Breaking: ಪಠ್ಯಪುಸ್ತಕರ ಪರಿಷ್ಕರಣೆ ವಿವಾದ: ಮಹತ್ವದ ಸಭೆ ಕರೆದ ಸಿಎಂ
ಬೆಂಗಳೂರು, ಜೂ. 21: ಪಠ್ಯಪುಸ್ತಕ ವಿವಾದ ಇನ್ನೂ ಬಗೆಹರಿದಿಲ್ಲ. ರೋಹಿತ್ ಚಕ್ರತೀರ್ಥ ಪರಿಷ್ಕೃತ ಪಠ್ಯಗಳನ್ನು ತಡೆಹಿಡಿದು, ಬರಗೂರು ರಾಮಚಂದ್ರಪ್ಪ ಅವರಿಂದ ಈ ಹಿಂದೆ ಪರಿಷ್ಕೃತಗೊಂಡ ಪಠ್ಯಗಳನ್ನೇ ಸರಬರಾಜು ಮಾಡಿ ಎಂಬ ಒತ್ತಡ ಸರ್ಕಾರದ ಮೇಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ (ಜೂ.22) ಮಹತ್ವದ ಸಭೆ ಕರೆದಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನಾಳೆ ಶಿಕ್ಷಣ ಇಲಾಖೆಯ ಮುಖ್ಯಸ್ಥರನ್ನು ಹಾಗೂ ಸಚಿವರನ್ನು ಕರೆಯಲಾಗುತ್ತಿದೆ ಎಂದು ಅವರು ಮಂಗಳವಾರ ಪತ್ರಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರಿಗೆ ಅಪಮಾನಿಸಿದ ವ್ಯಕ್ತಿಯಿಂದ ಪರಿಷ್ಕೃತಗೊಂಡಂತಹ ಪಠ್ಯಗಳನ್ನು ಈ ಕೂಡಲೇ ತಡೆಹಿಡಿದು ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿಬೇಕು ಮತ್ತು ಈ ಎಲ್ಲಾ ಅವಾಂತರಗಳಿಗೆ ಕಾರಣದಾರದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದವು. ಪಕ್ಷಾತೀತವಾಗಿ ನಡೆದ ಈ ಕಾರ್ಯಕ್ರಮ ಈಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈಗ ಮತ್ತೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ದೇವೇಗೌಡರಿಗೆ ಗೌರವಪೂರ್ವಕ ಉತ್ತರ ನೀಡಲಾಗುವುದು:
ಈ ಮಧ್ಯೆ ರಾಜ್ಯ ಸರ್ಕಾರ ಮರು ಪರಿಷ್ಕರಣೆ ಮಾಡಿದ ಪಠ್ಯ ಪುಸ್ತಕಗಳನ್ನು ಹಿಂಪಡೆದು, ಚಿಂತಕ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಎಲ್ಲ 27 ಸಮಿತಿಗಳು ಪರಿಷ್ಕರಿಸಿದ್ದ ಹಳೆಯ ಪಠ್ಯವನ್ನೆ ಮುಂದುವರಿಸುವಂತೆ ಒತ್ತಾಯಸಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ಮಂಗಳವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿಗಳು ಮತ್ತು ಹಿರಿಯರಾದ ಹೆಚ್.ಡಿ. ದೇವೇಗೌಡರು ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಬರೆದಿರುವ ಪತ್ರಕ್ಕೆ ಗೌರವಪೂರ್ವಕವಾಗಿ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದ ಸಭೆಯಲ್ಲಿ ಮಾಜಿ ಪ್ರಧಾನಿಗಳ ಪತ್ರದ ಸಾರವನ್ನು ಅವಲೋಕಿಸಲಾಗುವುದು. ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ತೀರ್ಮಾನಿಸಿ ಉತ್ತರ ನೀಡಲಾಗುವುದು ಎಂದು ಸಿಎಂ ಹೇಳಿದರು.