5 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗೆ ಜೈಲು ಶಿಕ್ಷೆ ಕಾಯಂ..!
ಬೆಂಗಳೂರು, ಮಾ.1, ಹನ್ನೆರಡು ವರ್ಷಗಳ ಹಿಂದೆ ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಪದ್ಮನಾಭನಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಕಾಯಂಗೊಳಿಸಿದೆ.
ಭ್ರಷ್ಟಾಚಾರ ನಿಯತ್ರಣ ಕಾಯ್ದೆಯಡಿ ವಿಧಿಸಲಾಗಿದ್ದ ಜೈಲು ಶಿಕ್ಷೆ ಪ್ರಶ್ನಿಸಿ ಸಿಟಿಒ ಸಿ.ಪದ್ಮನಾಭ ಸಲ್ಲಿಸಿದ್ದ ಮೇಲ್ಮನವಿಯನ್ನು ಕಲಬುರ್ಗಿ ಪೀಠದಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರನ್ನು ಒಳಗೊಂಡ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ತನ್ನ ವಿರುದ್ಧವೇ ತನಿಖೆ ನಡೆಸಲು ಲೋಕಾಯುಕ್ತರಿಗೆ ಪತ್ರ ಬರೆದ ಕೋಟಾ ಶ್ರೀನಿವಾಸ ಪೂಜಾರಿ
ಇದರಿಂದಾಗಿ ಟ್ರಕ್ ಬಿಡುಗಡೆ ಮಾಡಲು 5 ಲಕ್ಷ ರೂ. ಲಂಚ ಪಡೆದು ಸಿಕ್ಕಿಬಿದಿದ್ದ ಆರೋಪಿ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸದೆ ಬೇರೆ ದಾರಿ ಇಲ್ಲದಂತಾಗಿದೆ.
ಭ್ರಷ್ಟಾಚಾರದ ಕೂಪ:
ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, "ವಾಣಿಜ್ಯ ತೆರಿಗೆ ಕಚೇರಿಯು ಭ್ರಷ್ಟಾಚಾರದ ಕೂಪಗಳಲ್ಲಿ ಒಂದಾಗಿದೆ ಎಂಬ ಖ್ಯಾತಿ ಪರಿಗಣಿಸಲ್ಪಟ್ಟಿದೆ. ಪ್ರತಿದಿನ ಬಡ ಮತ್ತು ಅಸಕ್ತ ಚಾಲಕರು ಕಾನೂನುಬಾಹಿರ ಬೇಡಿಕೆಗಳಿಗೆ ಸಿಲುಕಿ ಲಂಚ ನೀಡುತ್ತಲೇ ಇರುತ್ತಾರೆ. ಲಂಚಕೋರರ ದುರಾಸೆ ಹೆಚ್ಚಾದಾಗ ಮೇಲಿನ ಅಧಿಕಾರಿಗಳಿಗೆ ದೂರು ನೀಡುವ ಅಥವಾ ಲೋಕಾಯುಕ್ತರ ಮೊರೆ ಹೋಗುವ ಕೆಲಸವಾಗುತ್ತದೆ. ಹಲವು ಸಂದರ್ಭದಲ್ಲಿ ಸಂಧಾನದಲ್ಲಿ ಲಂಚಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಾಗುತ್ತದೆ" ಎಂದು ಹೇಳಿದೆ.
ಮಂಗಳೂರು; ವಿದ್ಯಾರ್ಥಿನಿಯಿಂದ ಲಂಚ, ಪ್ರೊಫೆಸರ್ಗೆ 5 ವರ್ಷ ಜೈಲು
ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಪೀಠ, "ಭ್ರಷ್ಟಾಚಾರವೆಸಗಲು ಹಲವು ಕಾರಣಗಳಿರಬಹುದು. ಆದರೆ ಮುಗ್ಧರನ್ನು ರಕ್ಷಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷಿಸುವುದು ನ್ಯಾಯಾಲಯಗಳ ಕರ್ತವ್ಯ ಮತ್ತು ಜವಾಬ್ದಾರಿ. ಹಾಗಾಗಿ ನಿಜವಾದ ಅಪರಾಧಿಗಳು ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಬಿಡಬಾರದು, ಅಂತಹ ಪ್ರಯತ್ನಗಳನ್ನು ಅಲ್ಲಲ್ಲೇ ಮಟ್ಟ ಹಾಕಲು ಪ್ರಯತ್ನಗಳನ್ನು ಮಾಡಬೇಕು" ಎಂದು ಆದೇಶಿಸಿದೆ.
"ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೆಲವೇ ಕೆಲವು ಪ್ರಕರಣಗಳು ಮಾತ್ರ ತಾರ್ಕಿತ ಅಂತ್ಯ ಕಾಣುತ್ತವೆ. ಆದರೆ ಬಹುತೇಕ ಪ್ರಕರಣಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ಪ್ರಾಸಿಕ್ಯೂಷನ್ ಅತ್ಯುತ್ಸಾಹದಿಂದ ಹೆಜ್ಜೆ ಇಟ್ಟರೂ ಅವರಿಗೆ ದೂರುದಾರರು ಮತ್ತು ಸಾಕ್ಷಿಗಳಿಂದ ಅಗತ್ಯ ಬೆಂಬಲ ದೊರೆಯದೇ ಆರೋಪಿಗಳು ಖುಲಾಸೆಯಾಗುತ್ತಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ನಾನಾ ಕಲಂಗಳಡಿ ದಾಖಲಿಸಿರುವ ಪ್ರಕರಣಗಳನ್ನು ರಾಷ್ಟ್ರೀಯ ಅಪರಾಧ ಬ್ಯುರೊ ಪ್ರಕಟಿಸಿರುವ ಪಟ್ಟಿಯಲ್ಲಿ ನೋಡಿದರೆ ನಿರಾಸೆಯಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ;
ವಿಜಯಪುರ ಜಿಲ್ಲೆಯ ಧುಲ್ಖೇಡ್ ಚೆಕ್ ಪೋಸ್ಟ್ ಬಳಿ 40 ಲಕ್ಷ ರೂಪಾಯಿ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಲಾರಿ ಬಿಡುಗಡೆ ಮಾಡಲು ವಾಣಿಜ್ಯ ತೆರಿಗೆ ಅಧಿಕಾರಿಗಳು 2008ರ ಡಿಸೆಂಬರ್ ನಲ್ಲಿ 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಸ್ಟೀಲ್ ಕಂಪನಿಯ ಯೋಜನಾ ವ್ಯವಸ್ಥಾಪಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲಂಚದ ಬೇಡಿಕೆ ಐದು ಲಕ್ಷ ರೂಪಾಯಿಗಳಿಗೆ ಇಳಿಸಲಾಗಿತ್ತು.
ಸಿಟಿಒ ಪದ್ಮನಾಭ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ನೇರವಾಗಿ ಸಿಕ್ಕಿ ಬಿದ್ದಿದ್ದರು. 2015ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸ್ಥಾಪಿಸಲಾಗಿರುವ ವಿಜಯಪುರದ ವಿಶೇಷ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೇ ಸೆಕ್ಷನ್ 7ರ ಅಡಿ ಎರಡೂವರೆ ವರ್ಷ ಜೈಲು ಶಿಕ್ಷೆ ಮತ್ತು ಸೆಕ್ಷನ್ 13(1) (ಡಿ) ಅಡಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಎರಡೂ ಶಿಕ್ಷಗಳು ಒಟ್ಟಾಗಿ ಜಾರಿಯಾಗಲಿವೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪದ್ಮನಾಭ ಹೈಕೋರ್ಟ್ ಮೊರೆ ಹೋಗಿದ್ದರು.