ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ : ಯಾರು, ಏನು ಹೇಳಿದರು?
ಬೆಂಗಳೂರು, ಸೆಪ್ಟೆಂಬರ್ 18 : ಬಿ.ಎಸ್.ಯಡಿಯೂರಪ್ಪ ಕ್ಷೇತ್ರ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 2018ರ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ. ಆದರೆ, ಯಾವ ಕ್ಷೇತ್ರ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಯಡಿಯೂರಪ್ಪ2018ರ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಆದ್ದರಿಂದ, ಅವರು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೆಚ್ಚಿನ ಕುತೂಹಲವಿರುತ್ತದೆ. ವಿರೋಧ ಪಕ್ಷಗಳು ಅವರ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಂತ್ರ ರೂಪಿಸುತ್ತವೆ.
ಯಡಿಯೂರಪ್ಪ ಎಲ್ಲಿಂದ ಸ್ಪರ್ಧಿಸಬಹುದು?
ಬಿಜೆಪಿ ವಲಯದಲ್ಲಿ ಸದ್ಯ ಹಬ್ಬಿರುವ ಸುದ್ದಿಗಳ ಪ್ರಕಾರ ಮೂರು ಕ್ಷೇತ್ರಗಳನ್ನು ಯಡಿಯೂರಪ್ಪ ಅವರ ಸ್ಪರ್ಧೆಗೆ ಅಂತಿಮಗೊಳಿಸಲಾಗಿದೆ. ಎರಡು ಕ್ಷೇತ್ರಗಳು ಬಾಗಲಕೋಟೆ ಜಿಲ್ಲೆಗೆ ಸೇರಿದೆ. ಮತ್ತೊಂದು ಕ್ಷೇತ್ರ ಹಾವೇರಿ ಜಿಲ್ಲೆಗೆ ಸೇರಿದ್ದಾಗಿದೆ.
ಶಿಕಾರಿಪುರ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ, ಬಿಎಸ್ವೈಗೆ ಅಮಿತ್ ಶಾ ಸೂಚನೆ
'ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದು ನಾಯಕರ ಅಭಿಪ್ರಾಯ. ಪಕ್ಷದ ಕಾರ್ಯಕರ್ತರು ಬಳ್ಳಾರಿ, ವಿಜಯಪುರ ಅಥವ ಹಾವೇರಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಈ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ' ಎಂದು ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಸ್ಪರ್ಧೆ ಬಗ್ಗೆ ಯಾರು ಏನು ಹೇಳಿದರು? ನೋಡೋಣ ಬನ್ನಿ...
'ಯಡಿಯೂರಪ್ಪ ಅವರು ಒಬ್ಬ ಸ್ಪರ್ಧಿ ಅಷ್ಟೆ'
'ಬಾಗಲಕೋಟೆಯ ಯಾವುದಾದದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಲಿದ್ದೇವೆ. ಬಾದಾಮಿ ಅಥವ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಅವರಿಗೆ ಹಿಂದೆ ಮನವಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮನವಿ ಮಾಡುತ್ತೇವೆ. ಯಡಿಯೂರಪ್ಪ ಇಲ್ಲಿ ಸ್ಪರ್ಧಿಸುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ನಮಗೆ ಅವರೂ ಒಬ್ಬ ಸ್ಪರ್ಧಿ' ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
'ನನ್ನ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ'
ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಯಡಿಯೂರಪ್ಪ ಸ್ಪರ್ಧೆ ಬಗ್ಗೆ ಹೇಳಿಕೆ ನೀಡಿದ್ದು, 'ಮುಧೋಳ ಮೀಸಲು ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ 6 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ನನ್ನ ಮತ ಕ್ಷೇತ್ರ ಬೀಳಗಿ ಅಥವ ಹಿಂದಿನ ಕ್ಷೇತ್ರ ಜಮಖಂಡಿಯಲ್ಲಿ ಬೇಕಾದರೂ ಸ್ಪರ್ಧೆ ಮಾಡಿ ಎಂದು ಕೋರುತ್ತೇನೆ' ಎಂದು ನಿರಾಣಿ ಹೇಳಿದ್ದಾರೆ.
'ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಮುಕ್ತರು'
'ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧಿಸುವಂತೆ ಯಡಿಯೂರಪ್ಪ ಅವರಿಗೆ ನಾವು ಆಹ್ವಾನ ನೀಡಿದ್ದೇವೆ. ತೇರೆದಾಳ ಸೇರಿದಂತೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರು ಮುಕ್ತರು' ಎಂದು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಹೇಳಿದ್ದಾರೆ.
'ಯಡಿಯೂರಪ್ಪ ಅಥವ ನರೇಂದ್ರ ಮೋದಿಯೇ ಬರಲಿ'
'ಯಡಿಯೂರಪ್ಪ ಬರಲಿ, ಪ್ರಧಾನಿ ನರೇಂದ್ರ ಮೋದಿಯೇ ಬರಲಿ, ಸಿದ್ದರಾಮಯ್ಯ ಅವರನ್ನು ಅಲ್ಲಿಂದ ಗೆಲ್ಲಿಸಿ ಕಳುಹಿಸುತ್ತೇವೆ. ಅಥಣಿಯಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಹಿಂದೆಯೇ ಆಹ್ವಾನ ನೀಡಿದ್ದೇವೆ' ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಯಡಿಯೂರಪ್ಪ ಹೇಳುವುದೇನು?
ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದು ನಾಯಕರ ಅಭಿಪ್ರಾಯವಾಗಿದೆ. ನಾನು ಈ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ' ಎಂದು ಹೇಳಿದರು.