದ್ಯಾಕೆ? ಎಂದು ಅವರ ರಾಜಕೀಯ ವಿರೋಧಿಗಳು ಮಾತನಾಡಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ!