ಬಿಆರ್ಎಸ್ ಜೊತೆ ಮೈತ್ರಿ; ಜೆಡಿಎಸ್ ಲೆಕ್ಕಾಚಾರವೇನು?
ಬೆಂಗಳೂರು, ಅಕ್ಟೋಬರ್ 06; "2023ರ ಕರ್ನಾಟಕ ಚುನಾವಣೆ, 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್ಎಸ್ ಒಟ್ಟಾಗಿ ಕೆಲಸ ಮಾಡಲಿವೆ. ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಸ್ಥಿತಿಯನ್ನು ರಾಜ್ಯದಲ್ಲೂ ತರಲು ನಾನು, ಕೆಸಿಆರ್ ನಿರ್ಧಾರ ಮಾಡಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಎಚ್. ಡಿ. ಕುಮಾರಸ್ವಾಮಿ ಜೆಡಿಎಸ್-ಬಿಆರ್ಎಸ್ ಮೈತ್ರಿ ಘೋಷಣೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕಿದೆ. ರಾಜಕೀಯ ವಲಯದಲ್ಲಿ ಈ ಕುರಿತು ಚರ್ಚೆಗಳು ಆರಂಭವಾಗಿವೆ.
20 ಜೆಡಿಎಸ್ ಶಾಸಕರ ಜೊತೆ ಹೈದರಾಬಾದ್ ತಲುಪಿದ ಹೆಚ್ಡಿಕೆ
ಜೆಡಿಎಸ್ 2023ರ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಶಾಸಕರಿಗೆ ಕಾರ್ಯಾಗಾರಗಳನ್ನು ಮಾಡಿದೆ. ಪಂಚರತ್ನ ಎಂಬ ಕಾರ್ಯಕ್ರಮ ಘೋಷಣೆ ಮಾಡಿ, ಜನರ ಮುಂದೆ ನವೆಂಬರ್ 1ರಿಂದ ಹೋಗಲು ತಯಾರಾಗಿದೆ. ಇದರ ನಡುವೆಯೇ ಹೈದರಾಬಾದ್ ಭೇಟಿ ಬಳಿಕ ಮೈತ್ರಿ ಘೋಷಣೆ ಮಾಡಲಾಗಿದೆ.
ಜೆಡಿಎಸ್-ಬಿಆರ್ಎಸ್ ಮೈತ್ರಿ ಚುನಾವಣೆಗೆ ಹೊಸ ದಿಕ್ಸೂಚಿ ನೀಡಲಿದೆ: ಎಚ್ಡಿ ಕುಮಾರಸ್ವಾಮಿ
ಜೆಡಿಎಸ್-ಬಿಆರ್ಎಸ್ ಮೈತ್ರಿ ಲೆಕ್ಕಾಚಾರಗಳೇನು?. ಎಚ್. ಡಿ. ಕುಮಾರಸ್ವಾಮಿ ರಾಜಕೀಯ ತಂತ್ರವೇನು?. ಈ ಮೈತ್ರಿಯಿಂದಾಗಿ ಕರ್ನಾಟಕ ರಾಜಕೀಯದಲ್ಲಿ ಆಗುವ ಬದಲಾವಣೆಗಳೇನು? ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ.
2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತಯಾರಿ- ನ.1 ರಿಂದ ಪಂಚರತ್ನ ಯಾತ್ರೆ
ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ
ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡಿ ಅನುಭವ ಹೊಂದಿರುವ ಎಚ್. ಡಿ. ಕುಮಾರಸ್ವಾಮಿ ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ದೂರದಲ್ಲಿ ಇಡಲು ಮುಂದಾಗಿದ್ದಾರೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಅಸಮಾಧಾನದ ಕಾರಣ ಕಾಂಗ್ರೆಸ್ ಜೊತೆ ಕೈ ಜೋಡಿಸದಿರಲು ತೀರ್ಮಾನಿಸಿದ್ದಾರೆ.
ಆದ್ದರಿಂದ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಪರಿಸ್ಥಿತಿ ನಿರ್ಮಾಣ ಮಾಡಲು ಬಯಸಿದ್ದಾರೆ. ಈ ಹಿನ್ನಲೆಯಲ್ಲಿಯೇ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಕುಮಾರಸ್ವಾಮಿ ಬಿಆರ್ಎಸ್ ಜೊತೆ ಮೈತ್ರಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು
2018ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದವರು ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡುವುದಾಗಿ ಜೆಡಿಎಸ್ಗೆ ಆಹ್ವಾನ ನೀಡಿದರು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಮೈತ್ರಿ ಸರ್ಕಾರದ ಆಹ್ವಾನ ನೀಡಿದ್ದ ಕಾಂಗ್ರೆಸ್ ನಾಯಕರೇ ಸರ್ಕಾರವನ್ನು ಟಾರ್ಗೆಟ್ ಮಾಡಿ ಮೈತ್ರಿ ಸರ್ಕಾರ ಪತಗೊಳ್ಳುವಂತೆ ಮಾಡಿದರು. ಸರ್ಕಾರದ ಪತನದ ಹಿಂದೆ ಸಿದ್ದರಾಮಯ್ಯ ಆಪ್ತ ಶಾಸಕರ ಕೈವಾಡವಿತ್ತು ಎಂಬುದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್ನಿಂದ ಆದ ಅನ್ಯಾಯವನ್ನು ಕುಮಾರಸ್ವಾಮಿ ಸುಲಭವಾಗಿ ಮರೆಯುವುದಿಲ್ಲ. 2023ರ ಚುನಾವಣೆ ಬಳಿಕ ಮೈತ್ರಿ ಸರ್ಕಾರದ ಮಾತೇ ಬೇಡ ಎಂಬ ಕಾರಣಕ್ಕೆ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ದೂರದಲ್ಲಿ ಇಟ್ಟಿದೆ. ರಾಷ್ಟ್ರ ರಾಜಕೀಯದಲ್ಲೂ ಅನುಕೂಲವಾಗಲಿ ಎಂಬ ಕಾರಣಕ್ಕೆ ಬಿಆರ್ಎಸ್ ಜೊತೆ ಮೈತ್ರಿ ಘೋಷಣೆ ಮಾಡಿದೆ.
ಕರ್ನಾಟಕದ ಗಡಿ ಭಾಗದ ಜಿಲ್ಲೆಗಳು
ಜೆಡಿಎಸ್ ಪಕ್ಷ 2023ರ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿಯೊಂದಿಗೆ ಚುನಾವಣಾ ತಯಾರಿ ಆರಂಭಿಸಿದೆ. ಆದರೆ ಇದಕ್ಕೆ ರಾಜ್ಯದ ವಿವಿಧ ಭಾಗದಲ್ಲಿ ಗೆಲವು ಸಾಧಿಸಬೇಕು, ಅದಕ್ಕಾಗಿ ಗಡಿ ಭಾಗದ ಜಿಲ್ಲೆಗಳತ್ತಲೂ ಗಮನಹರಿಸಬೇಕು.
ಆದರೆ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಎದುರಾಗಲಿದೆ. ಈ ಹಿನ್ನಲೆಯಲ್ಲಿ ಸಮಾನ ಮನಸ್ಕ ಪಕ್ಷಗಳ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ. ಇದರ ಭಾಗವಾಗಿಯೇ ಬಿಆರ್ಎಸ್ ಜೊತೆ ಜೆಡಿಎಸ್ ಮೈತ್ರಿ ಘೋಷಣೆ ಮಾಡಿದ್ದು, ಕರ್ನಾಟಕ-ತೆಲಂಗಾಣ ಗಡಿ ಭಾಗದ ಕ್ಷೇತ್ರಗಳನ್ನು ಬಿಆರ್ಎಸ್ಗೆ ಬಿಟ್ಟುಕೊಡುವ ನಿರೀಕ್ಷೆ ಇದೆ.
ರಾಷ್ಟ್ರ ರಾಜಕೀಯದಲ್ಲಿ ಸಹಕಾರ
ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಎಂದು ಘೋಷಣೆ ಮಾಡಲಾಗಿದೆ. ಇದು ಕೆ. ಚಂದ್ರಶೇಖರರಾವ್ ರಾಷ್ಟ್ರ ರಾಜಕೀಯಕ್ಕೆ ಮುನ್ನುಡಿಯಾಗಿದೆ.
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಜೆಡಿಎಸ್ ರಾಷ್ಟ್ರ ರಾಜಕೀಯದ ಮೇಲೂ ಕಣ್ಣಿಟ್ಟಿದೆ. ಆದ್ದರಿಂದ ಕೆಲ ಪಕ್ಷಗಳ ರಾಜಕೀಯ ಏಕಸ್ವಾಮ್ಯತೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬಿಆರ್ಎಸ್ ಜೊತೆ ಮೈತ್ರಿ ಘೋಷಣೆ ಮಾಡಿದೆ. ಸದ್ಯ ರಾಷ್ಟ್ರ ರಾಜಕೀಯದಲ್ಲಿ ಜೆಡಿಎಸ್ ಕೇವಲ ಎರಡು ಸ್ಥಾನಗಳನ್ನು ಹೊಂದಿದೆ.
ಬಿಜೆಪಿ, ಕಾಂಗ್ರೆಸ್ ಅಬ್ಬರ
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಅಬ್ಬರದ ನಡುವೆ ಜೆಡಿಎಸ್ ಬಿಆರ್ಎಸ್ ಜೊತೆ ಮೈತ್ರಿ ಘೋಷಣೆ ಮಾಡಿದೆ. ಮೇಕೆದಾಟು ಯೋಜನೆ, ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅಬ್ಬರ ನಡೆಸುತ್ತಿದೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶಗಳನ್ನು ಮಾಡುವ ಮೂಲಕ ಅಬ್ಬರ ಎಬ್ಬಿಸುತ್ತದೆ. ಆದ್ದರಿಂದ ಜೆಡಿಎಸ್ ಬಿಆರ್ಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಪ್ರಚಾರ ಆರಂಭಿಸುವ ಸೂಚನೆ ಕೊಟ್ಟಿದೆ.