ಶಿವರಾಮ್ ಹೆಬ್ಬಾರ್ ಪೋಸ್ಟ್ ನಕಲಿ, ಸಿಡಿ ಅಸಲಿ: ಬಿಕೆ ಹರಿಪ್ರಸಾದ್
ಬೆಂಗಳೂರು, ಮೇ 21: ಯಲ್ಲಾಪುರ ಶಾಸಕ ಅರೆಬೈಲ್ ಶಿವರಾಮ್ ಹೆಬ್ಬಾರ್ ಅವರಿಗೆ ಬಿಜೆಪಿ ನಾಯಕರಿಂದ ಕರೆ ಬಂದಿದ್ದು ನಿಜ. ಈ ಕುರಿತು ಬಿಡುಗಡೆ ಮಾಡಿದ ಸಿಡಿ ಅಸಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಸುಳ್ಳು ಸೃಷ್ಟಿ ಮಾಡುವ ಫ್ಯಾಕ್ಟರಿ ನಮ್ಮಲಿಲ್ಲ, ನಾಗ್ಪುರ ಯುನಿವರ್ಸಿಟಿ (ಆರ್.ಎಸ್.ಎಸ್ ಕೇಂದ್ರ ಕಚೇರಿ) ಯ ಸಂಸ್ಕೃತಿ ನಮ್ಮದಲ್ಲ. ನಾವು ಬಿಡುಗಡೆ ಮಾಡಿರುವ ಸಿಡಿ ನೈಜವಾದುದು. ಶಿವರಾಮ್ ಹೆಬ್ಬಾರ್ ಅವರಿಗೆ ಕರೆ ಬಂದಿರುವುದು ನಿಜ. ಅವರ ಫೇಸ್ಬುಕ್ ಪೋಸ್ಟ್ ಸುಳ್ಳು," ಎಂದಿದ್ದಾರೆ.
ಬಿಜೆಪಿಯಿಂದ ಆಮಿಷ : ಶಿವರಾಮ ಹೆಬ್ಬಾರ್ ಹೇಳಿದ್ದೇನು?
ಶನಿವಾರ ಶಿವರಾಮ್ ಹೆಬ್ಬಾರ್ ಅವರ ಪತ್ನಿಯವರಿಗೆ ಬಿಜೆಪಿ ನಾಯಕ, ಬಿ.ಎಸ್. ಯಡಿಯೂರಪ್ಪ ಆಪ್ತ ಬಿ.ಜೆ ಪುಟ್ಟಸ್ವಾಮಿ ಮತ್ತು ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕರೆ ಮಾಡಿದ್ದಾರೆ ಎನ್ನಲಾದ ಸಿಡಿಯನ್ನು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಬಿಡುಗಡೆ ಮಾಡಿದ್ದರು.
ಆದರೆ ಈ ಸಂಬಂಧ ಫೇಸ್ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದ ಅರೆಬೈಲ್ ಶಿವರಾಮ್ ಹೆಬ್ಬಾರ್, "ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು.
ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರದ್ದೂ ಪೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ಧಿಕ್ಕಾರ. ಈ ಆಡಿಯೋ ಟೇಪ್ ಫೇಕ್.... ಇದನ್ನು ಖಂಡಿಸುತ್ತೇನೆ," ಎಂದಿದ್ದರು. ಇದೀಗ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಈ ಪೋಸ್ಟ್ ಫೇಕ್ ಎಂದಿದ್ದಾರೆ. ಇನ್ನು ಆಮಿಷದ ಕರೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್, "ಅವರು (ಬಿಜೆಪಿಯವರು) ಸಚಿವ ಸ್ಥಾನವನ್ನೆಲ್ಲಾ ನೀಡುವುದಾಗಿ ನನಗೆ ಹೇಳಿದ್ದರು. ಹೆಬ್ಬಾರ್ ಬಗ್ಗೆ ನನಗೆ ಗೊತ್ತಿಲ್ಲ. ನಾನು ನನ್ನ ಬಗ್ಗೆ ಹೇಳಬಹುದು. ಯಡಿಯೂರಪ್ಪ, ಶ್ರೀರಾಮುಲು ಮತ್ತು ಮುರಳಿಧರ್ ರಾವ್ ನನ್ನ ಜೊತೆ ಮಾತನಾಡಿದ್ದರು," ಎಂದಿದ್ದಾರೆ.