ಸೆಪ್ಟೆಂಬರ್ ಅಂತ್ಯಕ್ಕೆ 16.35 ಲಕ್ಷ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ - ಖಾದರ್
ಬೆಂಗಳೂರು, ಆಗಸ್ಟ್ 29: ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ 16.35 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದರು.
ಶೋಭಾ ಅಕ್ಕಿ ಭಿಕ್ಷೆಗಾಗಿ ದಿನವೂ ತೆರಳಲಿ : ಸಚಿವ ಯು.ಟಿ ಖಾದರ್ ವ್ಯಂಗ್ಯ
ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, "ಈಗಾಗಲೇ ಒಂದು ಲಕ್ಷ ಫಲಾನುಭವಿಗಳಿಗೆ ಪಡಿತರ ಕಾರ್ಡುಗಳನ್ನು ತಲುಪಿಸಲಾಗಿದೆ. ಇನ್ನು 11,84,000 ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅವರಲ್ಲಿ 6.5 ಲಕ್ಷ ಅರ್ಜಿಗಳನ್ನು ಡಾಟಾ ಎಂಟ್ರಿ ಮಾಡಲಾಗಿದೆ. ಎಲ್ಲಾ ಸೇರಿ ಒಟ್ಟು ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಒಟ್ಟು 16.35 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು," ಎಂದು ಹೇಳಿದರು.
ಪಡಿತರ ಚೀಟಿಗಳನ್ನು ಪರಿಣಾಮಕಾರಿಯಾಗಿ ವಿತರಿಸುವ ಸಂಬಂಧ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆನ್ಲೈನ್ ಮೂಲಕ ಪಡಿತರ ಚೀಟಿ ಬಯಸಿ ನೊಂದಾಯಿಸಿಕೊಂಡಿರುವ ಫಲಾನುಭವಿಗಳಿಗೆ ಅವರ ಮನೆಗೆ ಪಡಿತರ ಚೀಟಿ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
"ತುರ್ತು ಸಂದರ್ಭಗಳಲ್ಲಿ ಬೇಗ ಪಡಿತರ ಚೀಟಿ ಬೇಕಾದಲ್ಲಿ ಅಂತಹ ಫಲಾನುಭವಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಅಗತ್ಯ ದಾಖಲಾತಿ ನೀಡಬಹುದು. ತಕ್ಷಣ ಆಹಾರ ಮತ್ತು ನಾಗರೀಕ ಇಲಾಖೆಯ ಉಪ ನಿರ್ದೇಶಕರು ಪರಿಶೀಲನೆ ನಡೆಸಿ ಪಡಿತರ ಚೀಟಿ ನೀಡುತ್ತಾರೆ," ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 20,402 ನ್ಯಾಯಬೆಲೆ ಅಂಗಡಿಗಳಿದ್ದು ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪಾಯಿಂಟ್ ಆಫ್ ಸ್ಕೇಲ್ ಮಿಷನನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ 10 ಸಾವಿರ ನ್ಯಾಯಬೆಲೆ ಅಂಗಡಿಗಳು ಈ ಮಿಷನನ್ನು ಅಳವಡಿಸಿಕೊಂಡಿವೆ.
ಅಂತಹ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ 87 ರೂ. ನಂತೆ ಪ್ರೋತ್ಸಾಹ ಧನ ನೀಡಲಾಗುವುದು. ಪಾಯಿಂಟ್ ಆಫ್ ಸ್ಕೇಲ್ ಮಿಷನ್ ಅಳವಡಿಸಿಕೊಳ್ಳುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಾಗುವ ಸಣ್ಣಪುಟ್ಟ ಲೋಪಗಳನ್ನು ಕಂಡು ಹಿಡಿಯಲು ಸಾಧ್ಯವಿದೆ, ಎಂದು ಸಚಿವ ಯು.ಟಿ. ಖಾದರ್ ಅವರು ತಿಳಿಸಿದರು.