ಬಿಜೆಪಿ ಸಭೆ ಬ್ಯಾನರ್ಗಳಲ್ಲಿ ಯಡಿಯೂರಪ್ಪ ಫೋಟೋ ನಾಪತ್ತೆ!
ಬೆಂಗಳೂರು , ಆಗಸ್ಟ್ 01; ಕರ್ನಾಟಕದ ರಾಜಕೀಯದಲ್ಲಿ ಕೆಲವು ಬದಲಾವಣೆಗಳಾಗಿವೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಜುಲೈ 26ರಂದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡಿತು. ಅಂದೇ ಯಡಿಯೂರಪ್ಪ ರಾಜೀನಾಮೆಯನ್ನು ಘೋಷಣೆ ಮಾಡಿದರು. ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದರು. ಹೈಕಮಾಂಡ್ ನಾಯಕರು ಬೆಂಗಳೂರಿಗೆ ಆಗಮಿಸಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಾಯಿತು.
ನಾಲ್ಕು ಬಾರಿ ಸಿಎಂ ಆದ್ರೂ ಯಡಿಯೂರಪ್ಪ ಆಳಿದ್ದು ಮಾತ್ರ ಐದು ವರ್ಷ 82 ದಿನ!
ಜುಲೈ 28ರ ಬುಧವಾರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ. ಮುಂದಿನ ವಾರ ಬೊಮ್ಮಾಯಿ ಸಂಪುಟವನ್ನು ರಚನೆ ಮಾಡುವ ನಿರೀಕ್ಷೆ ಇದ್ದು, ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂಬ ಚರ್ಚೆಗಳು ಜೋರಾಗಿ ನಡೆದಿವೆ.
ಯಡಿಯೂರಪ್ಪರಿಂದ ರಾಜೀನಾಮೆ ಪಡೆಯಲು ಬಿಜೆಪಿಗಿದ್ದ 5 ಪ್ರಮುಖ ಕಾರಣಗಳು
ಯಡಿಯೂರಪ್ಪ ರಾಜೀನಾಮೆ ನೀಡಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಬಿಜೆಪಿಯ ಸಭೆಗಳ ಬ್ಯಾನರ್ನಲ್ಲಿ ಅವರ ಫೋಟೋ ಕಾಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.
ಯಶವಂತಪುರ ಮಂಡಲ ಮಹಿಳಾ ಮೋರ್ಚಾ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆಗಳು ಶನಿವಾರ ನಡೆದವು. ಈ ಎರಡೂ ಸಭೆಗಳ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ನಲ್ಲಿ ಯಡಿಯೂರಪ್ಪ ಭಾವಚಿತ್ರವೇ ಇರಲಿಲ್ಲ.
ಅಭಿಮಾನಿ ಆತ್ಮಹತ್ಯೆ; ಸಂತಾಪ ಸೂಚಿಸಿದ ಬಿ. ಎಸ್. ಯಡಿಯೂರಪ್ಪ
ಬ್ಯಾನರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಡಿ. ವಿ. ಸದಾನಂದ ಗೌಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಹಲವರ ಭಾವಚಿತ್ರಗಳಿದ್ದವು.
ಆದರೆ ಯಡಿಯೂರಪ್ಪ ಭಾವಚಿತ್ರ ಮಾತ್ರ ನಾಪತ್ತೆಯಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಐದು ದಿನ ಕಳೆಯುವುದರಲ್ಲಿಯೇ ಬ್ಯಾನರ್ನಲ್ಲಿ ಯಡಿಯೂರಪ್ಪ ಫೋಟೋ ಕೈ ಬಿಟ್ಟಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಕಣ್ತಪ್ಪಿನಿಂದ ಯಡಿಯೂರಪ್ಪ ಫೋಟೋ ಹಾಕಲಿಲ್ಲವೇ? ಅಥವ ಬೇಕು ಎಂಥಲೇ ಅವರ ಫೋಟೋ ಕೈಬಿಡಲಾಯಿತೇ? ಎಂದು ಚರ್ಚೆ ನಡೆಸಲಾಗುತ್ತಿದೆ. ಆದರೆ ಈ ಬೆಳವಣಿಗೆ ಬಗ್ಗೆ ಯಾವುದೇ ನಾಯಕರು ಇದುವರೆಗೂ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ.
"ನಲವತ್ತು ವರ್ಷಗಳ ಕಾಲ ರಾಜ್ಯಾದ್ಯಂತ ಸುತ್ತಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಬಿಎಸ್ವೈ ಫೋಟೋ ಹಾಕದಿರುವುದು ದುರಂತವೇ ಸರಿ. ನೀವು ಬ್ಯಾನರ್ ನಲ್ಲಿ ಯಡಿಯೂರಪ್ಪನವರ ಫೋಟೋ ತೆಗೆಯಬಹುದು,ಆದರೆ ಜನರ ಹೃದಯದಿಂದ ಯಡಿಯೂರಪ್ಪನವರನ್ನು ತೆಗೆಯಲು ಸಾಧ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಷ್ಟೀಯ ಯುವ ಮೋರ್ಚಾ ಅಧ್ಯಕ್ಷರು ಗಮನಿಸಬೇಕಾದ ವಿಷಯ" ಎಂಬ ಬರಹಗಳಿರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಈಗ ಶಿಕಾರಿಪುರದ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿ. ಪಕ್ಷದಲ್ಲಿ ಅವರು ಯಾವುದೇ ಸ್ಥಾನಮಾನವನ್ನು ಹೊಂದಿಲ್ಲ.
ಜಾಹೀರಾತಿನಲ್ಲಿ ಫೋಟೋ ಇರಲಿಲ್ಲ; ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ಮೊದಲು ಅಂದರೆ ಜುಲೈ 19ರಂದು ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಇಲಾಖೆ ಆರಂಭ ಮಾಡಿರುವುದಕ್ಕೆ ದೆಹಲಿ ಆವೃತ್ತಿಗಳಲ್ಲಿ ಬಿರೇಶ್ವರ ಕೊ. ಆಪರೇಟಿವ್ ಸೊಸೈಟಿ ಲಿ. ಅವರು ಜಾಹೀರಾತು ನೀಡಿದ್ದರು.
ಆದರೆ ಈ ಜಾಹೀರಾತಿನಲ್ಲಿ ಯಡಿಯೂರಪ್ಪ ಫೋಟೋ ನಾಪತ್ತೆಯಾಗಿತ್ತು. ಆಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿತ್ತು. ಇಂತಹ ಸಂದರ್ಭದಲ್ಲಿಯೇ ಫೋಟೋ ನಾಪತ್ತೆಯಾಗಿದ್ದು ಚರ್ಚೆಗೆ ಕಾರಣವಾಗಿತ್ತು.
Recommended Video
ಆಗ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಜಾಹೀರಾತು ಏಜೆನ್ಸಿಯ ಕಣ್ತಪ್ಪಿನಿಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಫೋಟೋ ನಾಪತ್ತೆಯಾಗಿದೆ. ಯಡಿಯೂರಪ್ಪ ನಮ್ಮ ನಾಯಕರಾಗಿದ್ದ ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದರು.