ಜೆಡಿಎಸ್ ಸೇರಿದ ಅತೃಪ್ತ ಧನಂಜಯ್ ಕುಮಾರ್
ಬೆಂಗಳೂರು, ಮಾ.12 : ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯದೆ ಅತೃಪ್ತಗೊಂಡಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರಮಾಪ್ತ ಧನಂಜಯ್ ಕುಮಾರ್ ಜೆಡಿಎಸ್ ಸೇರಿದ್ದಾರೆ. ಮಂಗಳೂರು ಕ್ಷೇತ್ರದಿಂದ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಧನಂಜಯ್ ಕುಮಾರ್ ಪಕ್ಷ ಸೇರ್ಪಡೆ ಮತ್ತು ಚುನಾವಣೆಗೆ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿದರು. ದೇವೇಗೌಡರು ಕುಮಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಅನುಮತಿ ನೀಡಿದ್ದಾರೆ. [ಗೌಡರ ಭೇಟಿ ಮಾಡಿದ ಧನಂಜಯ್ ಕುಮಾರ್]
ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಬಿಎಸ್ ಯಡಿಯೂರಪ್ಪ ಪಕ್ಷಕ್ಕೆ ಮರಳಿದ್ದರೂ ಧನಂಜಯ್ ಕುಮಾರ್ ಅವರು ಪಕ್ಷ ಸೇರ್ಪಡೆಗೊಳ್ಳುವುದಕ್ಕೆ ಬಿಜೆಪಿ ನಾಯಕರು ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ಧನಂಜಯ್ ಕುಮಾರ್ ಜೆಡಿಎಸ್ ಸೇರಿದ್ದಾರೆ. ಧನಂಜಯ್ ಕುಮಾರ್ ಏಕೆ ಬಿಜೆಪಿ ಸೇರಲಿಲ್ಲ?
ಬಿಜೆಪಿ ನಾಯಕರ ವಿರೋಧ
ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯ್ ಕುಮಾರ್ ಬಿಜೆಪಿ ಸೇರ್ಪಡೆಗೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಹಳೆಯ ಎಲ್ಲಾ ನೋವುಗಳನ್ನು ಮರೆತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿದ್ದರು. ಆದರೆ, ಕೆಜೆಪಿ ಪಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ವಿ.ಧನಂಜಯ್ ಕುಮಾರ್ ಮತ್ತು ತುಮಕೂರು ಸಂಸದ ಜಿ.ಎಸ್.ಬಸವರಾಜ್ ಅವರ ಸ್ಥಿತಿ ಅತಂತ್ರವಾಗಿತ್ತು.
ಬಿಜೆಪಿ ನಾಯಕರ ಕೋಪಕ್ಕೆ ಕಾರಣವೇನು?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದ್ದ ಸಂದರ್ಭದಲ್ಲಿ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಇತರ ರಾಷ್ಟ್ರೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿ ಅಡ್ವಾಣಿ ವಿರೋಧ ಕಟ್ಟಿಕೊಂಡಿದ್ದರು. ಈ ಹೇಳಿಕೆ ರಾಜ್ಯದ ಬಿಜೆಪಿ ನಾಯಕರ ಕೆಂಗಣ್ಣಿಗೂ ಗುರಿಯಾಗಿತ್ತು. [ಕಿಕ್ ಬ್ಯಾಕ್ ಕಿರಿಕ್]
ದೇವೇಗೌಡರ ಭೇಟಿ
ಲೋಕಸಭಾ ಚುನಾವಣೆಯಾದ ತಕ್ಷಣ ವೇಣೂರು ಧನಂಜಯ್ ಕುಮಾರ್ ಜೆಡಿಎಸ್ ಪಕ್ಷ ಸೇರಲು ತೀರ್ಮಾನಿಸಿದ್ದರು. ಮಾರ್ಚ್ 7ರಂದು ಗೌಡರನ್ನು ಭೇಟಿ ಮಾಡಿ ಪಕ್ಷ ಸೇರುವ ಕುರಿತು ಚರ್ಚಿಸಿದ್ದರು. ಪಕ್ಷಕ್ಕೆ ಬಂದರೆ, ಮಂಗಳೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು.
ಯಡಿಯೂರಪ್ಪ ಪ್ರಯತ್ನ ವಿಫಲ
ತಮ್ಮ ಬೆಂಬಲಿಗರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕೊಡಿಸುವ ಬಿಎಸ್ ಯಡಿಯೂರಪ್ಪ ಅವರ ಪ್ರಯತ್ನ ಫಲ ನೀಡಿಲ್ಲ. ಬಿಜೆಪಿ ರಾಷ್ಟಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಈ ಕುರಿತು ಯಡಿಯೂರಪ್ಪ ಪತ್ರ ಬರೆದಿದ್ದರು. ಆದರೆ, ಬಿಜೆಪಿ ನಾಯಕರ ಒಪ್ಪಿಗೆ ದೊರೆಯುವ ಮೊದಲೇ ಧನಂಜಯ್ ಕುಮಾರ್ ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ.
ಮಂಗಳೂರು ಜೆಡಿಎಸ್ ಅಭ್ಯರ್ಥಿ
ಧನಂಜಯ್ ಕುಮಾರ್ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ನ ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.